ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದರ ಕುರಿತು ಪ್ರತಿಕ್ರಿಯೆ ನೀಡಿದ ಅರುಂಧತಿ ನಾಗ್ ಹೇಳಿದ್ದಿಷ್ಟು
ನಟ ಪುನೀತ್ ರಾಜ್ ಕುಮಾರ್ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು.
2009ರ ಬಳಿಕ ಯಾವುದೇ ವ್ಯಕ್ತಿಗೂ ನೀಡದಿದ್ದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ಪ್ರದಾನ ಮಾಡಿದೆ. ಕನ್ನಡ ರಾಜ್ಯೋತ್ಸವ ದಿನದ ಸಂಜೆ ಐದು ಗಂಟೆಗೆ ಭವ್ಯ ವಿಧಾನಸೌಧ ಕಟ್ಟಡದ ಮುಂಭಾಗ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರದಾನ ಮಾಡಿದರು ಹಾಗೂ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.
ತಮಿಳು ಚಿತ್ರರಂಗದ ಮೇರುನಟ ರಜನಿಕಾಂತ್, ತೆಲುಗು ಚಿತ್ರರಂಗದ ಪ್ರಮುಖ ನಟ ಜೂನಿಯರ್ ಎನ್ ಟಿಆರ್ ಮತ್ತು ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿ ಈ ಐತಿಹಾಸಿಕ ಪ್ರಶಸ್ತಿ ಪ್ರದಾನಕ್ಕೆ ಸಾಕ್ಷಿಯಾದರು. ಇನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದರ ಬಗ್ಗೆ ಹಲವು ದಿಗ್ಗಜ ನಟರು, ರಾಜಕಾರಣಿಗಳು ಹಾಗೂ ಸಿನಿಕ್ಷೇತ್ರದ ಬಹುತೇಕ ಎಲ್ಲಾ ಕಲಾವಿದರೂ ಸಹ ತುಂಬು ಹೃದಯದಿಂದ ಸ್ವಾಗತಿಸಿ ಸಂಭ್ರಮಿಸಿದರು. ಚಂದನವನದ ಲೆಜೆಂಡರಿ ನಟ ಶಂಕರ್ ನಾಗ್ ಅವರ ಪತ್ನಿ ಅರುಂಧತಿನಾಗ್ ಅವರು ಸಹ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದರ ಕುರಿತು ಪ್ರತಿಕ್ರಿಯಿಸಿದ್ದರು.

ಅಪ್ಪು ನನ್ನ ಕಣ್ಮುಂದೆ ಬೆಳೆದ ಹುಡುಗ
ರಂಗಶಂಕರ ನಾಟಕೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅರುಂಧತಿ ನಾಗ್ ಕಾರ್ಯಕ್ರಮದ ಕುರಿತು ಮಾತನಾಡಿದ ನಂತರ ಅದೇ ದಿನ ನಡೆಯುತ್ತಿದ್ದ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನದ ಕುರಿತು ಮಾತನಾಡಿ ಎಂದು ಪತ್ರಕರ್ತರೋರ್ವರು ಪ್ರಶ್ನೆಯನ್ನು ಇಟ್ಟರು. ಈ ಕುರಿತು ನಗುಮೊಗದಿಂದ ಉತ್ತರಿಸಿದ ಅರುಂಧತಿ ನಾಗ್ 'ತುಂಬಾ ಸಂತೋಷವಾಗುತ್ತಿದೆ, ಅಪ್ಪು ನನ್ನ ಕಣ್ಣ ಮುಂದೆ ಬೆಳೆದ ಹುಡುಗ. ಆತ ಅತ್ಯದ್ಭುತ ವ್ಯಕ್ತಿ. ಯುವಕರಲ್ಲಿ ಚೈತನ್ಯ ತುಂಬಿದ್ದಂತಹ ಅಪ್ಪು ಚಿಕ್ಕ ವಯಸ್ಸಿನಲ್ಲಿಯೇ ದೂರವಾದದ್ದು ಮೋಸ ಎನಿಸುತ್ತೆ' ಎಂದರು.

ಪುನೀತ್ ಹಾಗೂ ಶಂಕರ್ ನಾಗ್ ಅವರನ್ನು ಕಳೆದುಕೊಂಡದ್ದು ಶಾಪ
ಮಾತು ಮುಂದುವರಿಸಿದ ಅರುಂಧತಿ ನಾಗ್ ಪುನೀತ್ ರಾಜ್ ಕುಮಾರ್ ಹಾಗೂ ಶಂಕರ್ ನಾಗ್ ಅವರು ಕಿರಿಯ ವಯಸ್ಸಿನಲ್ಲಿಯೇ ನಿಧನಹೊಂದಿದ್ದರ ಕುರಿತು ಬೇಸರ ವ್ಯಕ್ತಪಡಿಸಿದರು. ಪುನೀತ್ ಆಗಲಿ ಹಾಗೂ ಶಂಕರ್ ನಾಗ್ ಆಗಲಿ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನು ಬಿಟ್ಟು ಹೋದರು ಹಾಗೂ ಅದು ಶಾಪ ಎಂದು ಅರುಂಧತಿ ನಾಗ್ ಹೇಳಿದರು.

ಅಪ್ಪು ಮಾಡಿದ ಒಳ್ಳೆಯ ಕೆಲಸಕ್ಕೆ ಸಿಕ್ಕ ಮನ್ನಣೆ
ಪುನೀತ್ ಚಿಕ್ಕವಯಸ್ಸಿನಲ್ಲಿಯೇ ನಮ್ಮಿಂದ ದೂರಾದರಾದರೂ ಆ ಕಡಿಮೆ ಅವಧಿಯಲ್ಲಿಯೇ ಆತ ಮಾಡಿದ ಒಳ್ಳೆಯ ಕೆಲಸಗಳನ್ನು ಗುರುತಿಸಿ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವ ಸೂಚಿಸಿದೆ. ಇದು ಯುವಜನತೆಗೆ ಮಾದರಿಯಾಗಿದ್ದು, ಇದು ಯುವಕರು ಪ್ರೇರೇಪಿತರಾಗಿ ಪುನೀತ್ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡಲಿ ಎಂಬ ಸ್ಫೂರ್ತಿಯನ್ನು ತುಂಬುತ್ತದೆ ಎಂದು ಅರುಂಧತಿ ನಾಗ್ ಹೇಳಿದ್ದಾರೆ.

ಅಶ್ವಿನಿ ಹಾಗೂ ನಾನು ಪಡೆದುಕೊಂಡು ಬಂದದ್ದು ಇಷ್ಟೆ
ಶಂಕರ್ ನಾಗ್ ಅವರು ಕರ್ನಾಟಕ ಮತ್ತು ಕನ್ನಡ ಭಾಷೆಯನ್ನು ಎಷ್ಟು ಪ್ರೀತಿಸುತ್ತಿದ್ದರು ಎಂಬುದನ್ನು ಮೆಲುಕು ಹಾಕಿದ ಅರುಂಧತಿ ನಾಗ್ 'ಅಪ್ಪು ಹಾಗೂ ಶಂಕರ್ ನಾಗ್ ರೀತಿಯ ವ್ಯಕ್ತಿಗಳು ಇಷ್ಟು ಬೇಗನೆ ನಮ್ಮನ್ನು ಬಿಟ್ಟು ಹೊರಟರು, ನಾನು ಮತ್ತು ಅಶ್ವಿನಿ ಪಡೆದುಕೊಂಡು ಬಂದದ್ದು ಇಷ್ಟೆ' ಎಂದು ಹೇಳಿಕೆ ನೀಡಿದರು.


Click it and Unblock the Notifications











