ಅಣ್ಣಾಬಾಂಡ್ ಗೆ ಟೈಟಲ್ ಭಾರವೇ ಹೆಚ್ಚಾಯ್ತು; ಸೂರಿ
ಅಣ್ಣಾಬಾಂಡ್ ಬಹಳಷ್ಟು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ ಎನ್ನುವ ಸಂಗತಿ ಈಗ ಹೊಸ ವಿಷಯವೇನಲ್ಲ. ಪುನೀತ್ ಅಭಿಮಾನಿಗಳನ್ನೇ ಗಮನದಲ್ಲಿಟ್ಟು ನಿರ್ದೇಶಕ ಸೂರಿ ಕಥೆ ಹೆಣೆದಿದ್ದಾರೆ ಎಂಬುದು ಬಹಳಷ್ಟು ಜನರ ಅಭಿಪ್ರಾಯ. ಆದರೆ ಪುನೀತ್ ಅವರ ಕಟ್ಟಾ ಅಭಿಮಾನಿಗಳಿಗೇ ಅಣ್ಣಾಬಾಂಡ್ ಇಷ್ಟವಾಗಿಲ್ಲ, ಅಣ್ಣಾಬಾಂಡ್ ಶೀರ್ಷಿಕೆಗೆ ಕನಿಷ್ಟ ನ್ಯಾಯವೂ ದೊರೆತಿಲ್ಲವೆಂದು ಅವರೇ ಹೇಳಿಕೊಂಡು ಓಡಾಡುತ್ತಿದ್ದಾರೆಂಬುದು ಗಾಂಧಿಗರದಲ್ಲಿ ಸದ್ಯ ಸುತ್ತುತ್ತಿರುವ ಸುದ್ದಿ.
ಅದೇನೇ ಇರಲಿ, ಸ್ವತಃ ನಿರ್ದೇಶಕ ಸೂರಿಗೆ ಅಣ್ಣಾಬಾಂಡ್ ಹಳೆಯ ಚಿತ್ರಗಳ ಜಾಡಿಗೇ ಸೇರಿದ ಇನ್ನೊಂದು ಚಿತ್ರವಾಯ್ತು ಎನಿಸಿದೆ ಎಂಬುದು ಲೇಟೆಸ್ಟ್ ಸುದ್ದಿ. ಆ ಬಗ್ಗೆ ಸೂರಿ "ಸಿನಿಮಾ ಚೆನ್ನಾಗಿಲ್ಲ ಅಂತ ನನಗೆ ಯಾರೂ ಹೇಳಿಲ್ಲ. ಆದರೆ ನಿರೀಕ್ಷೆ ಬೆಟ್ಟದಷ್ಟಿತ್ತು. ಅದನ್ನು ಮುಟ್ಟಲಿಲ್ಲ ಎನ್ನುತ್ತಿದ್ದಾರೆ. ಅದೇ ಥರದ ಹಾಡು, ಅದೇ ರೀತಿಯ ಸಂಗೀತ, ಅದೇ ಸಾಹಿತ್ಯ, ಜೊತೆಗೊಂದಿಷ್ಟು ಫೈಟ್ಸ್ ಸೇರಿಕೊಂಡು ಅಣ್ಣಾಬಾಂಡ್ ಆಗಿದ್ದು ನಿಜ" ಎಂದಿದ್ದಾರೆ.
ಸೂರಿ ಪ್ರಕಾರ 'ಶೀರ್ಷಿಕೆ ಭಾರವೇ ಅತಿಯಾಯ್ತು. ಅಣ್ಣಾಬಾಂಡ್ ಬದಲು ಸುಮ್ಮನೆ 'ಬಾಂಡ್ ರವಿ' ಅಂತ ಹೆಸರಿಟ್ಟಿದ್ದರೆ ಸಾಕಿತ್ತು. ಅಣ್ಣಾ ಅನ್ನೋ ಶಬ್ಧವೇ ಸಾಕಷ್ಟು ಪ್ರಭಾವ ಹೊಂದಿದ್ದು. ಜೊತೆಗೆ ಬಾಂಡ್ ಬೇರೆ ಸೇರಿಕೊಂಡು ಜನರ ಮಿತಿಮೀರಿದ ನಿರೀಕ್ಷೆಗೆ ಕಾರಣವಾಯ್ತು. ನಾನು ಮೊದಲೇ ಸಾಕಷ್ಟು ಬಾರಿ ಈ ನಮ್ಮ ಅಣ್ಣಾಬಾಂಡ್ ಆ ಬಾಂಡ್ ಅಲ್ಲ ಅಂತ ಪದೇ ಪದೇ ಹೇಳಿಕೊಂಡು ಬಂದರೂ ಪ್ರಯೋಜನವಾಗಲಿಲ್ಲ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











