ನಲ್ಮೆಯ ಅಂಬಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನವೀನ್ ಸಜ್ಜು
ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಸುದ್ದಿ ಇಡೀ ಕರುನಾಡಿಗೆ ಬರಸಿಡಿಲಿನಂತೆ ಬಡಿದಿತ್ತು. ಅಂದು ಇಡೀ ಕರ್ನಾಟಕ ಸ್ತಬ್ಧವಾಗಿತ್ತು. ಅದೇ ರೀತಿ 'ಬಿಗ್ ಬಾಸ್' ಮನೆಯೊಳಗಿದ್ದ ಸ್ಪರ್ಧಿಗಳಿಗೆ ಅಂಬರೀಶ್ ವಿಧಿವಶರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಗೊಂಡರು.
ಅದರಲ್ಲೂ, ಮಂಡ್ಯದಲ್ಲೇ ಹುಟ್ಟಿ ಬೆಳೆದ ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ಅಂತೂ ಅಕ್ಷರಶಃ ಶಾಕ್ ಆದರು. ಅಂಬಿಯನ್ನು ನೆನೆದು ನವೀನ್ ಸಜ್ಜು ಕಣ್ಣೀರಿಟ್ಟರು. ಅಂಬಿಯ ಅಪ್ಪಟ ಅಭಿಮಾನಿಯಾಗಿದ್ದ ನವೀನ್ ಸಜ್ಜು ಇದೀಗ ಅಂಬಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಹೌದು, 'ಬಿಗ್ ಬಾಸ್' ಮನೆಯಿಂದ ಹೊರಗೆ ಬರುತ್ತಿದ್ದ ಹಾಗೆ ನವೀನ್ ಸಜ್ಜು ಮಾಡಿದ ಮೊಟ್ಟಮೊದಲ ಕೆಲಸ ಅಂದ್ರೆ ಇದೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಇದೆ ಓದಿರಿ...

ಅಂಬಿ ಸಮಾಧಿಗೆ ನವೀನ್ ಸಜ್ಜು ನಮನ
'ಬಿಗ್ ಬಾಸ್' ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ, ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಿಂದ ಹೊರಟ ನವೀನ್ ಸಜ್ಜು ನೇರವಾಗಿ ಆಗಮಿಸಿದ್ದು ಕಂಠೀರವ ಸ್ಟುಡಿಯೋ ಗೆ. ಅಲ್ಲಿರುವ ಅಂಬರೀಶ್ ಅವರ ಸಮಾಧಿಗೆ ನವೀನ್ ಸಜ್ಜು ನಮನ ಸಲ್ಲಿಸಿದರು. ಜೊತೆಗೆ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿಗೂ ಪೂಜೆ ಸಲ್ಲಿಸಿದರು.

ಭಾವುಕರಾದ ನವೀನ್ ಸಜ್ಜು
''ಅಂಬಿ ಅಣ್ಣನ ಸಾವು ದೊಡ್ಡ ಆಘಾತ ತಂದಿತ್ತು. 'ಬಿಗ್ ಬಾಸ್'ನಲ್ಲಿ ನಾನೇನೇ ಗೆದ್ದಿದ್ದರೂ, ಅದನ್ನ ಅಂಬಿ ಅಣ್ಣನಿಗೆ ಅರ್ಪಿಸುವೆ. ನನಗೆ ಅವರ ಮುಖವನ್ನು ಕೊನೆಯ ಬಾರಿಗೆ ನೋಡಲು ಆಗಲಿಲ್ಲ ಎಂಬ ನೋವಿದೆ'' ಎಂದು ಭಾವುಕರಾಗಿ ನುಡಿದರು ನವೀನ್ ಸಜ್ಜು.

ಮೆಲುಕು ಹಾಕಿದ ನವೀನ್
''ನಾನು ಅಂಬರೀಶ್ ರವರ ಕಟ್ಟಾ ಅಭಿಮಾನಿ. ಅಂಬಿ ಅಣ್ಣನನ್ನು ಕೆಸಿಸಿ ಟೂರ್ನಮೆಂಟ್ ನಲ್ಲಿ ನಾನು ಭೇಟಿಯಾಗಿದ್ದೆ. ಹೋಗ್ಲಾ ಬರ್ಲಾ ಅಂತ ನನ್ನ ಮಂಡ್ಯ ಭಾಷೆಯಲ್ಲಿ ಮಾತನಾಡಿಸುತ್ತಿದ್ದರು'' ಎಂದು ಇದೇ ಸಮಯದಲ್ಲಿ ಅಂಬಿ ಜೊತೆಗಿನ ಒಡನಾಟವನ್ನು ನವೀನ್ ಸಜ್ಜು ಮೆಲುಕು ಹಾಕಿದರು.

ಇಷ್ಟು ಸಾಕು
''ನೀವೇ ಬಿಗ್ ಬಾಸ್ ಗೆಲ್ಲಬೇಕಿತ್ತು ಅಂತ ಎಷ್ಟೋ ಜನ ಹೇಳುತ್ತಿದ್ದಾರೆ. ಇದು ಬಿಗ್ ಬಾಸ್ ಗೆಲುವಿಗಿಂತ ನನಗೆ ಜಾಸ್ತಿ ಖುಷಿ ಕೊಟ್ಟಿದೆ. ಜನ ನನ್ನ ಇಷ್ಟಪಟ್ಟಿದ್ದಾರೆ. ಅಷ್ಟು ಸಾಕು'' ಎಂದು ಹೇಳಿದರು 'ಬಿಗ್ ಬಾಸ್ ಕನ್ನಡ 6' ರನ್ನರ್ ಅಪ್ ನವೀನ್ ಸಜ್ಜು.


Click it and Unblock the Notifications











