'ಬೆಳ್ಳಿ ಸಿನೆಮಾ-ಬೆಳ್ಳಿ ಮಾತು' ಸಿನಿ ರಸಿಕರೊಡನೆ ಸಂವಾದ
ಕನ್ನಡ ಚಿತ್ರರಂಗಕ್ಕೆ ಹೊಸ ಹೊಳಪು ನೀಡಲು ರಾಜ್ಯ ಸರ್ಕಾರ ಸ್ಥಾಪಿಸಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಮುಂದಿನ ದಿನಗಳಲ್ಲಿ ಪ್ರತಿ ಶನಿವಾರದಂದು, 'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಎಂಬ ಹೊಸ ಕಾರ್ಯಕ್ರಮ ರೂಪಿಸಿದೆ. ಸದಭಿರುಚಿಯ ಚಿತ್ರ ಪ್ರದರ್ಶನ, ಮಾತು ಮಂಥನದ ಈ ಕಾರ್ಯಕ್ರಮ ಇದೇ ಜುಲೈ 18 ರಿಂದ ಬೆಂಗಳೂರಿನಲ್ಲಿ ಆರಂಭವಾಗುತ್ತದೆ
ಕನ್ನಡ ಪ್ರಶಸ್ತಿ ಪುರಸ್ಕೃತ ಹಾಗೂ ಸದಭಿರುಚಿಯ ಕನ್ನಡ ಚಿತ್ರಗಳನ್ನು ವಾರಕ್ಕೊಮ್ಮೆ ಅಂದರೆ ಪ್ರತಿ ಶನಿವಾರ ಪ್ರದರ್ಶಿಸಿ ಆ ಚಿತ್ರಕ್ಕೆ ಸಂಬಂಧಿಸಿದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರೊಡನೆ ಸಂವಾದ ನಡೆಸಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಪ್ರತಿ ವರ್ಷ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಆಯೋಜಿಸುತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ವಾರವು ಚಿತ್ರ ಪ್ರೇಮಿಗಳನ್ನು ಒಂದೆಡೆ ಕಲೆಹಾಕಿ ಪ್ರಬುದ್ಧ ಚಲನಚಿತ್ರ ಪ್ರೇಕ್ಷಕ ಹಾಗೂ ನಿರ್ಮಾಪಕರ ಹಂದರವನ್ನು ಕಟ್ಟಲು ಉದ್ದೇಶಿಸಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್.ಬಿ.ದಿನೇಶ್ ತಿಳಿಸಿದ್ದಾರೆ.
'ಬೆಳ್ಳಿ ಸಿನೆಮಾ-ಬೆಳ್ಳಿ ಮಾತು' ಮೊದಲ ಚಿತ್ರ ಪ್ರದರ್ಶನ ಜುಲೈ 18 ರಂದು ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. 'ಹರಿವು' ಬೆಳ್ಳಿ ಸಿನೆಮಾದ ಮೊದಲ ಪ್ರದರ್ಶನ.
'ಹರಿವು' ಚಿತ್ರದ ನಿರ್ದೇಶಕ ಶ್ರೀ ಎಂ.ಸೋಮಶೇಖರ ರೆಡ್ಡಿ ಅವರು 'ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಚಿತ್ರ ವೀಕ್ಷಿಸಲು ಇಚ್ಚಿಸುವವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಇ-ಮೇಲ್ ವಿಳಾಸ [email protected] ಅಥವಾ ದೂರವಾಣಿ ಸಂಖ್ಯೆ 080-22133410 ಮೂಲಕ ನೊಂದಾಯಿಸಿಕೊಳ್ಳಲು ಕೋರಿದೆ. ಪ್ರವೇಶ ಉಚಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ರಿಜಿಸ್ಟ್ರಾರ್ ಹೆಚ್.ಬಿ.ದಿನೇಶ್ ತಿಳಿಸಿದ್ದಾರೆ.


Click it and Unblock the Notifications











