ಪುನೀತ್ ರಾಜ್ಕುಮಾರ್ ನಟನೆಯ ಹಳೆ ಸಿನಿಮಾ ನೋಡಲಿರುವ ಅಶ್ವಿನಿ ಪುನೀತ್ ರಾಜ್ಕುಮಾರ್
ಅಪ್ಪು ಅಗಲಿ ವರ್ಷವಾಗುತ್ತಾ ಬಂತು ಆದರೆ ಅವರ ನೆನಪು ನಿತ್ಯ ನೂತನ. ಅಪ್ಪು ಅಗಲಿಕೆಯಿಂದ ಹೊರಬರಲಾರದೆ ಒದ್ದಾಡುತ್ತಿರುವ ಕೋಟ್ಯಂತರ ಜೀವಗಳಿವೆ. ಅಪ್ಪು ಅಗಲಿಕೆಯ ಅತಿಯಾಗಿ ಬಾಧಿಸಿದ್ದು, ಕಾಡಿದ್ದು ಅವರ ಕುಟುಂಬವನ್ನು.
ಸಿನಿ ಪ್ರೇಮಿಗಳಿಗೆ, ಅಭಿಮಾನಿಗಳಿಗೆ ನೆಚ್ಚಿನ ನಟ, ಅತ್ಯುತ್ತಮ ವ್ಯಕ್ತಿ ಇಲ್ಲವಾದರೆ, ಕುಟುಂಬದವರ ಪಾಲಿಗೆ ಕುಟುಂಬದ ಸದಸ್ಯ, ಆಧಾರ ಸ್ಥಂಭ ಇಲ್ಲವಾದಂತಾಗಿದೆ. ಆದರೆ ಅಶ್ವಿನಿ ಪುನೀತ್ ರಾಜ್ಕುಮಾರ್ ಸ್ಥೈರ್ಯ ತಂದುಕೊಂಡಿದ್ದಾರೆ. ತಮ್ಮ ನೋವನ್ನು ಹೊರಗೆಲ್ಲೂ ಪ್ರದರ್ಶಿಸದೆ, ಪುನೀತ್ ರಾಜ್ಕುಮಾರ್ ಬಿಟ್ಟುಹೋದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿದ್ದಾರೆ. ಅಪ್ಪು ಕನಸುಗಳನ್ನು ನನಸು ಮಾಡುವ ಹಾದಿಯಲ್ಲಿದ್ದಾರೆ.
ಅಪ್ಪು ನಿಧನದ ಬಳಿಕ ಅವರ ನಟನೆಯ ಎರಡು ಸಿನಿಮಾಗಳು ಬಿಡುಗಡೆ ಆಗಿವೆ. ಅದುವೇ 'ಜೇಮ್ಸ್' ಹಾಗೂ 'ಲಕ್ಕಿ ಮ್ಯಾನ್' ಎರಡೂ ಸಿನಿಮಾಗಳನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ವೀಕ್ಷಿಸಿಲ್ಲ. ಆದರೆ ಇದೇ ಮೊದಲ ಬಾರಿಗೆ ಅಪ್ಪು ಅಗಲಿಕೆ ಬಳಿಕ ಸಾರ್ವಜನಿಕವಾಗಿ ಪುನೀತ್ ಅವರ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ವೀಕ್ಷಿಸಲಿದ್ದಾರೆ.

'ಬೆಟ್ಟದ ಹೂ' ನೋಡಲಿರುವ ಅಶ್ವಿನಿ ಪುನೀತ್ ರಾಜ್ಕುಮಾರ್
ದಸರಾ ಪ್ರಯುಕ್ತ ಮೈಸೂರಿನಲ್ಲಿ ನಡೆಯುತ್ತಿರುವ ಸಿನಿಮೋತ್ಸವದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಪುನೀತ್ ರಾಜ್ಕುಮಾರ್ ಅವರ ಸಿನಿಮಾ ಒಂದನ್ನು ವೀಕ್ಷಿಸಲಿದ್ದಾರೆ. ದೊಡ್ಮನೆ ಕುಟುಂಬದ ಹೆಮ್ಮೆಯ ಸೇವಾಕೇಂದ್ರ ಶಕ್ತಿಧಾಮದ ಮಕ್ಕಳೊಟ್ಟಿಗೆ ಕುಳಿತು ಪುನೀತ್ ರಾಜ್ಕುಮಾರ್ ಬಾಲನಟನಾಗಿ ನಟಿಸಿದ್ದ 'ಬೆಟ್ಟದ ಹೂ' ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ವೀಕ್ಷಿಸಲಿದ್ದಾರೆ. ಮೈಸೂರು ದಸರಾ ಸಿನಿಮೋತ್ಸವದ ಬಗ್ಗೆ ಇಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಲನಚಿತ್ರೋತ್ಸವ ಕಾರ್ಯದರ್ಶಿ ಟಿ.ಕೆ.ಹರೀಶ್ ಅವರು ಈ ವಿಷಯವನ್ನು ಹೇಳಿದ್ದಾರೆ.

ಪುನೀತ್ ನಟನೆಯ ಆರು ಸಿನಿಮಾಗಳು
ದಸರಾ ಸಿನಿಮೋತ್ಸವದಲ್ಲಿ ಪುನೀತ್ ರಾಜ್ಕುಮಾರ್ ಅವರ ಗೌರವಾರ್ಥ ಅವರ ನಟನೆಯ ಆರು ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಪುನೀತ್ರಾಜ್ಕುಮಾರ್ ಬಾಲನಟರಾಗಿ ನಟಿಸಿರುವ ಬೆಟ್ಟದ ಹೂ, ಅಂಜನಿಪುತ್ರ, ರಾಜಕುಮಾರ, ಮೈತ್ರಿ, ಪೃಥ್ವಿ ಹಾಗೂ ಯುವರತ್ನ ಸಿನಿಮಾಗಳು ಸಿನಿಮೋತ್ಸವದಲ್ಲಿ ವಿಶೇಷವಾಗಿ ಪ್ರದರ್ಶನಗೊಳ್ಳಲಿದೆ.

ಉದ್ಘಾಟನೆ ಮಾಡಲಿರುವ ಶಿವರಾಜ್ ಕುಮಾರ್
ದಸರಾ ಸಿನಿಮೋತ್ಸವಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಸೇರಿದಂತೆ ಇಡೀಯ ದೊಡ್ಮನೆ ಕುಟುಂಬಕ್ಕೆ ವಿಶೇಷ ಆಹ್ವಾನವನ್ನು ನೀಡಲಾಗಿದ್ದು, ಸಿನಿಮೋತ್ಸವವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರೊಟ್ಟಿಗೆ ಶಿವರಾಜ್ ಕುಮಾರ್ ಉದ್ಘಾಟನೆ ಮಾಡಲಿದ್ದಾರೆ. ಸಿನಿಮೋತ್ಸವದಲ್ಲಿ ಪುನೀತ್ ರಾಜ್ಕುಮಾರ್ ಮಾತ್ರವೇ ಅಲ್ಲದೆ, ಚಿತ್ರಪ್ರೇಮಿಗಳನ್ನು ಅಗಲಿದ ಮತ್ತೊಬ್ಬ ಪ್ರತಿಭಾವಂತ ಕನ್ನಡ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ಗೂ ಗೌರವ ಸೂಚಿಸಲಾಗುತ್ತಿದ್ದು, ಅವರ ನಟನೆಯ ತಲೆದಂಡ, ಪುಕ್ಸಟ್ಟೆ ಲೈು, ಆಕ್ಟ್ 1978 ಸಿನಿಮಾಗಳು ಪ್ರದರ್ಶನಗೊಳ್ಳುತ್ತವೆ.

ದಸರಾ ಸಿನಿಮೋತ್ಸವದ ಬಗ್ಗೆ ಮಾಹಿತಿ
ಸೆ.27ರಿಂದ ಅ.3ರವರೆಗೆ 56 ಕನ್ನಡ, 28 ಪನೋರಮಾ, 28 ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾಗಳು ಸೇರಿದಂತೆ ಒಟ್ಟು 112 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸೆ.22, 23 ಮತ್ತು 24ರಂದು ಸಿನಿಮಾ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಚಲನಚಿತ್ರ ನಿರ್ಮಾಣದ ಪೂರ್ವ ತಯಾರಿ ಕುರಿತು ಮಾಹಿತಿ ನೀಡಲಾಗುತ್ತದೆ. ಕಾರ್ಯಾಗಾರವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. ಚಂಪಾಶೆಟ್ಟಿ, ಪ್ರಶಾಂತ್ ಪಂಡಿತ್, ಪ್ರವೀನ್ ಕೃಪಾಕರ್, ಪವನ್ ಕುಮಾರ್, ಶಂಕರ್ ಎನ್.ಸಂಡೂರು, ಪನ್ನಗಾಭರಣ, ಮಂಸೊರೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದ್ದು, ಪ್ರವೇಶಕ್ಕೆ 300 ರೂ ಶುಲ್ಕ ನಿಗದಿಪಡಿಸಲಾಗಿದೆ.


Click it and Unblock the Notifications











