ಕೊರೊನಾ ಭೀತಿ; ಬಹುರೂಪಿ ರಾಷ್ಟ್ರೀಯ ನಟಕೋತ್ಸವ ಮುಂದೂಡಿಕೆ
ಓಮಿಕ್ರಾನ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಮೈಸೂರಿನ ರಂಗಾಯಣದಲ್ಲಿ ಇದೇ ತಿಂಗಳ 10 ನಡೆಯಬೇಕಿದ್ದ ಬಹುನಿರೀಕ್ಷಿತ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಮುಂದೂಡಲಾಗಿದೆ.
ರಾಜ್ಯ ಸರಕಾರ ಕೋವಿಡ್ ನ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಜ.15ರ ತನಕ ಮೂಂದೂಡಲಾಗಿದೆ.
ಇದೇ 10ರಿಂದ 19ರವರೆಗೆ ಬಹುರೂಪಿ ಉತ್ಸವ ನಡೆಸಲು ಸಕಲ ಸಿದ್ಧತೆ ನಡೆಸಲಾಗಿತ್ತು. ಆದರೆ, ರಾಜ್ಯ ಸರಕಾರದ ನೂತನ ಕೊವಿಡ್ ಮಾರ್ಗಸೂಚಿ ಅನ್ವಯದ ಹಿನ್ನೆಲೆಯಲ್ಲಿ ರಂಗಾಯಣ ಈ ಕ್ರಮ ತೆಗೆದುಕೊಂಡಿದೆ.
ರಂಗಾಯಣದ ಬಹುರೂಪಿ ನಾಟಕೋತ್ಸವ ಸಾವಿರಾರು ಮಂದಿ ಭಾಗವಹಿಸುವ ಉತ್ಸವವಾಗಿದೆ. ಆದರೆ ಸರ್ಕಾರ ಸಭೆ, ಸಮಾರಂಭಗಳಿಗೆ 500 ಜನರಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಆದ್ದರಿಂದ ಬಹುರೂಪಿಯನ್ನು ತಾತ್ಕಾಲಿಕವಾಗಿ ಜ.15 ರ ತನಕ ಮುಂದೂಡಿದ್ದೇವೆ. ರಾಜ್ಯ ಸರಕಾರದ ದಿನವಹಿ ಬೆಳವಣಿಗೆ ಗಮನಿಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.

ರಂಗಾಯಣದ ಉತ್ಸವದಲ್ಲಿ ಭಾಗವಹಿಸುವ ಕಲಾವಿದರು, ಸಂಪನ್ಮೂಲ ವ್ಯಕ್ತಿಗಳು, ಮಳಿಗೆಗಳು ಹಾಗೂ ಇದರ ವೀಕ್ಷಣೆಗೆ ಆಗಮಿಸುವವರ ಅಂದಾಜು ಲೆಕ್ಕವೇ ಪ್ರತಿದಿನ 2000 ಮಂದಿಯಾಗುತ್ತಾರೆ. ಆದ್ದರಿಂದ ಸರಕಾರದ ನಿಯಮಾವಳಿಗಳನ್ನು ಪಾಲಿಸಿ ಉತ್ಸವ ಮಾಡಲು ಸಾಧ್ಯವಾಗದು. ರಂಗಾಸಕ್ತರಿಗಾಗಿಯೇ ಬಹುರೂಪಿ ಉತ್ಸವ ಆಯೋಜಿಸುತ್ತಿರುವುದು. ಆದ್ದರಿಂದ ಈ ಎಲ್ಲಾ ಅಂಶವನ್ನು ಪರಿಗಣಿಸಿ ಬಹುರೂಪಿಯನ್ನು ತಾತ್ಕಾಲಿಕವಾಗಿ ಜ.15ರ ತನಕ ಮುಂದೂಡುವ ತೀರ್ಮಾನಕ್ಕೆ ಬರಲಾಗಿದೆ ಎಂದಿದ್ದಾರೆ.
ಕೋವಿಡ್ ಮಾರ್ಗಸೂಚಿಯನ್ವಯ ಬಹುರೂಪಿಯನ್ನು ಯಥಾಸ್ಥಿತಿಯಲ್ಲೇ ಮುಂದೂಡಿರುವುದು. ಆದ್ದರಿಂದ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಉತ್ಸವ ನಡೆಯುವುದು. ಈಗ ನಿರ್ಧರಿಸಿರುವ 'ತಾಯಿ' ಪರಿಕಲ್ಪನೆಯನ್ನೇ ಪ್ರಧಾನ ಅಂಶವನ್ನಾಗಿರಿಸಿಕೊಂಡಿರುವ ಅಂಶಗಳನ್ನು ಆಧರಿಸಿಯೇ ನಡೆಯಲಿವೆ. ಜತೆಗೆ ನಾಟಕ, ಸಮಾರಂಭದ ಅತಿಥಿಗಳಲ್ಲೂ ಸಹ ಯಾವುದೇ ಬದಲಾವಣೆ ಇರದು ಎಂದು ತಿಳಿಸಿದರು.
ಕೊರೊನಾ ಹೊಸ ತಳಿ ಓಮಿಕ್ರಾನ್ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರನ್ವಯ ಯಾವುದೇ ಸಭೆ, ಸಮಾರಂಭ, ಮದುವೆಗಳಲ್ಲಿ 500 ಮಂದಿಗೂ ಹೆಚ್ಚಿನ ಜನ ಸೇರುವಂತಿಲ್ಲ. ಆದರೆ ನಾಟಕೋತ್ಸವದಲ್ಲಿ ಇನ್ನೂ ಹೆಚ್ಚು ಜನ ಸೇರಲಿದ್ದಾರಾದ್ದರಿಂದ ನಾಟಕೋತ್ಸವವನ್ನು ಮುಂದೂಡಲಾಗಿದೆ.


Click it and Unblock the Notifications











