ಕ್ರಿಕೆಟರ್ ಅಯ್ಯಪ್ಪ, ಆವತ್ತು ಶೂಟಿಂಗ್ ಅರ್ಧಕ್ಕೆ ಬಿಟ್ಟು ಹೋಗಿದ್ದಾದರೂ ಯಾಕೆ?
ನಟಿ ಪ್ರೇಮಾ ಅವರ ಮುದ್ದಿನ ತಮ್ಮ ಕನ್ನಡದ ಬಿಗ್ ಬಾಸ್ 3ರ ಸೈಲೆಂಟ್ ಸ್ಪರ್ಧಿ ಕ್ರಿಕೆಟರ್ ಅಯ್ಯಪ್ಪ ಅವರು ಕನ್ನಡದ ಬೆಳ್ಳಿತೆರೆಯ ಮೇಲೆ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಹೋಗಿ ಕೈ ಸುಟ್ಟುಗೊಂಡಿರುವ ಘಟನೆ ನಿಮಗೆ ತಿಳಿದಿದೆಯೇ?. ಇಲ್ವಾ ಹಾಗಿದ್ರೆ ನಾವು ಹೇಳ್ತೀವಿ.
ಹೌದು ಇದು ಸುಮಾರು 15 ವರ್ಷಗಳ ಹಿಂದಿನ ಕಥೆ, 'ಮಾರಿ ಕಣ್ಣು ಹೋರಿ ಮ್ಯಾಗೆ' ಚಿತ್ರದ ನಿರ್ದೇಶಕ ಕುಮಾರ್ ಅವರು 'ಲವ್ ಲವಿಕೆ' ಎಂಬ ಚಿತ್ರವನ್ನು ಮಾಡಿದ್ದು, ಈ ಚಿತ್ರದಲ್ಲಿ ಕ್ರಿಕೆಟರ್ ಅಯ್ಯಪ್ಪ ಅವರು ಇಬ್ಬರು ನಾಯಕಿಯರೊಂದಿಗೆ ರೊಮ್ಯಾನ್ಸ್ ಮಾಡಲು ಸಿದ್ಧರಾಗಿದ್ದರು. ನಿರ್ಮಾಪಕರಾದ ಎ.ಕೇಶವ್ ಮತ್ತು ನರಸಿಂಹ ಅವರು ಬಂಡವಾಳ ಹೂಡಿದ್ದರು.

ಅಂದಹಾಗೆ ಅಯ್ಯಪ್ಪ ಅವರು ಒಬ್ಬ ಉದಯೋನ್ಮುಖ ಕ್ರಿಕೆಟರ್ ಆಗಿದ್ದು, 18 ಜನರ ತಂಡದಿಂದ ಕರ್ನಾಟಕವನ್ನು ಅಯ್ಯಪ್ಪ ಅವರು ಪ್ರತಿನಿಧಿಸಿದ್ದರು. ಆ ಸಂದರ್ಭದಲ್ಲಿ ಇವರ ಅಕ್ಕ ಪ್ರೇಮಾ ಅವರು ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದರು.[ಪೂಜಾ ಗಾಂಧಿ ಮತ್ತು ಅಯ್ಯಪ್ಪ ನಡುವೆ ಸಂಥಿಂಗ್ ಸಂಥಿಂಗ್?]
ಇದೇ ಸಮಯದಲ್ಲಿ ಒಬ್ಬರು ಸ್ಟಾರ್ ಸಹೋದರನ್ನು ಸಿನಿಮಾ ಕ್ಷೇತ್ರಕ್ಕೆ ಪರಿಚಯ ಮಾಡಲು ಸರಿಯಾದ ಸಮಯವೆಂದು ಅಯ್ಯಪ್ಪ ಅವರನ್ನು ಬೆಳ್ಳಿತೆರೆಗೆ ಪರಿಚಯ ಮಾಡುವ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದು ಆಯ್ತು, ವೈಭವದಿಂದ ಅಯ್ಯಪ್ಪ ಅವರನ್ನು ಬೆಳ್ಳಿತೆರೆ ಮೇಲೆ ಕರೆತಂದಿದ್ದು, ಆಗಿತ್ತು.
ಚಿತ್ರದ ಮುಹೂರ್ತದ ದಿನದಂದು ಕೂಡ ಅಯ್ಯಪ್ಪ ಅವರೇ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದರು. ಅಲ್ಲದೇ ಆಕಾಶ್ ಎಂದು ಹೆಸರು ಬದಲಾಯಿಸಿಕೊಂಡು ಚಿತ್ರರಂಗಕ್ಕೆ ತಮ್ಮನ್ನು ತಾವು ಪರಿಚಯಿಸಿಕೊಂಡರು. ನಟಿಯರಾದ ಚೈತ್ರಾ ಹಳ್ಳಿಕೇರಿ ಮತ್ತು ಶಿಲ್ಪಾ ಅವರು ಅಯ್ಯಪ್ಪ ಅವರಿಗೆ ನಾಯಕಿಯರಾದರೆ, ನಟಿ ರಕ್ಷಿತಾ ಅವರ ಅಪ್ಪ ಬಿ.ಸಿ ಗೌರಿಶಂಕರ್ ಅವರು ಸಿನಿಮಾಟೊಗ್ರಾಫರ್ ಆಗಿ ಕೆಲಸ ಮಾಡಲು ತಯಾರಾಗಿದ್ದರು.
ಆದರೆ ಅಲ್ಲೇ ಎಲ್ಲರಿಗೂ ಕಾದಿದ್ದ ದೊಡ್ಡ ಆಶ್ಚರ್ಯವೇನೆಂದರೆ, ಕೇವಲ ಒಂದು ದಿನದ ಶೂಟಿಂಗ್ ನಂತರ ಕ್ರಿಕೆಟರ್ ಅಯ್ಯಪ್ಪ ಅವರು ಚಿತ್ರದಿಂದ ಹೊರನಡೆದಿದ್ದು,[ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು, ಪ್ರೀತಿ-ಪ್ರೇಮ!]

ತದನಂತರ ಅಯ್ಯಪ್ಪ ಅವರ ಜಾಗಕ್ಕೆ ನಟ ನವೀನ್ ಮಯೂರ್ ಬಂದು ಚಿತ್ರವನ್ನು ಕಂಪ್ಲೀಟ್ ಮಾಡಿದ್ದು, ಎಲ್ಲಾ ಹಳೇ ಕಥೆ. ಆದರೆ ಅಯ್ಯಪ್ಪ ಅವರು ಯಾಕೆ ಚಿತ್ರದಿಂದ ಹೊರನಡೆದರು ಅನ್ನೋ ವಿಷ್ಯಾ ಇವತ್ತಿಗೂ ಟಾಪ್ ಸೀಕ್ರೆಟ್ ಆಗಿ ಉಳಿದಿತ್ತು.
ಇದೀಗ ಆ ಪ್ರಶ್ನೆಗೂ ಉತ್ತರ ದೊರೆತಿದ್ದು, ನಿರ್ದೇಶಕ ಕುಮಾರ್ ಹೇಳುವ ಪ್ರಕಾರ ಸಿನಿಮಾಟೋಗ್ರಾಫರ್ ಗೌರಿಶಂಕರ್ ಅವರು 'ಅಯ್ಯಪ್ಪ ಅವರಿಗೆ ನಟನೆಯ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲ' ಎಂದು ನಿರ್ದೇಶಕರ ಬಳಿ ಮತ್ತು ನಿರ್ಮಾಪಕರ ಹತ್ತಿರ ವಾದಿಸಿದರಂತೆ.
ಇದಕ್ಕೆ ನಿರ್ದೇಶಕ ಕುಮಾರ್ ಅವರು 'ಅಯ್ಯಪ್ಪ ಅವರಿಗೆ ಸ್ವಲ್ಪ ಬ್ರೇಕ್ ಕೊಟ್ಟು ನಟನೆಯ ಬಗ್ಗೆ ಟ್ರೈನಿಂಗ್ ಕೊಡಿಸೋಣ' ಎಂದರೂ ಕೇಳದೆ ನಿರಾಕರಿಸಿದರಂತೆ. ಅದರಂತೆ ಮಾರನೇ ದಿನವೇ ಅಯ್ಯಪ್ಪ ಅವರ ಜಾಗವನ್ನು ನವೀನ್ ಮಯೂರ್ ಅವರು ತುಂಬಿ ಚಿತ್ರೀಕರಣ ಮುಗಿಸಿದರಂತೆ.
ಈವರೆಗೂ 'ಲವ್ ಲವಿಕೆ' ಚಿತ್ರ ಬಿಡುಗಡೆಗೊಳ್ಳದೇ, ಡಬ್ಬಾದಲ್ಲೇ ಅವಿತು ಕುಳಿತಿತ್ತು. ಆದರೆ ನಿರ್ಮಾಪಕರು ಚಿತ್ರ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ ಅನ್ನೋದು ಸದ್ಯದ ಸುದ್ದಿ. (ಚಿತ್ರಕೃಪೆ: ಚಿತ್ರಲೋಕ)


Click it and Unblock the Notifications











