ಸಿಎಂ ಭೇಟಿ ಮಾಡಿದ ನಟಿ ಭಾರತಿ ವಿಷ್ಣುವರ್ಧನ್
ದಿವಂಗತ ಡಾ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ವಿಚಾರವಾಗಿ ಇಂದು (ಜೂನ್ 5) ನಟಿ ಭಾರತಿ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅವರಿಗೆ ಅಭಿನಂದನೆ ಸಲ್ಲಿಸಿದ ಭಾರತಿ ಅವರು ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುವುದರ ಕುರಿತು ಮಾತನಾಡಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಭಾರತಿ ಅವರು ''ಮುಖ್ಯಮಂತ್ರಿಗಳು ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಇರುವ ಕಾರಣ ಮುಂದಿನ ವಾರ ನಿಮ್ಮನ್ನ ಕರೆಸಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ'' ಎಂದು ತಿಳಿಸಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲಿ ಡಾ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಲಿ ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಜಾಗದ ವಿವಾದದಿಂದ ಬೇಸರಗೊಂಡಿರುವ ಭಾರತಿ ಅವರು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದ್ರೀಗ, ಅಭಿಮಾನಿಗಳು, ಅಭಿಮಾನ್ ಸ್ಟುಡಿಯೋ ಮಾಲೀಕರು ಹಾಗೂ ಭಾರತಿ ಅವರ ಮಧ್ಯೆ ಒಮ್ಮತ ನಿರ್ಧಾರವಿಲ್ಲದ ಕಾರಣ ಸ್ಮಾರಕ ವಿಳಂಬವಾಗಿದೆ.
ಈ ಸಮಸ್ಯೆಯನ್ನ ಬಗೆಹರಿಸಿ ಸ್ಮಾರಕ ನಿರ್ಮಾಣ ಮಾಡಲು ಯಾವ ಸರ್ಕಾರಕ್ಕೂ ಸಾಧ್ಯವಾಗಿಲ್ಲ. 2009ರಲ್ಲಿ ವಿಷ್ಣುವರ್ಧನ್ ಅವರು ನಿಧನರಾಗಿದ್ದರು. ಇಲ್ಲಿಯವರೆಗೂ ಬಿಎಸ್ ಯಡಿಯೂರಪ್ಪ, ಡಿವಿ ಸದಾನಂದ ಗೌಡ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಈಗ ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾರೆ.
ಈಗಲಾದರೂ ಈ ಸಮಸ್ಯೆ ಬಗೆಹರಿಸಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗುತ್ತಾ ಎಂಬುದು ಕಾದುನೋಡಬೇಕಿದೆ.


Click it and Unblock the Notifications











