'ಕಣ್ಮಣಿ'ಗಳಾದ ಅನಂತನಾಗ್, ಸುಹಾಸಿನಿ
ನಟ ಮತ್ತು ನಿರ್ದೇಶಕ ಮೋಹನ್ ಮತ್ತೊಂದು ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇದೊಂದು ಸಂಪ್ರದಾಯಬದ್ಧವಲ್ಲದ ಚಿತ್ರವಾಗಿದ್ದು 'ಕಣ್ಮಣಿ' ಎಂದು ಹೆಸರಿಡಲಾಗಿದೆ. ಹಿರಿಯ ನಟ ಅನಂತನಾಗ್ ಮತ್ತು ದಕ್ಷಿಣದ ಜನಪ್ರಿಯ ತಾರೆ ಸುಹಾಸಿನಿ ಮಣಿರತ್ನಂ ಮುಖ್ಯಭೂಮಿಕೆಯಲ್ಲಿರುವ ಚಿತ್ರ.
ಈ ಹಿಂದೆ ಮೋಹನ್ 'ಶುಕ್ಲಾಂಬರದರಂ' ಚಿತ್ರವನ್ನು ನಿರ್ದೇಶಿಸಿದ್ದರು. ಇದೀಗ ಅವರ ನಿರ್ದೇಶನದ ಎರಡನೇ ಚಿತ್ರ 'ಕೃಷ್ಣ ನೀ ಲೇಟಾಗಿ ಬಾರೋ' ಚಿತ್ರೀಕರಣ ಮುಗಿಸಿಕೊಂಡಿದೆ. 'ಕಣ್ಮಣಿ' ಚಿತ್ರ ಮೂರನೆಯದಾಗಿದ್ದು ಬಂಡವಾಳ ಹೂಡಲು ಸೂಕ್ತ ನಿರ್ಮಾಪಕರಿಗಾಗಿ ಮೋಹನ್ ಹುಡುಕಾಟದಲ್ಲಿದ್ದಾರೆ.
ಖ್ಯಾತ ನಟ ಮಣಿರತ್ನಂ ಅವರೊಂದಿಗೂ ಕೆಲಸ ಮಾಡಿದ ಅನುಭವ ಜತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕ್ಯಾಂಪ್ ನಲ್ಲಿ ಸುದೀರ್ಘ ಕಾಲ ಕೆಲಸ ಮಾಡಿದ ಅನುಭವಗಳೂ ಮೋಹನ್ ಅವರಿಗಿದೆ. ಹಾಗಾಗಿ ಈಗ 'ಕಣ್ಮಣಿ'ಯನ್ನು ಕೈಗೆತ್ತಿಕೊಂಡಿದ್ದಾರೆ.
ಮೋಹನ್ ರ ಹುಟ್ಟುಹಬ್ಬದ ದಿನ ಅಂದರೆ ಸೆಪ್ಟೆಂಬರ್ 25ಕ್ಕೆ 'ಕೃಷ್ಣ ನೀ ಲೇಟಾಗಿ ಬಾರೋ' ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಲಿದೆಯಂತೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ , ನಿಧಿ ಸುಬ್ಬಯ್ಯ, ಮೋಹನ್ ಮತ್ತು ನೀತೂ ಚಿತ್ರದ ಮುಖ್ಯ ಪಾತ್ರಧಾರಿಗಳು. ಈ ಚಿತ್ರದಲ್ಲಿ ಹುಡುಗಿಯರ ಕಾಲೇಜಿನ ಏಕೈಕ ಪುರುಷ ಉಪನ್ಯಾಸಕನಾಗಿ ರಮೇಶ್ ಅಭಿನಯಿಸಿದ್ದಾರೆ.
ಕೃಷ್ಣ ನೀ ಲೇಟಾಗಿ ಬಾರೋ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ 30 ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರ ಲೇಟಾಗಿ ಬಿಡುಗಡೆಯಾಗುತ್ತಿದ್ದರೂ ಲೇಟೆಸ್ಟಾಗಿ ಇರುತ್ತದೆ ಎಂದು ಮೋಹನ್ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











