ಬೆಂಗಳೂರಿನ ಬೀದಿ-ಬೀದಿಗಳಲ್ಲಿ 'ಕೈ' ಬೀಸಿದ 'ಮಗಧೀರ' ಕೇಡಿ
ರಾಮ್ ಚರಣ್ ತೇಜ ಅಭಿನಯದ 'ಮಗಧೀರ' ಸಿನಿಮಾ ನೋಡಿದ್ದೀರಾ. ಅದ್ರಲ್ಲಿ, ಕೇಡಿ ಪಾತ್ರ ನಿರ್ವಹಿಸಿರುವ ದೇವ್ ಗಿಲ್ ನಿಮಗೆ ನೆನಪಿರಬಹುದು. ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ 'ಮಗಧೀರ' ಸಿನಿಮಾ ಮೂಲಕ ಬಹು ಬೇಡಿಕೆ ಸೃಷ್ಟಿಸಿಕೊಂಡಿರುವ ದೇವ್ ಗಿಲ್ ಕನ್ನಡದ 'ಸಾಗರ್' ಚಿತ್ರದಲ್ಲೂ ಅಬ್ಬರಿಸಿದ್ದಾರೆ.
ಇಂತಿಪ್ಪ ದೇವ್ ಗಿಲ್ ಇಂದು ಬೆಂಗಳೂರಿಗೆ ಬಂದಿದ್ದಾರೆ. ಅದು ಬಿಬಿಎಂಪಿ ಚುನಾವಣಾ ಪ್ರಚಾರಕ್ಕೆ ಅನ್ನೋದು ಇಂಟ್ರೆಸ್ಟಿಂಗ್ ವಿಷಯ. ಬೆಂಗಳೂರಿನ ಸುಧಾಮನಗರ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ಯುವರಾಜ್ ಪರ ದೇವ್ ಗಿಲ್ ಇವತ್ತು ಕ್ಯಾಂಪೇನ್ ಮಾಡಿದರು.

ಕಾಂಗ್ರೆಸ್ ನಾಯಕ ಆರ್.ವಿ.ದೇವರಾಜ್ ಪುತ್ರ ಯುವರಾಜ್. ರಾಜಕೀಯದಲ್ಲಿ ಈಗಷ್ಟೆ ಅಂಬೆಗಾಲಿಡುತ್ತಿರುವ ಯುವರಾಜ್ ಪರ ಮಾತನಾಡಿದ ಬಹುಭಾಷಾ ಖಳನಟ ದೇವ್ ಗಿಲ್, ''ಯುವರಾಜ್ ನನ್ನ ಫ್ಯಾಮಿಲಿ ಫ್ರೆಂಡ್. ಸಮಾಜ ಸೇವೆ ಮಾಡುವುದಕ್ಕೆ ಅವರು ರಾಜಕೀಯಕ್ಕೆ ಬಂದಿದ್ದಾರೆ. ಅವರಲ್ಲಿ ಸಮಾಜದ ಏಳಿಗೆ ಕುರಿತು ಉತ್ತಮ ಆಲೋಚನೆಗಳಿವೆ. ಅದಕ್ಕಾಗಿ ನಾನು ಸಪೋರ್ಟ್ ಮಾಡುತ್ತಿದ್ದೇನೆ.''
''ಪಕ್ಷ ನೋಡಿ ನಾನು ಕ್ಯಾಂಪೇನ್ ಮಾಡುತ್ತಿಲ್ಲ. ಯುವರಾಜ್ ಒಳ್ಳೆ ವ್ಯಕ್ತಿ. ಆದ್ದರಿಂದ ನಾನು ನನ್ನ ಶೂಟಿಂಗ್ ಶೆಡ್ಯೂಲ್ ಬಿಟ್ಟು ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ'' ಅಂತ ಹೇಳ್ತಾರೆ ನಟ ದೇವ್ ಗಿಲ್.

ಯುವರಾಜ್ ಪರ ತಾಯಿ ಮಮತಾ ದೇವರಾಜ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸುಧಾಮನಗರ ವಾರ್ಡ್ ನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. 'ಮಗಧೀರ' ಕೇಡಿ ಕೃಪಾ ಕಟಾಕ್ಷದಿಂದ ಯುವರಾಜ್ ಗದ್ದುಗೆ ಹಿಡಿಯುತ್ತಾರಾ ಅಂತ ನೋಡೋಣ.


Click it and Unblock the Notifications











