ಭಾರತೀಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ 'ಮಧ್ಯಂತರ' ಕನ್ನಡ ಕಿರು ಚಿತ್ರ ಆಯ್ಕೆ!
ಭಾರತದ ಪ್ರತಿಷ್ಠಿತ ಚಲನ ಚಿತ್ರೋತ್ಸವದಲ್ಲಿ ಗೋವಾದಲ್ಲಿ ನಡೆಯುವ ಚಲನ ಚಿತ್ರೋತ್ಸವ ಕೂಡ ಒಂದು. ಭಾರತೀಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ತಮ್ಮ ಸಿನಿಮಾ ಪ್ರದರ್ಶನ ಮಾಡಲು ಶತಪ್ರಯತ್ನ ಮಾಡುತ್ತಾರೆ. ಇಂತದ್ದೊಂದು ಸದಾವಕಾಶ ಕನ್ನಡದ ಕಿರು ಚಿತ್ರವೊಂದಕ್ಕೆ ಸಿಕ್ಕಿದೆ.
ಬಸ್ತಿ ದಿನೇಶ್ ಶೆಣೈ ರಚಿಸಿ, ನಿರ್ದೇಶಿಸಿದ 'ಮಧ್ಯಂತರ' ಅನ್ನುವ ಕನ್ನಡ ಕಿರುಚಿತ್ರ ನಾನ್ ಫಿಚರ್ ವಿಭಾಗದಲ್ಲಿ ಆಯ್ಕೆಯಾಗಿದೆ. ಗೋವಾದಲ್ಲಿ ನವೆಂಬರ್ 20 ರಿಂದ 28ರವರೆಗೆ ನಡೆಯಲಿರುವ ಭಾರತೀಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ 'ಮಧ್ಯಂತರ' ಸಿನಿಮಾ ಪ್ರದರ್ಶನ ಕಾಣಲಿದೆ.
ನಾನ್ ಫಿಚರ್ ವಿಭಾಗದಲ್ಲಿ ಆಯ್ಕೆಯಾಗಿರುವ ಸುಮಾರು 20 ಸಿನಿಮಾಗಳ ಪೈಕಿ 'ಮಧ್ಯಂತರ' ಕೂಡ ಒಂದು. ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ಭಾರತದ 12 ಸೆಲೆಬ್ರೆಟಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. 6 ಮಂದಿ ಚಲನ ಚಿತ್ರ ವಿಭಾಗದಲ್ಲಿಯೂ ಹಾಗೂ 6 ಮಂದಿ ನಾನ್ ಫಿಚರ್ ವಿಭಾಗದಲ್ಲಿಯೂ ತೀರ್ಪುಗಾರರಾಗಿ ಭಾಗವಹಿಸಿದ್ದರು.

'ಮಧ್ಯಂತರ' ಸಿನಿಮಾ ನಿರ್ಮಾಣದ ಪ್ರಕ್ರಿಯೆ ಬಗೆಗಿನ ಕಥೆ. ನಿರ್ದೇಶಕ ಬಸ್ತಿ ದಿನೇಶ್ ಶೆಣೈ ಕಳೆದ ಎರಡು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ 20 ವರ್ಷಗಳಲ್ಲಿ ತಮಗೆ ಸಿಕ್ಕಿರೋ ಅನುಭವವನ್ನು ಕಿರು ಚಿತ್ರದ ಮೂಲಕ ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರೆ.
ಬಸ್ತಿ ದಿನೇಶ್ ಶೆಣೈ ದಕ್ಷಿಣ ಕನ್ನಡ ಮೂಲದವರು. ಆದ್ರೀಗ ದೆಹಲಿಯಲ್ಲಿ ವಾಸವಿದ್ದಾರೆ. ಮೊದಲ ಛಾಯಾಗ್ರಾಹಕರಾಗಿ ಕೆಲಸ ಆರಂಭಿಸಿದ್ದರು. ಬಳಿಕ ನಿರ್ಮಾಪಕರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. 'ಮಧ್ಯಂತರ'ಕ್ಕೆ ಸುನಿಲ್ ಬೋರ್ಕರ್ ಛಾಯಾಗ್ರಹಣವಿದ್ದರೆ, ಶಶಿಧರ ಅಡಪ ಅವರ ಆರ್ಟ್ ಪ್ರೊಡಕ್ಷನ್ ಡಿಸೈನ್, ಸುರೇಶ್ ಅರಸ್ ಸಂಕಲನ ಮಾಡಿದ್ದಾರೆ. ಇನ್ನು ಸಿದ್ದಾಂತ್ ಮಾಥೂರ್ ಸಂಗೀತ ನೀಡಿದ್ದಾರೆ. ಈ ಸಿನಿಮಾವನ್ನು ಕ್ರೌಡ್ ಫಂಡ್ ಮೂಲಕ ನಿರ್ಮಾಣ ಮಾಡಿರುವುದು ಮತ್ತೊಂದು ವಿಶೇಷ.


Click it and Unblock the Notifications











