ಅಮಿತಾಬ್ ಒಲಿಯೋದು ಶಿವಣ್ಣನಿಗಾ? ಕಿಚ್ಚನಿಗಾ?
ಬಾಲಿವುಡ್ ಬಿಗ್ ಬಿ ಅಮಿತಾ ಬ್ ರನ್ನ 'ಅಮೃತಧಾರೆ' ನಂತರ ಮತ್ತೆ ಕನ್ನಡಕ್ಕೆ ತರೋ ಪ್ರಯತ್ನ ನಡೀತಿದೆ. ಶಿವಣ್ಣ ಅಭಿನಯದ 'ಕಬೀರ' ಚಿತ್ರ ಯುಗಾದಿಯಲ್ಲಿ ಸೆಟ್ಟೇರೋಕೆ ಸರ್ವ ತಯಾರಿ ಮಾಡಿಕೊಂಡಿದೆ. ಮತ್ತೊಂದು ಕಡೆ ಕಿಚ್ಚನ 'ಹೆಬ್ಬುಲಿ' ರೆಡಿಯಾಗುತ್ತಿದೆ.
'ಕಬೀರ' ಸಿನಿಮಾದಲ್ಲಿ ವಿಶಿಷ್ಟ ಪಾತ್ರವೊಂದಕ್ಕೆ ಅಮಿತಾಬ್ ರನ್ನ ಕರೆತರೋ ಯೋಚನೆ ಚಿತ್ರತಂಡಕ್ಕಿದೆ. ಇದು ಈ ಹಿಂದೆಯೇ ಸುದ್ದಿಯೂ ಆಗಿದೆ. ಚಿತ್ರದಲ್ಲಿ ದಕ್ಷಿನ ಭಾರತ ಚಿತ್ರರಂಗದ ಸ್ಟಾರ್ ಗಳು ಕಾಣಿಸಿಕೊಳ್ಳೋದು ಖಚಿತವಾಗಿದೆ. [ಕನ್ನಡ ತಾರೆಗಳೊಂದಿಗೆ ಅಮಿತಾಬ್ ಬಚ್ಚನ್ ನಂಟು]

ಇದರ ನಡುವೆ ಕಿಚ್ಚ ಸುದೀಪ್ ಅಭಿನಯದ, ಗಜಕೇಸರಿ ಕೃಷ್ಣ ನಿರ್ದೇಶನದ 'ಹೆಬ್ಬುಲಿ' ಚಿತ್ರಕ್ಕಾಗಿ ಅರ್ಜುನ್ ರಾಂಪಾಲ್ ರನ್ನ ವಿಲನ್ ಪಾತ್ರಕ್ಕಾಗಿ ಹಾಗೂ ಮತ್ತೊಂದು ಮುಖ್ಯಪಾತ್ರಕ್ಕಾಗಿ ಅಮಿತಾಬ್ ರನ್ನ ಸಂಪರ್ಕಿಸ್ತಿದೆ ಚಿತ್ರತಂಡ.
ಸದ್ಯ ಶಿವಣ್ಣ, ಸುದೀಪ್ ಇಬ್ಬರಿಗೂ ಒಳ್ಳೆಯ ಸ್ನೇಹಿತರಾಗಿರೋ ಅಮಿತಾಬ್ ಅವರು ಸುದೀಪ್ ಚಿತ್ರದಲ್ಲಿ ನಟಿಸ್ತಾರಾ? ಅಥವಾ ಶಿವಣ್ಣನ ಚಿತ್ರದಲ್ಲಿ ನಟಿಸ್ತಾರಾ? ಅಥವಾ ಎರಡೂ ಚಿತ್ರದಲ್ಲಿ ಕಾಣಿಸಿಕೊಳ್ತಾರಾ? ಈ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕು.

ಈ ಹಿಂದೆ ಕಲ್ಯಾಣ್ ಜ್ಯುವೆಲ್ಲರ್ಸ್ ಜಾಹೀರಾತಿನಲ್ಲಿ ಅಮಿತಾಬ್ ಹಾಗೂ ಶಿವಣ್ಣ ಒಟ್ಟಿಗೆ ಅಭಿನಯಿಸಿದ್ದರು. ಅಮಿತಾಬ್ ರ ನಟನೆಯನ್ನು ಆರಾಧಿಸುವವರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಒಬ್ಬರು. ಹದಿನಾಲ್ಕು ಹದಿನೈದರ ವಯಸ್ಸಿನಲ್ಲೇ ಅಮಿತಾಬ್ ರನ್ನು ಶಿವಣ್ಣ ಭೇಟಿ ಮಾಡಿದ್ದರು. ಆರಂಭದಲ್ಲಿ ಅಮಿತಾಬ್ ರ ಹಾವ ಭಾವ ಶೈಲಿಯನ್ನು ಶಿವಣ್ಣ ಅನುಕರಿಸುತ್ತಿದ್ದರಂತೆ. ಒಮ್ಮೆ ಪರಿಚಯವಾದರೆ ಮರೆಯುವ ಪೈಕಿಯಲ್ಲ ಅಮಿತಾಬ್ ಎನ್ನುತ್ತಾರೆ ಶಿವಣ್ಣ.
ಶಿವಮೊಗ್ಗದಲ್ಲಿ ಬಿಗ್ ಬಿ ಚಿತ್ರಗಳು ಬಿಡುಗಡೆಯಾದಾಗ ಅಮ್ಮನೊಂದಿಗೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ತೆಗೆದುಕೊಂಡಾಗ ಆಗುತ್ತಿದ್ದ ಖುಷಿ ಅಷ್ಟಿಷ್ಟಲ್ಲ. ಅಮಿತಾಬ್ ಬಚ್ಚನ್ ಅವರ ಚಿತ್ರಗಳೆಂದರೆ ಅಷ್ಟೊಂದು ಅಕ್ಕರೆ ಎನ್ನುತ್ತಾರೆ ಸುದೀಪ್. ಅಂತಹ ಮಹಾನ್ ಕಲಾವಿದನೊಂದಿಗೆ ಅಭಿನಯಿಸುವ ಅವಕಾಶ 'ರಣ್' ಚಿತ್ರದಲ್ಲಿ ತಮಗೆ ಸಿಕ್ಕಿತು. ಅದು ನನ್ನ ಪಾಲಿಗೆ ಒದಗಿ ಬಂದ ಮಹಾನ್ ಭಾಗ್ಯ ಎಂದು ನೆನೆಯುತ್ತಾರೆ ಸುದೀಪ್.


Click it and Unblock the Notifications











