ದರ್ಶನ್ ಜೊತೆಗೆ ನಟಿಸಿದ್ಮೇಲೆ ಅರ್ಜುನ್ ಸರ್ಜಾ ಮನಸ್ಸಲ್ಲಿ ಮೂಡಿದ ಭಾವನೆ ಏನು.?
ಸರಿಸುಮಾರು ಮೂರು ದಶಕಗಳಿಂದ ನಟ ಅರ್ಜುನ್ ಸರ್ಜಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಎರಡು ದಶಕಗಳಿಂದ ಬಣ್ಣದ ಬದುಕಿನಲ್ಲಿದ್ದಾರೆ. ಹೀಗಿದ್ದರೂ, ಈ ಇಬ್ಬರು ನಟರು ಮುಖಾಮುಖಿ ಆಗಿರಲಿಲ್ಲ. ಹತ್ತಿರದಿಂದ ಒಬ್ಬರನ್ನ ಮತ್ತೊಬ್ಬರು ನೋಡಿರಲಿಲ್ಲ. ಇಂತಿಪ್ಪ ಅರ್ಜುನ್ ಸರ್ಜಾ ಹಾಗೂ ದರ್ಶನ್ ಅವರನ್ನ ಒಂದು ಮಾಡಿದ ಸಿನಿಮಾ 'ಕುರುಕ್ಷೇತ್ರ'.
ಹೌದು, 'ಕುರುಕ್ಷೇತ್ರ' ಚಿತ್ರದಲ್ಲಿ ಅರ್ಜುನ್ ಸರ್ಜಾ ಹಾಗೂ ದರ್ಶನ್ ತೆರೆಹಂಚಿಕೊಳ್ಳುತ್ತಿದ್ದಾರೆ. 'ದುರ್ಯೋಧನ'ನ ಪಾತ್ರದಲ್ಲಿ ದರ್ಶನ್ ಮಿಂಚಿದ್ರೆ, ದುರ್ಯೋಧನನ ಆಪ್ತ ಸ್ನೇಹಿತ 'ಕರ್ಣ'ನ ಪಾತ್ರಕ್ಕಾಗಿ ಅರ್ಜುನ್ ಸರ್ಜಾ ಬಣ್ಣ ಹಚ್ಚಿದ್ದಾರೆ.
ತೆರೆಮೇಲೆ ಆಪ್ತಮಿತ್ರರಂತೆ ಅಭಿನಯಿಸಿರುವ ದರ್ಶನ್ ಮತ್ತು ಅರ್ಜುನ್ ಸರ್ಜಾ ಸದ್ಯ ನಿಜ ಜೀವನದಲ್ಲೂ ಅತ್ಯಾಪ್ತರಾಗಿದ್ದಾರೆ. ತಮ್ಮ 'ಪ್ರೇಮ ಬರಹ' ಚಿತ್ರದ ಒಂದು ಹಾಡಿಗೆ ಹೆಜ್ಜೆ ಹಾಕಿರುವ ದರ್ಶನ್ ಬಗ್ಗೆ ಅರ್ಜುನ್ ಸರ್ಜಾ ಏನಂತಾರೆ ಗೊತ್ತಾ.?

''ನಾನು ದರ್ಶನ್ ಅವರನ್ನ ತುಂಬಾ ದೂರದಿಂದಲೇ ನೋಡುತ್ತಿದ್ದೆ. 'ಕುರುಕ್ಷೇತ್ರ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಲು ಶುರು ಮಾಡಿದ್ಮೇಲೆ, ದರ್ಶನ್ ಅವರನ್ನ ಹತ್ತಿರದಿಂದ ನೋಡಿದ್ದು. ಅಷ್ಟೊಂದು ಪ್ರಿನ್ಸಿಪಲ್ಡ್ ಇರುವ ಒಬ್ಬ ಆಕ್ಟರ್ ಅವರು. ನಾನು ನೋಡಿರುವ ಆಕ್ಟರ್ ಗಳ ಪೈಕಿ 'ದಿ ಮೋಸ್ಟ್ ಪ್ರಿನ್ಸಿಪಲ್ಡ್ ಆಕ್ಟರ್' ದರ್ಶನ್'' ಎಂದು 'ಪ್ರೇಮ ಬರಹ' ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಅರ್ಜುನ್ ಸರ್ಜಾ ಹೇಳಿದ್ದಾರೆ. ಅರ್ಜುನ್ ಸರ್ಜಾ ಆಡಿರುವ ಮಾತಿಗೆ ಡಿ-ಬಾಸ್ ಫ್ಯಾನ್ಸ್ ಜಯಘೋಷ ಕೂಗುತ್ತಿದ್ದಾರೆ.


Click it and Unblock the Notifications