ಅರುಣ್ ಸಾಗರ್ ಗೋದಾಮಿಗೆ ಬೆಂಕಿ: ಕಲಾಕೃತಿಗಳು ಭಸ್ಮ
ಕನ್ನಡದ ಖ್ಯಾತ ಕಲಾ ನಿರ್ದೇಶಕ ಮತ್ತು ನಟ ಅರುಣ್ ಸಾಗರ್ ಅವರ ಕಲಾ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಕಲಾಕೃತಿಗಳು ಸುಟ್ಟು ಭಸ್ಮವಾಗಿದೆ.
ನಗರದ ಉತ್ತರಹಳ್ಳಿಯಲ್ಲಿರುವ ಅರುಣ್ ಸಾಗರ್ ಅವರ 'ಆರ್ಟ್ ಗೋಡೌನ್'ನಲ್ಲಿ ಫೆಬ್ರವರಿ 15 ರಂದು ಸಂಜೆ ಸುಮಾರು 5.30ಕ್ಕೆ ಈ ಅವಘಡ ನಡೆದಿದ್ದು, ಚಿತ್ರಗಳಿಗೆ ಬಳಸಿದ್ದ ಮತ್ತು ಬಳಸಬೇಕಾಗಿದ್ದ ಅಪೂರ್ವ ಕಲಾಕೃತಿಗಳು ಬೆಂಕಿಗೆ ಆಹುತಿಯಾಗಿದೆ. ಈ ವೇಳೆ ಬೆಂಕಿಯನ್ನು ನಂದಿಸಲು ಸ್ಥಳೀಯರು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಅಗ್ನಿ ಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸುವಷ್ಟರಲ್ಲಿ ಇಡೀ ಗೋಡೌನ್ ಪೂರ್ತಿ ಸುಟ್ಟು ಕರಕಲಾಗಿತ್ತು ಎಂದು ತಿಳಿದುಬಂದಿದೆ.

ಸುಮಾರು 17 ವರ್ಷದ ಹಿಂದೆ ಈ ಗೋಡೌನ್ ಆರಂಭಿಸಲಾಗಿತ್ತು. ಇದುವರೆಗೂ ಯಾವುದೇ ತರಹದ ಅವಘಡ ನಡದಿಲ್ಲ. ಈ ಅನಾಹುತ ಹೇಗಾಯಿತು ಎನ್ನುವುದು ಇನ್ನೂ ಗೊತ್ತಿಲ್ಲ. ಬಹಳ ನೋವಾಗುತ್ತಿದೆ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರಬಹುದು, ನನಗೆ ಯಾರೂ ಬೆಂಕಿ ಇಟ್ಟಿರುವ ಬಗ್ಗೆ ಅನುಮಾನವಿಲ್ಲ ಎಂದು ಕಲಾ ನಿರ್ದೇಶಕ ಅರುಣ್ ಸಾಗರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನೂ ಗೋದಾಮಿನಲ್ಲಿ ಹೊಸದಾಗಿ ಚಿತ್ರಗಳಿಗೆ ಸೆಟ್ ಹಾಕಲು ಬಳಸಬೇಕಿದ್ದ ಮರದ ಕಟ್ಟಿಗೆಗಳು, ಮದುವೆ ಮನೆಗಳಲ್ಲಿ ಸೆಟ್ ಹಾಕಬೇಕಿದ್ದ ವಸ್ತುಗಳು, ಈಗಾಗಲೇ ಬಳಸಿದ್ದ ಅನೇಕ ವಸ್ತುಗಳು ಇದ್ದವು. ಮತ್ತು ಗೋಕರ್ಣದಲ್ಲಿ ಒಂದು ಕಲಾ ಶಾಲೆ ನಿರ್ಮಾಣ ಮಾಡಲು, ಸಿದ್ದ ಮಾಡಿಟ್ಟಿದ್ದ ಸಾಮಾಗ್ರಿಗಳು ಕೂಡ ಬೆಂಕಿಗೆ ಆಹುತಿಯಾಗಿದೆ. ಇದರಿಂದ ಸುಮಾರು 70-80 ಲಕ್ಷ ನಷ್ಟವಾಗಿದೆ ಎಂದು ಅರುಣ್ ಸಾಗರ್ ತಿಳಿಸಿದ್ದಾರೆ. ಸದ್ಯ, ಸುಬ್ರಮಣ್ಯಪುರ ಪೊಲೀಸರು ಪ್ರಕರಣವನ್ನ ದಾಖಲು ಮಾಡಿಕೊಂಡಿದ್ದಾರೆ.


Click it and Unblock the Notifications











