ಮಾಲಾಶ್ರೀ ನಟನೆ ಬಗ್ಗೆ ಅಂಬಿ, ಶ್ರುತಿ, ಉಮಾಶ್ರೀ ಮಾಡಿದ ಕಾಮೆಂಟ್ ಏನು?
25 ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ 'ಕನಸಿನ ರಾಣಿ' ಆಗಿ ಮೆರೆದ ನಟಿ ಮಾಲಾಶ್ರೀಗೆ 'ನಟನೆ ಬರಲ್ಲ' ಅಂತ ನೃತ್ಯ ಸಂಯೋಜಕ ಕಮ್ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ನಿರ್ಮಾಪಕ ಕೆ.ಮಂಜು ಅವಮಾನ ಮಾಡಿ ವಿವಾದದಲ್ಲಿ ಸಿಲುಕಿದ್ದಾರೆ.
ತಮಗಾದ ಅಪಮಾನವನ್ನು ಮಾಧ್ಯಮ ಹಾಗೂ ಪತ್ರಿಕಾ ಮಿತ್ರರ ಮುಂದೆ ಬಾಯ್ಬಿಟ್ಟು ನಟಿ ಮಾಲಾಶ್ರೀ ಕಣ್ಣೀರು ಹಾಕಿದ್ದಾರೆ. [ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?]
ಕೂಡಲೆ ನಟಿ ಮಾಲಾಶ್ರೀ ಪರ ರೆಬೆಲ್ ಸ್ಟಾರ್ ಅಂಬರೀಶ್ ಬ್ಯಾಟಿಂಗ್ ಮಾಡಿದ್ದಾರೆ. ಮಾಲಾಶ್ರೀಗೆ 'ನಟನೆ ಮಾಡೋಕೆ ಬರಲ್ಲ' ಎಂದವರ ವಿರುದ್ಧ ಅಂಬರೀಶ್ ಹರಿಹಾಯ್ದಿದ್ದಾರೆ. [ಮಾಲಾಶ್ರೀ ಆಪಾದನೆಗಳಿಗೆ ಉತ್ತರಿಸಲು ಕೆ.ಮಂಜು ಸಿದ್ಧ.!]
ಜೊತೆಗೆ ನಟಿ ಶ್ರುತಿ, ಉಮಾಶ್ರೀ, ಭವ್ಯ ಸೇರಿದಂತೆ ಕನ್ನಡ ಚಿತ್ರರಂಗದ ನಟಿಯರು ಮಾಲಾಶ್ರೀ ಪರ ದನಿಗೂಡಿಸಿದ್ದಾರೆ. ಬನ್ನಿ, ಮಾಲಾಶ್ರೀ ಬಗ್ಗೆ ಯಾರ್ಯಾರು ಏನೇನು ಹೇಳಿದ್ದಾರೆ ಅಂತ ನೋಡೋಣ, ಕೆಳಗಿರುವ ಸ್ಲೈಡ್ ಗಳಲ್ಲಿ.....

ರೆಬೆಲ್ ಸ್ಟಾರ್ ಅಂಬರೀಶ್
''ನಾಯಕರಿಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ನಟಿ ಮಾಲಾಶ್ರೀ. ಅವರಿಗೆ ನಟನೆ ಬರುವುದಿಲ್ಲವೆಂದು ಯಾರಾದ್ರೂ ಹೇಳಿದ್ರೆ, ಅದು ತಪ್ಪು. ನಟನೆ ಗೊತ್ತಿಲ್ಲದೇ, ಮಾಲಾಶ್ರೀ ಕಳೆದ 25 ವರ್ಷಗಳಿಂದ ಅಷ್ಟು ಚಿತ್ರಗಳಲ್ಲಿ ನಟಿಸಿದಳೇ? ಅಂತಹ ಮಾತುಗಳು ಕನ್ನಡ ಚಿತ್ರರಂಗಕ್ಕೆ ಶೋಭೆ ತರುವುದಿಲ್ಲ'' - ಅಂಬರೀಶ್

ನಿರ್ಮಾಪಕ ರಾಮು
''ಉಪ್ಪು ಹುಳಿ ಖಾರ' ಚಿತ್ರಕ್ಕೆ ಸಂಬಂಧ ಇಲ್ಲ ಅಂದಮೇಲೆ, ಕೆ.ಮಂಜು ಯಾಕೆ ಮಾಲಾಶ್ರೀ ಪರ್ಫಾಮೆನ್ಸ್ ಬಗ್ಗೆ ಮಾತನಾಡಬೇಕು? ಅದರ ಬಗ್ಗೆ ಅವರು ಕ್ಲಾರಿಟಿ ಕೊಡಬೇಕು. ಕೆ.ಮಂಜು ನಮಗೆ ಸಂಬಂಧಿ. ನಾವು ಒಬ್ಬ ಕೂಲಿಯವರಿಗೂ ಮರ್ಯಾದೆ ಕೊಡುತ್ತೇವೆ. ಈ ತರಹ ನಾವು ಯಾರ ಬಗ್ಗೆ ಕೂಡ ಮಾತನಾಡುವುದಿಲ್ಲ''

ಕೂತು ಮಾತನಾಡಬಹುದಿತ್ತು!
''ಮಾಲಾಶ್ರೀ ಲೇಟ್ ಆಗಿ ಬರ್ತಾರೆ ಅಂದ್ರೆ, ನಮ್ಮ ಹತ್ರ ಕೂತು ಮಾತನಾಡಬಹುದಿತ್ತು. ಅದು ಬಿಟ್ಟು ಪರ್ಫಾಮೆನ್ಸ್ ಚೆನ್ನಾಗಿಲ್ಲ ಅಂದ್ರೆ ಏನರ್ಥ?'' - ರಾಮು, ನಿರ್ಮಾಪಕ, ಮಾಲಾಶ್ರೀ ಪತಿ

ಹಿರಿಯ ನಟಿ ಭವ್ಯ
''ಮಾಲಾಶ್ರೀ ಬೇಜಾರು ಮಾಡಿಕೊಳ್ಳಬಾರದು. ಅವರು ಟ್ಯಾಲೆಂಟೆಡ್ ಆರ್ಟಿಸ್ಟ್. ಹೀರೋಯಿನ್ ಆಗಿ ಅಲ್ಲ, ಒಂದು ಹೀರೋ ಆಗಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದವರು ಮಾಲಾಶ್ರೀ. ಯಾರೋ ಏನೋ ಅಂದ್ರು ಅಂತ ಮಾಲಾಶ್ರೀ ತಲೆ ಕೆಡಿಸಿಕೊಳ್ಳಬಾರದು. ಇಮ್ರಾನ್ ಹೇಳಿರುವುದನ್ನ ನೋಡಿದ್ರೆ, ನನಗೆ ನಗು ಬರುತ್ತಿದೆ. ಮಾಲಾಶ್ರೀಗೆ ನಟನೆ ಬರಲ್ಲ ಅಂದ್ರೆ ಅದು ದೊಡ್ಡ ಜೋಕ್. ಕೆ.ಮಂಜು ಅವರು ತಮ್ಮ ಮಾತನ್ನ ವಾಪಸ್ ತೆಗೆದುಕೊಂಡರೆ ಒಳ್ಳೆಯದ್ದು ಅನ್ಸುತ್ತೆ''

ಹಿರಿಯ ನಟಿ ಶ್ರುತಿ
''ನಮ್ಮ ತಂದೆ ಮಾಲಾಶ್ರೀ ಅವರ 'ನಂಜುಂಡಿ ಕಲ್ಯಾಣ' ಸಿನಿಮಾ ನೋಡಿ, ನನ್ನ ಮಗಳು ಹೀರೋಯಿನ್ ಆದರೆ, ಮಾಲಾಶ್ರೀ ತರಹ ಆಗಬೇಕು ಅಂತ ನನ್ನನ್ನ ಇಂಡಸ್ಟ್ರಿಗೆ ಕರೆದುಕೊಂಡು ಬಂದರು. ನಾವೆಲ್ಲಾ ಅವರ ಆಕ್ಟಿಂಗ್ ನೋಡಿ ಬೆಳೆದವರು. ಅಂತಹ ದೊಡ್ಡ ಕಲಾವಿದೆ ಅವರು''

ಮಾಲಾಶ್ರೀ ನಾಯಕಿ ಅಲ್ಲ, 'ನಾಯಕ'
''ಸಿಂಧೂರ ತಿಲಕ' ಅಂತ ಸಿನಿಮಾದಲ್ಲಿ ನಾನು ಮಾಲಾಶ್ರೀ ಜೊತೆ ನಟಿಸಿದ್ದೇನೆ. ಅಂದಿನ ಕಾಲಕ್ಕೆ ಅವರು ದಿನಕ್ಕೆ ನಾಲ್ಕು ಸಿನಿಮಾದಲ್ಲಿ ನಟಿಸುತ್ತಿದ್ದರು. ನಮ್ಮ ಸಿನಿಮಾಗೆ ನಾಲ್ಕು ಗಂಟೆ ಕಾಲ್ ಶೀಟ್ ಕೊಡ್ತಿದ್ರು. ಅವರು ಬಂದ್ರೆ, ಅವರ ಹಿಂದೆ ಅಭಿಮಾನಿಗಳ ದಂಡೇ ಬರ್ತಿತ್ತು. ನಾಯಕಿಗೆ ಅಂತಹ ದೊಡ್ಡ ಫ್ಯಾನ್ ಫಾಲೋವಿಂಗ್ ಇರೋದು ನಾನು ಇದುವರೆಗೂ ನೋಡಿಲ್ಲ. ಮಾಲಾಶ್ರೀ ನಾಯಕಿ ಅಲ್ಲ, ನಾಯಕ ಅವರು. ಅಂತಹವರ ಜೊತೆ ಇಷ್ಟು ಚೀಪ್ ಆಗಿ ನಡೆದುಕೊಳ್ಳಬಾರದಿತ್ತು'' - ನಟಿ ಶ್ರುತಿ

ನಟಿ ಉಮಾಶ್ರೀ
''ನನಗೆ ಬಹಳ ಬೇಸರ ಆಯ್ತು. ಮಾಲಾಶ್ರೀ ಕಣ್ಣೀರು ಹಾಕಿ, ಮನಸ್ಸಿಗೆ ಬೇಸರ ಮಾಡಿಕೊಳ್ಳಬಾರದು. ಮಾಲಾಶ್ರೀ ಒಳ್ಳೆಯ ಕಲಾವಿದೆ. ಇಮ್ರಾನ್ ಹಾಗೆಲ್ಲಾ ಯಾಕೆ ಮಾತನಾಡಿದ್ರು ಅನ್ನೋದು ಗೊತ್ತಾಗುತ್ತಿಲ್ಲ. ಪಾತ್ರಕ್ಕೆ ಆಯ್ಕೆ ಮಾಡುವಾಗಲೇ ಯೋಚನೆ ಮಾಡಬೇಕಿತ್ತು''

ನನಗೂ ಅವಮಾನ ಆಗಿದೆ
''ಕಲಾ ಜಗತ್ತಿಗೆ ಅವಮಾನ ಮಾಡಿದ ಹಾಗೆ ಆಗಿದೆ. ಮಾಲಾಶ್ರೀ ಸೀನಿಯರ್ ಆಕ್ಟರ್. ಅವರನ್ನ ನಡೆಸಿಕೊಳ್ಳುವ ರೀತಿ ಇದಲ್ಲ. ನನಗೂ ಸಹ ಇಂತಹ ಅವಮಾನಗಳು ಹಲವು ಬಾರಿ ಆಗಿದೆ. ನಾವು ಎಲ್ಲವನ್ನೂ ಎದುರಿಸಬೇಕು. ಗಟ್ಟಿ ಮನಸ್ಸು ಮಾಡಿಕೊಳ್ಳಬೇಕು. ಅಳಬಾರದು'' - ಉಮಾಶ್ರೀ, ನಟಿ

ದುಡ್ಡಿಗಾಗಿ ಮಾಲಾಶ್ರೀ ನಟಿಸುವುದಿಲ್ಲ!
''ದುಡ್ಡಿಗಾಗಿ ಮಾಲಾಶ್ರೀ ನಟಿಸುವುದಿಲ್ಲ. ನಟಿಯಾಗಿ ಎಷ್ಟೋ ಜನಕ್ಕೆ ಅವರು ಸಹಾಯ ಮಾಡಿದ್ದಾರೆ. ಮಾಲಾಶ್ರೀ ಅವರ ಸಹಾಯ ಮನೋಭಾವ ನಾನೂ ನೋಡಿದ್ದೀನಿ. ಅಂತವರಿಗೆ ಹೇಗೆ ಹೇಳುವುದು ಸರಿಯಲ್ಲ'' - ಉಮಾಶ್ರೀ, ನಟಿ

ನಾನು ಕುಸಿದು ಬಿದ್ದೆ!
''ಇಮ್ರಾನ್ ಸರ್ದಾರಿಯಾ ಕಳುಹಿಸಿದ ಮೆಸೇಜ್ ನೋಡಿ ನಾನು ಕುಸಿದು ಬಿದ್ದೆ. ಈಗಲೂ ನಾನು ಅದರಿಂದ ಹೊರಗಡೆ ಬರಲು ಸಾಧ್ಯವಾಗುತ್ತಿಲ್ಲ. ಮನಸ್ಸಿಗೆ ತುಂಬಾ ನೋವಾಗಿದೆ'' - ಮಾಲಾಶ್ರೀ, ನಟಿ

ರಾಜ್ ಕುಮಾರ್ ರವರಿಗೆ ಅವಮಾನ ಮಾಡಿದ ಹಾಗೆ!
''ರಾಜ್ ಕುಮಾರ್ ಅವರಿಗೆ ಅವಮಾನ ಮಾಡಿದ ಹಾಗಾಗಿದೆ. ಅವರ ಬ್ಯಾನರ್ ನಲ್ಲಿ ನಾನು ಹೆಚ್ಚು ಸಿನಿಮಾ ಮಾಡಿದ್ದೀನಿ. ಅವರು ನನ್ನನ್ನ ಒಳ್ಳೆ ನಟಿ ಅಂದಿದ್ದಾರೆ. ಅವರಿಂದಲೇ ನಾನು ಚಿತ್ರರಂಗಕ್ಕೆ ಬಂದಿದ್ದು. ಇವತ್ತು ನನ್ನ ಆಕ್ಟಿಂಗ್ ಬಗ್ಗೆ ಮಾತನಾಡಿ, ರಾಜ್ ಕುಮಾರ್ ಸರ್ ಗೆ ಅವಮಾನ ಮಾಡಿದ ಹಾಗಾಗಿದೆ'' - ಮಾಲಾಶ್ರೀ, ನಟಿ

ನನ್ನಿಂದ ಪ್ರಾಜೆಕ್ಟ್ ಸ್ಟಾಪ್ ಆಗಿದೆ!
''ನನಗೆ ಆಕ್ಟಿಂಗ್ ಬರಲ್ಲ ಅಂತ ಇಡೀ ಪ್ರಾಜೆಕ್ಟ್ ಸ್ಟಾಪ್ ಮಾಡಿದ್ದಾರಂತೆ. ಅಂದ್ರೆ, ನನ್ನಿಂದ ಎಷ್ಟೋ ಜನರ ಹೊಟ್ಟೆ ಮೇಲೆ ಹೊಡೆದ ಹಾಗೆ ಅಲ್ವಾ? ಅದು ನನಗೆ ಬೇಜಾರಾಗಿದೆ'' - ಮಾಲಾಶ್ರೀ, ನಟಿ

ಕೆ.ಮಂಜು ಏನಂದ್ರು?
''ಅಭಿನಯ ಮಾಡಿಸುವುದಕ್ಕೆ ನಾನು ನಿರ್ದೇಶಕ ಅಲ್ಲ. ಇಮ್ರಾನ್ ಅವರನ್ನ ನಾನು ಕರೆಸಿದ್ದೇನೆ. ಮಧ್ಯಾಹ್ನ ಒಂದು ಗಂಟೆಗೆ ಪ್ರೆಸ್ ಮೀಟ್ ಮಾಡುತ್ತಿದ್ದೇವೆ. ಎಲ್ಲದಕ್ಕೂ ಕ್ಲಾರಿಟಿ ಕೊಡುತ್ತೇನೆ. ನನ್ನಿಂದ ತಪ್ಪಾಗಿದ್ರೆ, ಆಮೇಲೆ ಕೇಳಿ, ಹೇಳುತ್ತೇನೆ'' - ಕೆ.ಮಂಜು


Click it and Unblock the Notifications











