ಹೀರೋ ಆದ ಬಿಗ್ ಬಾಸ್-6 ವಿನ್ನರ್ 'ಮಾಡರ್ನ್ ರೈತ' ಶಶಿ ಕುಮಾರ್
Recommended Video
ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯ ವಿನ್ನರ್ ಶಶಿ ಕುಮಾರ್ ಈಗ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅನೇಕರಲ್ಲಿದೆ. ಮಾಡರ್ನ್ ರೈತ ಎಂದು ಗುರುತಿಸಿಕೊಂಡಿದ್ದ ಶಶಿ ಬಿಗ್ ಬಾಸ್ ಮನೆಯಲ್ಲಿ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಬಿಗ್ ಬಾಸ್ ವಿನ್ನರ್ ಪಟ್ಟ ಮುಡಿಗೇರಿಸಿಕೊಂಡ ನಂತರ ಶಶಿ ತನ್ನ ಕನಸಿನ ಸಾವಯವ ಉತ್ಪನ್ನಗಳ ಗ್ರೀನ್ ಸೆನ್ಸ್ ಶಾಪ್ ತೆರೆದು ಕನಸು ನನಸು ಮಾಡಿಕೊಂಡಿದ್ದಾರೆ.
ಇತ್ತೀಚಿಗಷ್ಟೆ ಅದ್ದೂರಿಯಾಗಿ ಗ್ರೀನ್ ಸೆನ್ಸ್ ಶಾಪ್ ಉದ್ಘಾಟನೆ ಮಾಡಿದ್ದ ಶಶಿ ಈಗ ಸಿನಿಮಾ ಹೀರೋ ಆಗಲು ಹೊರಟಿದ್ದಾರೆ. ಹೌದು, ಶಶಿ 'ಮೆಹಬೂಬ' ಸಿನಿಮಾದಲ್ಲಿ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ. ಈ ಮೂಲಕ ಶಶಿ ಬಳ್ಳಿ ಪರದೆ ಮೇಲೆ ರಾರಾಜಿಸಲು ತಯಾರಾಗುತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಆಂಟೋನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಮೆಹಬೂಬ' ಮೂಲಕ ಅನೂಪ್ ಕೂಡ ಮೊದಲ ಬಾರಿಗೆ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೆ ತಿಂಗಳು 11ಕ್ಕೆ ವಿಜಯನಗರದ ಮಾರುತಿ ಮಂದಿರದಲ್ಲಿ ಚಿತ್ರದ ಮುಹೂರ್ತ ಅದ್ದೂರಿಯಾಗಿ ನಡೆಸಲು ಚಿತ್ರತಂಡ ಪ್ಲಾನ್ ಮಾಡಿದೆ. ಅಂದ್ಹಾಗೆ ಮೆಹಬೂಬ ರೋಮ್ಯಾಂಟಿಂಗ್ ಚಿತ್ರವಾಗಿದೆಯಂತೆ. ಚಿತ್ರಕ್ಕೆ ನೀರ್ ದೋಸೆ ಖ್ಯಾತಿಯ ನಿರ್ಮಾಪಕ ಪ್ರಸನ್ನ ಶ್ರೀನಿವಾಸ್ ಬಂಡವಾಳ ಹೂಡುತ್ತಿದ್ದಾರೆ.

ಶಶಿ ಕುಮಾರ್ ಗೆ ನಾಯಕಿಯಾಗಿ 'ಬೊಂಬೆಗಳ ಲವ್' ಖ್ಯಾತಿಯ ನಟಿ ಪಾವನ ಅಭಿನಯಿಸುತ್ತಿದ್ದಾರೆ. ಬಿಗ್ ಬಾಸ್ ಸೀಸನ್-6 ಮುಗಿದು ವರ್ಷ ಕಳೆದಿದೆ. ಸದ್ಯ ಬಿಗ್ ಬಾಸ್ ಸೀಸನ್-7 ನಡೆಯುತ್ತಿದೆ. ವರ್ಷದ ಬಳಿಕ ಶಶಿ ನಾಯಕನಾಗಿ ಮಿಂಚಲು ರೆಡಿಯಾಗುತ್ತಿದ್ದಾರೆ. ಶಶಿ ಅದ್ಭುತ ನೃತ್ಯಗಾರ ಕೂಡ. ಚಿತ್ರದಲ್ಲಿ ಶಶಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ, ಪಾತ್ರ ಹೇಗಿರಲಿದೆ ಎನ್ನುವದು ಶಶಿ ಅಭಿಮಾನಿಗಳ ಕುತೂಹಲ.


Click it and Unblock the Notifications











