ರಾಜ್ ಸ್ಮಾರಕ ಲೋಕಾರ್ಪಣೆಗೆ ಬಿಗ್ ಬಿ, ರಜನಿ, ಚಿರು
ವರನಟ ಡಾ. ರಾಜ್ಕುಮಾರ್ ಸ್ಮಾರಕವನ್ನು ನವೆಂಬರ್ 29ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಮೂಲಸೌಕರ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್ ಅವರು ತಿಳಿಸಿದರು.
ಸೋಮವಾರ (ಅ.27) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಬೆಳಿಗ್ಗೆ ಡಾ. ರಾಜ್ಕುಮಾರ್ ಅವರ ಸಮಾಧಿಯ ಬಳಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಂಜೆ ಅರಮನೆ ಮೈದಾನದಲ್ಲಿ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ನಟರಾದ ಅಮಿತಾಬ್ ಬಚ್ಚನ್, ರಜನೀಕಾಂತ್, ಕಮಲಹಾಸನ್, ಚಿರಂಜೀವಿ, ಮುಮ್ಮುಟ್ಟಿ, ವಸತಿ ಸಚಿವರೂ ಆಗಿರುವ ಅಂಬರೀಶ್ ಹಾಗೂ ಬಿ. ಸರೋಜಾದೇವಿ ಅವರನ್ನು ಆಹ್ವಾನಿಸಲು ಸಮಿತಿಯು ತೀರ್ಮಾನಿಸಿತು.
ಸ್ಮಾರಕ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನೆರವೇರಿಸುವ ಸಂಬಂಧ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್. ರೋಷನ್ ಬೇಗ್ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಅವರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಸಮಿತಿಗಳನ್ನು ರಚಿಸಲಾಗಿದೆ.


ಸಾಂಸ್ಕೃತಿಕ ಸಮಿತಿಯಲ್ಲಿ ಕಾರ್ಯಾಧ್ಯಕ್ಷರಾಗಿ ಸಾ.ರಾ. ಗೋವಿಂದ್, ಸಂಚಾಲಕರಾಗಿ ಎಸ್. ನಾರಾಯಣ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರು, ರಾಘವೇಂದ್ರ ರಾಜ್ಕುಮಾರ್, ಪ್ರೊ. ಬರಗೂರು ರಾಮಚಂದ್ರಪ್ಪ, ಅಧ್ಯಕ್ಷರು, ಚಲನಚಿತ್ರ ನಿರ್ಮಾಪಕರ ಸಂಘ, ಅಧ್ಯಕ್ಷರು, ಚಲನಚಿತ್ರ ನಿರ್ದೇಶಕರ ಸಂಘ, ಅಧ್ಯಕ್ಷರು, ಚಲನಚಿತ್ರ ಕಲಾವಿದರ ಸಂಘ, ಅಧ್ಯಕ್ಷರು, ಚಲನಚಿತ್ರ ಕಾರ್ಮಿಕರ ಸಂಘ, ಅಧ್ಯಕ್ಷರು, ಚಲನಚಿತ್ರ ತಂತ್ರಜ್ಞರ ಸಂಘ, ಅಧ್ಯಕ್ಷರು, ಕಿರು ಚಲನಚಿತ್ರ ಸಂಘ, ಅಧ್ಯಕ್ಷರು, ಛಾಯಾಚಿತ್ರ ಸಂಘ, ಸದಸ್ಯ ಕಾರ್ಯದರ್ಶಿ, ಡಾ. ರಾಜ್ಕುಮಾರ್ ಪ್ರತಿಷ್ಠಾನ ಇವರು ಸದಸ್ಯರಾಗಿದ್ದಾರೆ.
ಸಭೆಯಲ್ಲಿ ವಸತಿ ಸಚಿವ ಅಂಬರೀಶ್, ವಿಧಾನ ಪರಿಷತ್ ಸದಸ್ಯರಾದ ಜಗ್ಗೇಶ್, ಜಯಮಾಲಾ, ತಾರಾ ಅನುರಾಧ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು, ನಟ ರಾಘವೇಂದ್ರ ರಾಜ್ಕುಮಾರ್, ನಿರ್ದೇಶಕ ಎಸ್. ನಾರಾಯಣ್, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್, ಡಾ. ರಾಜ್ಕುಮಾರ್ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಹಾಗೂ ಕಂಠೀರವ ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕ ಎಂ. ರವಿಕುಮಾರ್ ಉಪಸ್ಥಿತರಿದ್ದರು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











