'ವೇದಾ' ವೇದಿಕೆಯಲ್ಲಿ ಡಾ.ರಾಜ್ಕುಮಾರ್, ಪುನೀತ್ ಅನ್ನು ನೆನೆದ ಅನಿಲ್ ಕುಂಬ್ಳೆ
ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಅನಿಲ್ ಕುಂಬ್ಳೆ, ಅತ್ಯುತ್ತಮ ಕ್ರಿಕೆಟಿಗರಾಗಿರುವ ಜೊತೆಗೆ ಸಿನಿಮಾ ಪ್ರೇಮಿಯೂ ಹೌದು. ಚಿತ್ರರಂಗದೊಂದಿಗೆ ಅದರಲ್ಲಿಯೂ ದೊಡ್ಮನೆಯೊಟ್ಟಿಗೆ ಆಪ್ತ ಬಂಧವನ್ನು ಕುಂಬ್ಳೆ ಹೊಂದಿದ್ದಾರೆ.
ಆಗಾಗ್ಗೆ ಸಿನಿಮಾ ಸಂಭಂಧಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಅನಿಲ್ ಕುಂಬ್ಳೆ, ನಿನ್ನೆ ಶಿವರಾಜ್ ಕುಮಾರ್ ನಟನೆಯ 'ವೇದಾ' ಸಿನಿಮಾದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶಿವರಾಜ್ ಕುಮಾರ್ ಅವರ ಹೋಮ್ ಬ್ಯಾನರ್ 'ಗೀತಾ ಪಿಕ್ಚರ್ಸ್' ಬ್ಯಾನರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ 'ವೇದಾ' ಆಗಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನಿಲ್ ಕುಂಬ್ಳೆ ಪುನೀತ್ ರಾಜ್ಕುಮಾರ್, ಡಾ.ರಾಜ್ಕುಮಾರ್ ಅವರನ್ನು ನೆನಪು ಮಾಡಿಕೊಂಡರು.

ರಾಜ್ಕುಮಾರ್ ಕುಟುಂಬದವರ ಕ್ರಿಕೆಟ್ ಪ್ರೀತಿ
''ಡಾ ರಾಜ್ಕುಮಾರ್ ಅವರ ಕುಟುಂಬ ಎಲ್ಲ ಸದಸ್ಯರಿಂದಲೂ ಕನ್ನಡ ಚಲನಚಿತ್ರರಂಗಕ್ಕೆ ದೊಡ್ಡ ಕೊಡುಗೆ ಸಿಕ್ಕಿದೆ. ಅಲ್ಲದೆ ಡಾ ರಾಜ್ಕುಮಾರ್ ಅವರ ಕುಟಂಬದ ಬಹುತೇಕರಿಗೆ ಕ್ರಿಕೆಟ್ ಬಗ್ಗೆ ಅಪಾರವಾದ ಪ್ರೀತಿ ಮತ್ತು ಆಸಕ್ತಿ. ಹಾಗೂ ಕರ್ನಾಟಕದ ಕ್ರಿಕೆಟಿಗರ ಬಗ್ಗೆಯೂ ಅವರಿಗೆ ಅಪಾರವಾದ ಪ್ರೀತಿ ಮತ್ತು ಗೌರವ. ಬೆಂಗಳೂರಿನಲ್ಲಿ ಕರ್ನಾಟಕದ ಯಾವುದೇ ಮ್ಯಾಚ್ ಇದ್ದರೂ ಶಿವರಾಜ್ ಕುಮಾರ್, ಪುನೀತ್, ರಾಘಣ್ಣ ಅವರ ಮನೆಯ ಇತರ ಸದಸ್ಯರೆಲ್ಲರೂ ಬಂದು ಮ್ಯಾಚ್ ವೀಕ್ಷಿಸುತ್ತಿದ್ದರು'' ಎಂದು ನೆನಪಿಸಿಕೊಂಡರು ಅನಿಲ್ ಕುಂಬ್ಳೆ.

ರಾಜ್ಕುಮಾರ್ ಅವರನ್ನು ಭೇಟಿಯಾಗಿದ್ದೆವು
''ಡಾ ರಾಜ್ಕುಮಾರ್ ಅವರಿಗೆ ಸಹ ಕ್ರಿಕೆಟ್ ಎಂದರೆ ಬಹಳ ಪ್ರೀತಿ. ನನಗೆ ರಾಜ್ಕುಮಾರ್ ಅವರನ್ನು ನೋಡಬೇಕೆಂಬ ಆಸೆ ಇತ್ತು. ನಾನು ಹಾಗೂ ಜಾವಗಲ್ ಶ್ರೀನಾಥ್ ಕರ್ನಾಟಕಕ್ಕೆ ಮ್ಯಾಚ್ ಆಡುತ್ತಿದ್ದೆವು, ಒಮ್ಮೆ ಪ್ಯಾಲೆಸ್ ಗ್ರೌಂಡ್ಸ್ ಅಲ್ಲಿ ಆಟ ಆಡುವಾಗ ಮಳೆ ಬಂದು ಪಂದ್ಯ ನಿಂತು ಬಿಟ್ಟಿತು. ಆಗ ನಾವು ರಾಜ್ಕುಮಾರ್ ಅವರನ್ನು ನೋಡೋಣ ಎಂದು ಹೋದೆವು, ಅವರು ನಮ್ಮನ್ನೆಲ್ಲ ಕರೆದು ಕೂರಿಸಿ ಕ್ರಿಕೆಟ್ ಬಗ್ಗೆ, ನಮ್ಮ ಬಗ್ಗೆ ಮಾತನಾಡಿದರು. ತಮ್ಮ ಆಸೆ, ಆಸಕ್ತಿ ಎಲ್ಲವನ್ನೂ ನಮ್ಮ ಜೊತೆ ಹಂಚಿಕೊಂಡರು'' ಎಂದು ನೆನಪು ಮಾಡಿಕೊಂಡರು ಅನಿಲ್ ಕುಂಬ್ಳೆ.

ಆಗ ಪುನೀತ್ ರಾಜ್ಕುಮಾರ್ ಬದುಕಿದ್ದರು: ಅನಿಲ್ ಕುಂಬ್ಳೆ
'ವೇದಾ' ಸಿನಿಮಾದ ಬಗ್ಗೆ ಮಾತನಾಡಿದ ಕುಂಬ್ಳೆ, ''ಶಿವರಾಜ್ ಕುಮಾರ್ ಅವರ ಹೋಂ ಬ್ಯಾನರ್ ಗೀತಾ ಪಿಕ್ಚರ್ಸ್ ಅನ್ನು ಲಾಂಚ್ ಕಾರ್ಯಕ್ರಮಕ್ಕೆ ಈ ಮೊದಲೇ ನನ್ನನ್ನು ಶಿವರಾಜ್ ಕುಮಾರ್ ಕರೆದಿದ್ದರು. ಆದರೆ ದುರಾದೃಷ್ಟವಷಾತ್ ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿದರು. ಶಿವರಾಜ್ ಕುಮಾರ್ ನನ್ನನ್ನು ಕರೆದಾಗ ಪುನೀತ್ ರಾಜ್ಕುಮಾರ್ ಬದುಕಿದ್ದರು. ಈಗಲೂ ಅವರು ಬದುಕಿದ್ದಾರೆಂದೇ ನಾನು ತಿಳಿದಿದ್ದೇನೆ. ನಮ್ಮೊಂದಿಗೆ ಅವರು ಇದ್ದಾರೆ ಎಂದು ನಾನು ಅಂದುಕೊಂಡಿದ್ದೇನೆ'' ಎಂದಿದ್ದಾರೆ ಅನಿಲ್ ಕುಂಬ್ಳೆ.

ದೊಡ್ಮನೆ ಕುಟುಂಬ ಭಾಗಿಯಾಗಿತ್ತು
ಶಿವರಾಜ್ ಕುಮಾರ್ ಅವರ 'ಗೀತಾ ಪಿಕ್ಚರ್ಸ್' ನಿರ್ಮಾಣ ಸಂಸ್ಥೆಯ ಮೊದಲ ಸಿನಿಮಾ 'ವೇದಾ' ಆಗಿದ್ದು, ಸಿನಿಮಾವನ್ನು ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ನಿನ್ನೆ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು. ದುನಿಯಾ ವಿಜಯ್, ಯೋಗರಾಜ್ ಭಟ್, ಗುರುಕಿರಣ್, ದೊಡ್ಮನೆ ಕುಟುಂಬದ ಅಶ್ವಿನಿ ಪುನೀತ್ ರಾಜ್ಕುಮಾರ್, ಅವರ ಮಕ್ಕಳು, ರಾಘವೇಂದ್ರ ರಾಜ್ಕುಮಾರ್ ಕುಟುಂಬ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.


Click it and Unblock the Notifications











