ಬಿಬಿಎಂಪಿ ಚುನಾವಣೆಗೆ ಚಿತ್ರೋದ್ಯಮದ ಸಂಭಾವ್ಯರ ಪಟ್ಟಿ
ಸಾಲು ಸಾಲು ಭ್ರಷ್ಟಾಚಾರ ಹಗರಣದಿಂದ ಮತ್ತು ಸಾಲದ ಶೂಲದಿಂದ ಹೈರಾಣವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಮಹೂರ್ತ ಫಿಕ್ಸ್ ಆಗಿದೆ.
ಸಿನಿಮಾ ಮತ್ತು ಕ್ರೀಡಾರಂಗದವರು ರಾಜಕೀಯದಲ್ಲೂ ಹೆಸರು ಮಾಡಿರುವ ಉದಾಹರಣೆ ಕನ್ನಡ ಚಿತ್ರೋದ್ಯಮದಲ್ಲೂ ಇದೆ.
ಮಿನಿ ಚುನಾವಣೆಯೆಂದೇ ಹೆಸರಾಗಿರುವ ಬಿಬಿಎಂಪಿ ಚುನಾವಣೆಗೆ ಮೂರೂ ಪ್ರಮುಖ ಪಕ್ಷಗಳು ಭಾರೀ ಸಿದ್ದತೆ ನಡೆಸುತ್ತಿವೆ. ಈ ಬಾರಿ ಆಮ್ ಆದ್ಮಿ ಪಕ್ಷ ಕೂಡಾ ಆಖಾಡಕ್ಕಿಳಿಯಲಿದೆ, ಹಾಗಾಗಿ ತ್ರಿಕೋಣ ಅಥವ ಚತುಸ್ಕೋಣ ಸ್ಪರ್ಧೆ ಖಚಿತ.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ವಿವಿಧ ಪಕ್ಷಗಳ ಟಿಕೆಟಿಗೆ ಚಿತ್ರೋದ್ಯಮವರು ಲಾಬಿ ನಡೆಸಿದ್ದುಂಟು, ಅದರಲ್ಲಿ ಕೆಲವರಿಗೆ ಟಿಕೆಟ್ ಸಿಕ್ಕಿ ಸ್ಪರ್ಧಿಸಿದ್ದೂ ಆಗಿದೆ, ಟಿಕೆಟ್ ಸಿಗದೇ ನಿರಾಶೆ ಅನುಭವಿಸಿದವರೂ ಇದ್ದಾರೆ.
ಈಗ ಬಿಬಿಎಂಪಿ ಚುನಾವಣೆಯ ಸರದಿ. ಮೀಸಲಾತಿ ಪಟ್ಟಿ ಬದಲಾಗಿರುವುದರಿಂದ ಈ ಬಾರಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಿಕ್ಕಾಪಟ್ಟೆ ಜಾಸ್ತಿ. ಅದರಲ್ಲಿ ತಾಜಾ ರಿಪೋರ್ಟ್ ಪ್ರಕಾರ ಆಡಳಿತ ಕಾಂಗ್ರೆಸ್ ಪಕ್ಷದ ಟಿಕೆಟಿಗೆ ಡಿಮಾಂಡಪ್ಪೋ ಡಿಮಾಂಡ್.
ಬನ್ನಿ, ಸದ್ಯ ಚಿತ್ರೋದ್ಯಮದ ಟಿಕೆಟ್ ಆಕಾಂಕ್ಷಿಗಳು ಯಾರು, ಸ್ಲೈಡ್ ಕ್ಲಿಕ್ಕಿಸಿ...

ವಿಜಯಲಕ್ಷ್ಮಿ ಸಿಂಗ್
ಚಿತ್ರೋದ್ಯಮದ ಹಿರಿಯ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಸಹೋದರಿ, ಜೈಜಗದೀಶ್ ಪತ್ನಿ ವಿಜಯಲಕ್ಷ್ಮಿ ಸಿಂಗ್ ಈ ಬಾರಿಯ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇವರು ಅಗ್ರಹಾರ ದಾಸರಹಳ್ಳಿ ವಾರ್ಡಿನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ.

ದೀಪಕ್
ಜ್ಯೂ. ಶಂಕ್ರಣ್ಣ ಎಂದೇ ಹೆಸರಾಗಿರುವ ದೀಪಕ್ ಕೂಡಾ ಈ ಬಾರಿ ಶತಾಯುಗತಾಯು ಸ್ಪರ್ಧಿಸಲೇ ಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ. ಇದೇ ಪಕ್ಷದ ಟಿಕೆಟಿನಿಂದ ಸ್ಪರ್ಧಿಸ ಬೇಕೆನ್ನುವ ಪಕ್ಷಪಾತ ಇವರಿಗಿಲ್ಲ. ಯಾವ ಪಕ್ಷದ ಟಿಕೆಟ್ ಸಿಕ್ಕರೂ ಓಕೆ, ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿಯೂ ಒಂದು ಕೈನೋಡೇ ಬಿಡೋಣ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಸುದ್ದಿಯಿದೆ. ಇವರು ಹಂಪಿನಗರ ವಾರ್ಡಿನ ಟಿಕೆಟ್ ಆಕಾಂಕ್ಷಿ.

ಮಯೂರ್ ಪಟೇಲ್
ಚಿತ್ರದಲ್ಲಿ, ರಿಯಾಲಿಟಿ ಶೋನಲ್ಲಿ ಅಲ್ಲೊಮ್ಮೆ, ಇಲ್ಲೊಮ್ಮೆ ಕಾಣಿಸಿಕೊಳ್ಳುವ ಮದನ್ ಪಟೇಲ್ ಪುತ್ರ ಮಯೂರ್ ಪಟೇಲ್ ಕೂಡಾ ಈ ಬಾರಿ ಸ್ಪರ್ಧಿಸಬಹುದು. ಇವರೂ ಅಷ್ಟೇ, ಅದೇ ಪಾರ್ಟಿ, ಇದೇ ಪಾರ್ಟಿ ಅಂಥಾ ಇಲ್ಲ. ಯಾವುದಾದರೂ ಓಕೆ..

ಪ್ರೇಮಾ
ಕನ್ನಡ ಚಿತ್ರೋದ್ಯಮದಲ್ಲಿ ಒಂದು ಕಾಲದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಪ್ರೇಮಾ, ಈ ಬಾರಿ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ, ಅದು ಬಿಜೆಪಿ ಟಿಕೆಟಿನಿಂದ. ಇವರು ಡಾ. ರಾಜಕುಮಾರ್ ವಾರ್ಡಿನಿಂದ ಟಿಕೆಟ್ ಬಯಸಿದ್ದಾರೆ.

ಬುಲೆಟ್ ಪ್ರಕಾಶ್
ಹಾಸ್ಯ ನಟ ಬುಲೆಟ್ ಪ್ರಕಾಶ್ ಇತ್ತೀಚೆಗಷ್ಟೇ ಬಿಜೆಪಿ ಸೇರಿ, ಪಿಎಂ ಮೋದಿಯನ್ನು ಹಾಡಿ ಹೊಗಳಿದ್ದರು. ಟಿಕೆಟಿಗಾಗಿ ದಂಬಾಲು ಬೀಳುವುದಿಲ್ಲ, ಸಿಕ್ಕಿದರೆ ಸ್ಪರ್ಧಿಸುತ್ತೇನೆ ಎನ್ನುವ ಮೂಲಕ ಚುನಾವಣೆಗೆ ನಿಲ್ಲಲು ಸಜ್ಜಾಗಿದ್ದಾರೆ.

ಆನಂದ್
ಮನಸುಗಳ ಮಾತು ಮಧುರ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಆನಂದ್ ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೇ, ಅತ್ತಿಗುಪ್ಪೆ ವಾರ್ಡಿನಲ್ಲಿ ಸಕ್ರಿಯರಾಗಿ ಸಮಾಜಮುಖಿ ಕೆಲಸದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಅತ್ತಿಗುಪ್ಪೆ ವಾರ್ಡಿನಿಂದ ಟಿಕೆಟ್ ಬಯಸಿದ್ದಾರೆ.

ಭವ್ಯಾ
ಹಿರಿಯ ನಟಿ ಭವ್ಯಾ ಕೂಡಾ ಈ ಬಾರಿಯ ಟಿಕೆಟ್ ಆಕಾಂಕ್ಷಿ. ಈ ಎಲ್ಲಾ ಕಲಾವಿದರಿಗೆ ಕರ್ನಾಟಕ ಚಲನಚಿತ್ರ ಮಂಡಳಿಯ ಬೆಂಬಲವೂ ಸಿಗಲಿದೆ ಎನ್ನುವ ಸುದ್ದಿಯಿದೆ.


Click it and Unblock the Notifications











