ಬಂಗಾರದ ಮನುಷ್ಯ ನಿರ್ಮಾಪಕ ಕೆಸಿಎನ್ ಗೌಡ ನಿಧನ

ಕೆಸಿಎನ್ ಗೌಡ ಅವರು 300ಕ್ಕೂ ಹೆಚ್ಚು ಚಿತ್ರಗಳ ವಿತರಕರಾಗಿ ಕೆಲಸ ಮಾಡಿದ್ದಾರೆ. ಫಾಲ್ಕೆ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಡಾ.ರಾಜ್ ಕುಮಾರ್ ಪ್ರಶಸ್ತಿಗೂ ಪಾತ್ರರಾಗಿದ್ದರು. ಗೌಡರು ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.
ವೃತ್ತಿಯಿಂದ ರೇಷ್ಮೆ ವ್ಯಾಪಾರಿಗಳಾದ ಕೆಸಿಎನ್ ಅವರದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ದಬಳ್ಳಾಪುರ ತಾಲೂಕಿನ ಕೊನೆಹಳ್ಳಿಯವರು. 'ಭಲೇ ಜೋಡಿ' ಚಿತ್ರ ಕೆಸಿಎನ್ ಗೌಡ ಅವರ ಚೊಚ್ಚಲ ಚಿತ್ರ. ರಾಜ್ ಕಮಲ್ ಆರ್ಟ್ಸ್ ಲಾಂಛನದಲ್ಲಿ ನಿರ್ಮಿಸಿದ ಈ ಚಿತ್ರದಲ್ಲಿ ಅಣ್ಣಾವು ದ್ವಿಪಾತ್ರಾಭಿನಯ ಮಾಡಿದ್ದರು.
ಬೆಂಗಳೂರಿನ ನವರಂಗ್ ಹಾಗೂ ಊರ್ವಶಿ ಚಿತ್ರಮಂದಿರಗಳ ಮಾಲೀಕರು ಕೂಡ. ಕೆಸಿಎನ್ ಗೌಡ ಅವರ ಮಕ್ಕಳಾದ ಕೆಸಿಎನ್ ಚಂದ್ರಶೇಖರ್ ಹಾಗೂ ಕೆಸಿಎನ್ ಮೋಹನ್ ಸಹ ಚಿತ್ರನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.
ವರನಟ ಡಾ.ರಾಜ್ ಕುಮಾರ್ ಅವರ ಸತ್ಯಹರಿಶ್ಚಂದ್ರ, ಕಸ್ತೂರಿ ನಿವಾಸ, ಕವಿರತ್ನ ಕಾಳಿದಾಸ, ಬಬ್ರುವಾಹನ ಹಾಗೂ ವೀರಕೇಸರಿ ಕಪ್ಪುಬಿಳುಪು ಚಿತ್ರಗಳನ್ನು ಕಲರ್ ಸ್ಕೋಪ್ ನಲ್ಲಿ ಬಿಡುಗಡೆ ಮಾಡಿದ ಖ್ಯಾತಿ ಕೆಸಿಎನ್ ಗೌಡ ಅವರದು. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











