'ಅಧ್ಯಕ್ಷ'ನಿಗೆ ಗುನ್ನ ಇಡಲು ಹೋಗಿ ಹಿಗ್ಗಾಮುಗ್ಗಾ ಗೂಸಾ
ಶರಣ್ ಅಭಿನಯದ 'ಅಧ್ಯಕ್ಷ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಕಲೆಕ್ಷನ್ ಸಹ ಚೆನ್ನಾಗಿದೆ. ಚಿತ್ರ ಒಂದೇ ದಿನದಲ್ಲಿ ರು.1.5 ಕೋಟಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಗೊತ್ತೇ ಇದೆ. ಇಂತಹ ಸಂದರ್ಭದಲ್ಲೇ ಇನ್ನೊಂದು ವಿಚಿತ್ರ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು ಕನಕಪುರ ರಸ್ತೆಯ ಅರ್ಕಾವತಿ ಚಿತ್ರಮಂದಿರದ ಮಾಲೀಕ ರಂಗನಾಥ್ ಸಿನಿಮಾದ ಕಲೆಕ್ಷನ್ ಕಡಿಮೆ ತೋರಿಸಿದ ಆರೋಪದ ಹಿನ್ನೆಲೆಯಲ್ಲಿ ಚಿತ್ರದ ವಿತರಕ ಸಮರ್ಥ ಪ್ರಸಾದ್ ಜೊತೆ ಮಾತಿನ ಚಕಮಕಿ ನಡೆದಿದೆ.

ಈ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ್ರಸಾದ್ ಅವರು ಥಿಯೇಟರ್ ಮಾಲೀಕ ರಂಗನಾಥ್ ಮೇಲೆ ಕೈ ಮಾಡಿದ ಘಟನೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೋಮವಾರ (ಆ.18) ನಡೆಯಿತು. ರಂಗನಾಥ್ ಅವರ ಕಪಾಳಕ್ಕೆ ಹೊಡೆದ ಪ್ರಸಾದ್ ಅವರು ಅವರನ್ನು ಅತ್ತಿಂದಿತ್ತ ನೂಕಾಡಿದ ಘಟನೆಗೆ ಫಿಲಂ ಚೇಂಬರ್ ಸಾಕ್ಷಿಯಾಯಿತು.
'ಅಧ್ಯಕ್ಷ' ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದರೂ ಅರ್ಕಾವತಿ ಥಿಯೇಟರ್ ಮಾಲೀಕ ರಂಗನಾಥ್ ಅವರು ಸುಮಾರು 80 ಟಿಕೆಟ್ ಕಲೆಕ್ಷನ್ ಕಡಿಮೆ ತೋರಿಸಿದ್ದಾರೆ ಎಂಬುದು ಪ್ರಸಾದ್ ಆರೋಪ. ಈ ಹಿನ್ನೆಲೆಯಲ್ಲಿ ನಡೆದ ಮಾತಿನ ಚಕಮಕಿ ಕೈಕೈ ಮಿಲಾಯಿಸುವಂತೆ ಮಾಡಿತು.


Click it and Unblock the Notifications











