ಅಂಬರೀಶ್ ಗೆ ಸಿಂಗಪುರ ಚಿಕಿತ್ಸೆ ಸದ್ಯಕ್ಕೆ ಕ್ಯಾನ್ಸಲ್
ನಟ, ವಸತಿ ಸಚಿವ ಅಂಬರೀಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರಕ್ಕೆ ಕರೆದೊಯ್ಯಲಾಗುತ್ತದೆ ಎಂಬ ವದಂತಿಗಳಿಗೆ ನವದೆಹಲಿ ಏಮ್ಸ್ ನ ಖ್ಯಾತ ಶ್ವಾಸಕೋಶ ತಜ್ಞ ಡಾ.ರಣದೀಪ್ ಗುಲೇರಿಯಾ ಅವರು ಇಂದು ತೆರೆ ಎಳೆದರು. ಶುಕ್ರವಾರ (ಫೆ.28) ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಅಂಬರೀಶ್ ಅವರಿಗೆ ಸಿಂಗಪುರದಲ್ಲಿ ಚಿಕಿತ್ಸೆ ಕೊಡಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಅವರ ಆರೋಗ್ಯ ಈಗ ಸ್ಥಿರವಾಗಿದ್ದು, ಚೇತರಿಕೆ ಕಂಡುಬಂದಿದೆ. ಈಗವರು ಆರಾಮವಾಗಿದ್ದಾರೆ. ಆತಂಕಪಡುವ ಅಗತ್ಯವಿಲ್ಲ. ಹಾಗೆಯೇ ಅವರ ಆರೋಗ್ಯದ ಬಗ್ಗೆ ಹಬ್ಬುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸಿಕೊಂಡರು. [ಅಂಬರೀಶ್ ಇತ್ತೀಚೆಗಿನ ಕಾರ್ಯಕ್ರಮದ ಮೆಲುಕು]
ಅವರ ರಕ್ತದ ಒತ್ತಡ, ಕಿಡ್ನಿ ಎಲ್ಲವೂ ನಾರ್ಮಲ್ ಆಗಿವೆ. ಶ್ವಾಸಕೋಶದ ಸೋಂಕು ಗಣನೀಯವಾಗಿ ಕಡಿಮೆಯಾಗಿದೆ. ಕೆಲ ದಿನಗಳಲ್ಲಿ ವೆಂಟಿಲೇಟರ್ ತೆಗೆಯಲಾಗುತ್ತದೆ. ಆದರೆ ಅವರ ಶ್ವಾಸಕೋಶಗಳು ದುರ್ಬಲವಾಗಿವೆ ಎಂದು ಎರಡು ತಾಸು ಅಂಬರೀಶ್ ಅವರ ಆರೋಗ್ಯವನ್ನು ಪರೀಕ್ಷಿಸಿದ ಅವರು ವಿವರ ನೀಡಿದರು.ಇನ್ನೂ ಕೆಲವು ವಾರಗಳ ಕಾಲ ಅಂಬರೀಶ್ ಅವರಿಗೆ ವಿಶ್ರಾಂತಿ ಬೇಕಾಗಿದೆ ಎಂದು ವಿಕ್ರಂ ಆಸ್ಪತ್ರೆ ವೈದ್ಯರು ವಿವರ ನೀಡಿದರು. ಏತನ್ಮಧ್ಯೆ ಗೃಹ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಂಬರೀಶ್ ಆರೋಗ್ಯ ವಿಚಾರಿಸಿದರು. (ಏಜೆನ್ಸೀಸ್)


Click it and Unblock the Notifications












