ಅಣ್ಣಾವ್ರಿಗೆ ಕರ್ನಾಟಕ ರತ್ನ ಪ್ರದಾನ.. ಗಲಾಟೆ.. ಸಂಭ್ರಮ: ಆ ಕ್ಷಣ ನೆನೆದ ಭಗವಾನ್ ಹಾಗೂ ಸಾ ರಾ ಗೋವಿಂದು
ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಅಪ್ಪು ಚಿತ್ರರಂಗ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸರ್ಕಾರ ಈ ಪ್ರಶಸ್ತಿಯನ್ನು ನೀಡಲು ಮುಂದಾಗಿದೆ. 30 ವರ್ಷಗಳ ಹಿಂದೆ ಡಾ. ರಾಜ್ಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆ ದಿನವನ್ನು ಖ್ಯಾತ ನಿರ್ದೇಶಕ ಭಗವಾನ್ ಹಾಗೂ ನಿರ್ಮಾಪಕ ಸಾ ರಾ ಗೋವಿಂದು ನೆನಪಿಸಿಕೊಂಡಿದ್ದಾರೆ.
14 ನವೆಂಬರ್ 1992. ಆ ದಿನ ಡಾ. ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅದಕ್ಕಿಂತ 2 ದಿನ ಮುನ್ನ ಖ್ಯಾತ ಸಾಹಿತಿ ಕುವೆಂಪು ಸರ್ಕಾರದಿಂದ ಈ ಗೌರವ ಸಂದಿತ್ತು. ಈ ಪ್ರಶಸ್ತಿಯನ್ನು ನೀಡಲು ಆರಂಭಿಸಿದವರು ಅಂದಿನ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪನವರು. ಕುವೆಂಪು ಅವರ ಮುಂದೆ ನಾನು ಎಂತಹ ಸಾಧನೆ ಮಾಡಿದ್ದೇನೆ. ಮೊದಲು ಅವರಿಗೆ ಪ್ರಶಸ್ತಿ ನೀಡಬೇಕು ಎಂದು ಅಣ್ಣಾವ್ರು ಹಠ ಹಿಡಿದಿದ್ದರಂತೆ. ಹಾಗಾಗಿ ಮೊದಲಿಗೆ ಕುವೆಂಪು ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಇನ್ನು ವಿಧಾನ ಸೌಧದ ಮುಂಭಾಗದಲ್ಲಿ ಅಂದು ಡಾ. ರಾಜ್ಕುಮಾರ್ಗೆ 'ಕರ್ನಾಟಕ ರತ್ನ' ಪ್ರದಾನ ಸಮಾರಂಭ ಏರ್ಪಡಿಸಲಾಗಿತ್ತು.
ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಾಗೂ ಗವರ್ನರ್ ಖುರ್ಷಿದ್ ಆಲಂ ಖಾನ್ ಡಾ. ರಾಜ್ಕುಮಾರ್ಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸಿದ್ದರು. ಸಾಕಷ್ಟು ಜನ ಸಾಹಿತಿಗಳು, ಗಣ್ಯರ ಜೊತೆಗೆ ಅಸಂಖ್ಯಾತ ಅಭಿಮಾನಿಗಳು ಆ ಕ್ಷಣಕ್ಕೆ ಸಾಕ್ಷಿ ಆಗಿದ್ದರು.
ಅಣ್ಣಾವ್ರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಆದ ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕ ಭಗವಾನ್ ಕೂಡ ಹಾಜರಿದ್ದರು. ಆ ದಿನವನ್ನು ನೆನಪಿಸಿಕೊಂಡಿರುವ ನಿರ್ದೇಶಕರು "ಆ ದಿನ ಸಾಕಷ್ಟು ಜನ ಸೇರಿದ್ದರಿಂದ ಕೊಂಚ ಗಲಾಟೆ ಆಗಿತ್ತು. ಆ ಗಲಾಟೆಯಲ್ಲಿ ಏನಾಯಿತು ಎನ್ನುವುದು ನೆನಪಿಲ್ಲ. ಡಾ. ರಾಜ್ ಪಕ್ಕ ಕುವೆಂಪು ಅವರು ಕೂತಿದ್ದರು. ಅಂದು ಆ ಕಾರ್ಯಕ್ರಮಕ್ಕೆ ಸೇರಿದ್ದಕ್ಕಿಂತ ಹೆಚ್ಚು ಜನ ಇಂದು ಸಂಜೆ ಕಾರ್ಯಕ್ರಮಕ್ಕೆ ಸೇರುತ್ತಾರೆ" ಎಂದು ಹೇಳಿದ್ದಾರೆ.

ದೊಡ್ಮನೆಗೆ 2 ಕರ್ನಾಟಕ ರತ್ನ
ಇನ್ನು ಆ ದಿನವನ್ನು ನಿರ್ಮಾಪಕ ಸಾ ರಾ ಗೋವಿಂದು ಕೂಡ ನೆನಪಿಸಿಕೊಂಡಿದ್ದಾರೆ. "ಮುಖ್ಯಮಂತ್ರಿ ಬಂಗಾರಪ್ಪನವರು ಡಾ. ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಅಂದು ಅಣ್ಣಾವ್ರು ಇದ್ದು, ವಿಧಾನಸೌಧದ ಮೆಟ್ಟಿಲ ಮೇಲೆ ಪ್ರಶಸ್ತಿ ಪಡೆದುಕೊಂಡಿದ್ದರು. ಇಂದು ನಮಗೆ ಆ ಭಾಗ್ಯ ಇಲ್ಲ. ಪುನೀತ್ ರಾಜ್ಕುಮಾರ್ ಅವರ ಅನುಪಸ್ಥಿತಿಯಲ್ಲಿ ಅವರ ಶ್ರೀಮತಿ ಕರ್ನಾಟಕ ರತ್ನ ಪ್ರಶಸ್ತಿ ಪಡೆಯುತ್ತಿದ್ದಾರೆ. ಜನರು ಅದನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ದೊಡ್ಮನೆಗೆ 2 ಕರ್ನಾಟಕ ರತ್ನ ಪ್ರಶಸ್ತಿ ನಮಗೆಲ್ಲಾ ಸಂತಸ ತಂದಿದೆ.

ಗೋಕಾಕ್ ಚಳುವಳಿ ಮರೆಯೋಕ್ಕಾಗಲ್ಲ
"ಏನು ನೋಡಿ ಕರ್ನಾಟಕ ರತ್ನ ಪ್ರಶಸ್ತಿ ನನಗೆ ಕೊಡುತ್ತಿದ್ದೀರಾ? ಎಂದು ಅಣ್ಣಾವ್ರು ಹೇಳಿದ್ದರು. ಆ ಮಾತು ಇವತ್ತು ನೆನಪಾಗುತ್ತಿದೆ. ಅಣ್ಣಾವ್ರ ಕಲೆ, ಆ ಬದ್ಧತೆ ನಾಡು ನುಡಿ ಸಂಸ್ಕೃತಿ ಬಗ್ಗೆ ಹೋರಾಟ ಕಿಚ್ಚು ಇತ್ತಲ್ಲ ಅದು ಅವರನ್ನು ಆ ಮಟ್ಟಿಗೆ ಬೆಳೆಸಿತ್ತು. ಅವರು ಬರೀ ಕಲಾವಿದರಾಗಿ ಉಳಿಯಲಿಲ್ಲ. ಹೋರಾಟಗಾರನಾಗಿ ನಾಡಿಗೆ ಭಾಷೆಗೆ ಅನ್ಯಾಯ ಆದಾಗ ಹೋರಾಟಕ್ಕೆ ಧುಮುಕಿದವರು ಡಾ. ರಾಜ್ಕುಮಾರ್. ಅದಕ್ಕೆ ಉದಾಹರಣೆ ಗೋಕಾಕ್ ಚಳುವಳಿ."

ಅಣ್ಣಾವ್ರಿಂದ ಹೋರಾಟಕ್ಕೆ ಆನೆಬಲ
"ಸುಮಾರು 30 ದಿನಗಳ ಕಾಲ ರಾಜ್ಯಾದ್ಯಂತ ಸುತ್ತಿ ಹೋರಾಟದ ಬಗ್ಗೆ ಜಾಗೃತಿ ಮೂಡಿಸಿದ್ದರು. ಅಂತಹ ಹೋರಾಟಗಳು ಕಾಲು ಶತಮಾನಕ್ಕೆ, ಶತಮಾನಕ್ಕೆ ಒಮ್ಮೆ ನಡೆಯುವಂತಹದ್ದು. ಆ ಹೋರಾಟದಿಂದ ಕರ್ನಾಟಕಕ್ಕೆ ಕನ್ನಡ ಭಾಷೆಗೆ ಪ್ರತಿಫಲ ಸಿಕ್ಕಿದೆ. ಕನ್ನಡಕ್ಕೆ ಗತ್ತು ಗಮ್ಮತ್ತು ಬರುವಂತಹ ಹೋರಾಟ ಅಂದು ನಡೆದಿತ್ತು. ಅಣ್ಣಾವ್ರು ಇಲ್ಲದಿದ್ದರು ಅದು ಜೀವಂತವಾಗಿದೆ. ಅಭಿಮಾನಿಗಳು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ."


Click it and Unblock the Notifications











