ಬಿಬಿಎಂಪಿ ಚುನಾವಣೆ : ಪ್ರಚಾರಕ್ಕೆ ಬರಲಿದೆ ತಾರೆಗಳ ದಂಡು
ಬೆಂಗಳೂರು ಬಿಬಿಎಂಪಿ ಚುನಾವಣೆ ಕಾವು ನಿಧಾನಕ್ಕೆ ಏರ ತೊಡಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಚುನಾವಣೆ ಗೆಲ್ಲುವ ಉತ್ಸಾಹದಲ್ಲಿದೆ. ಗೆಲುವು ಅಂದುಕೊಂಡಷ್ಟು ಸುಲಭ ಅಲ್ಲ ಅನ್ನೋದು ಪಕ್ಷದ ನಾಯಕರಿಗೂ ಗೊತ್ತು. ಆದ್ದರಿಂದ ಸದ್ಯಕ್ಕೆ ಏನೇನೋ ಸರ್ಕಸ್ ಕೂಡ ಮಾಡುತ್ತಿದ್ದಾರೆ.
ಅಂದಹಾಗೆ ಬಿಬಿಎಂಪಿ ಚುನಾವಣೆಯ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರು ಕೊಂಚ ಗ್ಲಾಮರ್ ಟಚ್ ನೀಡಲು ನಿರ್ಧರಿಸಿದ್ದಾರೆ. ಆದ್ದರಿಂದ ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಸೇರಿದಂತೆ ಚಿತ್ರರಂಗದಿಂದ ನಟನಾಮಣಿಗಳನ್ನು ಕರೆ ತರುತ್ತಿದ್ದಾರೆ.
ಬಿಬಿಎಂಪಿ ಮತದಾರ ಅಭಿಮಾನಿಗಳನ್ನು ಸೆಳೆಯಲು ತೆಲುಗು ಮೆಗಾಸ್ಟಾರ್ ಚಿರಂಜೀವಿ, ಖುಷ್ಬು, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹಾಗೂ ಭಾವನಾ, ಗಣೇಶ್ ಸೇರಿದಂತೆ ಘಟಾನುಘಟಿಗಳಾದ ನಟ-ನಟಿಯರನ್ನು ಪ್ರಚಾರಕ್ಕಿಳಿಸಲು ತಯಾರಿ ನಡೆಸುತ್ತಿದೆ.
ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರು, ಶಾಸಕರು ಹಾಗೂ ಹಿರಿಯ ನಾಯಕರ ಪಟ್ಟಿ ಸಿದ್ದವಾಗಿದ್ದು, ಅವರ ಜೊತೆ ಚಿರಂಜೀವಿ, ಖುಷ್ಬು, ಅವರನ್ನು ಸೇರಿಸಲಾಗಿದೆ.
ಇನ್ನೂ ಕಾವೇರಿಪುರ ವಾರ್ಡ್ ನಿಂದ ಬಿಜೆಪಿ ಪರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಚಿತ್ರ ನಿರ್ಮಾಪಕಿ ವಿಜಯಲಕ್ಷ್ಮೀ ಸಿಂಗ್ ಪರವಾಗಿ ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಪ್ರಚಾರಕ್ಕಿಳಿಯಲಿದ್ದಾರೆ.
ಇನ್ನೂ ಬಿಜೆಪಿ ಪಕ್ಷ ಕೇಂದ್ರ ಸಚಿವರನ್ನು ಪ್ರಚಾರ ಕಣಕ್ಕಿಳಿಸಲು ಕಾರ್ಯಕ್ರಮದ ಪಟ್ಟಿ ತಯಾರಿಸಿದಂತೆ ಕಾಂಗ್ರೆಸ್ ಇನ್ನೂ ಒಂದು ಹಂತ ಮುಂದುವರಿದು ಹೈಕಮಾಂಡ್ ನ ಉನ್ನತ ನಾಯಕರುಗಳನ್ನು ಕರೆಸುವ ಪ್ರಯತ್ನದ ಜೊತೆಗೆ ಕ್ರಿಕೆಟ್ ದೇವರು ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರನ್ನು ಆಹ್ವಾನಿಸುವ ಪ್ರಯತ್ನಗಳು ನಡೆದಿವೆ.
ಒಟ್ನಲ್ಲಿ ಸಿನಿಪ್ರಿಯರು ತಮ್ಮ ತಮ್ಮ ಹೀರೋ, ಹೀರೋಯಿನ್ ಗಳು ಪ್ರಚಾರ ಮಾಡುತ್ತಿರುವುದಕ್ಕೋಸ್ಕರನಾದ್ರೂ, ಮತ ಹಾಕಿ ಸಹಕರಿಸುತ್ತಾರ ಅಥವಾ ಸಮರ್ಥ ನಾಯಕನನ್ನು ಆಯ್ಕೆ ಮಾಡುತ್ತಾರ ಅನ್ನೋದನ್ನ ಕಾದು ನೋಡಬೇಕು.


Click it and Unblock the Notifications












