ಅಂಬಿ ಹಬ್ಬಕ್ಕೆ ಕೊರೊನಾ ಅಡ್ಡಗಾಲು: ಸುಮಲತಾ ವಿನಮ್ರ ಮನವಿ
ನಾಳೆ (ಮೇ 29) ಅಂಬರೀಶ್ ಹುಟ್ಟುಹಬ್ಬ. ಅಂಬರೀಶ್ ಅಭಿಮಾನಿಗಳ ಪಾಲಿಗೆ ಹಬ್ಬದ ದಿನ. ಆದರೆ ಕೊರೊನಾ ಕರಿನೆರಳು ಇರುವ ಕಾರಣ ಅಂಬರೀಶ್ ಹುಟ್ಟುಹಬ್ಬದ ಅದ್ಧೂರಿ ಆಚರಣೆ ಇರುವುದಿಲ್ಲ.
ಅಂಬರೀಶ್ ಇದ್ದಿದ್ದರೆ ನಾಳೆಗೆ 68 ವರ್ಷವಾಗಿರುತ್ತಿತ್ತು. ಅಂಬಿ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಬಗೆ-ಬಗೆ ಕಾರ್ಯಕ್ರಮಗಳ ಆಯೋಜನೆ ಮಾಡಿರುತ್ತಿದ್ದರು. ಮಂಡ್ಯದಲ್ಲಂತೂ ಹಬ್ಬವೇ ನಡೆದಿರುತ್ತಿತ್ತು. ಆದರೆ ಕೊರೊನಾ ಲಾಕ್ಡೌನ್ ಇರುವ ಯಾವುದೇ ಸಾರ್ವಜನಿಕ ಆಚರಣೆ ಮಾಡುವಂತಿಲ್ಲ.
ಈ ಬಗ್ಗೆ ಅಂಬಿ ಪತ್ನಿ, ಸಂಸದೆ ಸುಮಲತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ''ನಾಳೆ ನಮ್ಮೆಲ್ಲರ ಪ್ರೀತಿಯ ಅಂಬರೀಷ್ ಅವರ 69ನೇ ಜನ್ಮ ಜಯಂತಿ ಸಂಭ್ರಮದಿಂದ ಆಚರಿಸಲು ನೀವೆಲ್ಲರೂ ಕಾಯುತ್ತಿರುತ್ತೀರಿ. ಆದರೆ ಕರೊನಾ ತಡೆಯಲು ದೇಶವೆಲ್ಲ ಶ್ರಮಿಸುತ್ತಿರುವಾಗ ನಾವು ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡವೆಂದು ನನ್ನ ವಿನಮ್ರ ಮನವಿ. ಈ ವರ್ಷ ಅವರನ್ನು ನಮ್ಮ ಮನಸ್ಸು ಮನೆಗಳಲ್ಲೇ ಆಚರಿಸೋಣ'' ಎಂದಿದ್ದಾರೆ.

ಮತ್ತೊಂದು ಪೋಸ್ಟ್ನಲ್ಲಿ, 'ಅಂಬಿ ಬದುಕಿದ್ದಿದ್ದರೆ ನಾಳೆ 68 ವರ್ಷ ವಯಸ್ಸಾಗಿರುತ್ತಿತ್ತು. ಆದರೆ ವಿಧಿ ಬೇರೆಯೇ ಎಣಿಸಿತ್ತು ಅಂಬಿ ನಮ್ಮ ಮನಗಳಲ್ಲಿ ಶಾಶ್ವತವಾಗಿ ಇರುವಂತೆ ಆಗಿದೆ. ಬ್ರಹ್ಮಾಂಡಕ್ಕಿಂತಲೂ ವಿಶಾಲ ಹೃದಯ ಹೊಂದಿದ್ದ ಅಂಬರೀಶ್ ಜೊತೆಗೆ ಜೀವನದಲ್ಲಿ ಕೆಲವು ಹೆಜ್ಜೆಗಳನ್ನಾದರು ಜೊತೆಯಲ್ಲಿ ನಡೆಯುವ ಅವಕಾಶ ಸಿಕ್ಕಿದ್ದ ನಾನು ಧನ್ಯ' ಎಂದಿದ್ದಾರೆ ಸುಮಲತಾ.
Recommended Video
1952 ಮೇ 29 ರಂದು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯಲ್ಲಿ ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಆಗಿ ಹುಟ್ಟಿದ ಅಂಬರೀಶ್ ಆ ನಂತರ 5 ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿದ್ದುಕೊಂಡು ಸಿನಿರಸಿಕರ ಮನತಣಿಸಿದರು. ರಾಜಕೀಯದಲ್ಲಿಯೂ ಯಶಸ್ಸುಗಳಿಸಿ ಜನಸೇವೆ ಮಾಡಿದರು.


Click it and Unblock the Notifications











