'ಶ್ರೀಮಂತುಡು' ಹೃದಯವಂತಿಕೆಗೆ ಮನಸೋತ 'ಸಾಮ್ರಾಟ್' ಅಶೋಕ್
ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಶ್ರೀಮಂತುಡು' ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ನಲ್ಲಿ 'ಶ್ರೀಮಂತುಡು' ದಾಖಲೆ ಮಾಡದೇ ಇದ್ದರೂ, ಚಿತ್ರದಲ್ಲಿರುವ ಗ್ರಾಮ ದತ್ತು ಪಡೆಯುವ ಕಾನ್ಸೆಪ್ಟ್ ಮಾತ್ರ ಅನೇಕರಿಗೆ ಸ್ಪೂರ್ತಿಯಾಗಿದೆ. ಅಂಥವರಲ್ಲಿ ಬಿಜೆಪಿ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಕೂಡ ಒಬ್ಬರು.!
ನೀವು ನಂಬ್ತೀರೋ, ಬಿಡ್ತೀರೋ...ಬಿಬಿಎಂಪಿ ಎಲೆಕ್ಷನ್ ಬಿಜಿಯಲ್ಲಿದ್ದರೂ, ಕೊಂಚ ಬಿಡುವು ಮಾಡಿಕೊಂಡು ಮೊನ್ನೆಯಷ್ಟೇ 'ಶ್ರೀಮಂತುಡು' ಚಿತ್ರವನ್ನ ಆರ್. ಅಶೋಕ್ ವೀಕ್ಷಿಸಿದ್ದಾರೆ. ಅದು ನರೇಂದ್ರ ಮೋದಿ ಅವರ ಗ್ರಾಮ ದತ್ತು ಪಡೆಯುವ ಯೋಜನೆ 'ಶ್ರೀಮಂತುಡು' ಸಿನಿಮಾದಲ್ಲಿದೆ ಅಂತ ಗೊತ್ತಾದ ಮೇಲೆ.

ಅಸಲಿಗೆ, ಬಿಬಿಎಂಪಿ ಚುನಾವಣೆ ಫಲಿತಾಂಶ ಆರ್.ಅಶೋಕ್ ಅವರನ್ನ ಒತ್ತಡಕ್ಕೆ ಸಿಲುಕಿಸಿತ್ತು. ಮನಸ್ಸನ್ನ ಕೊಂಚ ಫ್ರೀ ಮಾಡಿಕೊಳ್ಳುವ ಸಲುವಾಗಿ ಸಿನಿಮಾ ನೋಡಬೇಕು ಅಂದುಕೊಂಡಾಗ ಅವರಿಗೆ 'ಶ್ರೀಮಂತುಡು' ಸಿನಿಮಾ ಮತ್ತು ಚಿತ್ರದ ಆಶಯದ ಬಗ್ಗೆ ಗೊತ್ತಾಗಿದೆ. ತಕ್ಷಣ ಆರ್.ಅಶೋಕ್ ಸಿನಿಮಾ ನೋಡಿದ್ದಾರೆ.
''ಶ್ರೀಮಂತುಡು ಬಹಳ ಒಳ್ಳೆಯ ಸಿನಿಮಾ. ಚಿತ್ರದ ಕಾನ್ಸೆಪ್ಟ್ ತುಂಬಾ ಇಷ್ಟ ಆಯ್ತು. ಬರೀ ಗ್ರಾಮ ದತ್ತು ಪಡೆಯುವುದು ಮುಖ್ಯ ಅಲ್ಲ. ಗ್ರಾಮಕ್ಕೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನ ಒದಗಿಸಬೇಕು. ಆಸ್ಪತ್ರೆ, ರೋಡ್ ಗಳು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ನೀಡಬೇಕು. ಅದನ್ನೆಲ್ಲಾ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಬಿಜೆಪಿ ನಾಯಕ ಆರ್.ಅಶೋಕ್ ಮಾತನಾಡಿದರು. ['ಶ್ರೀಮಂತುಡು' ಚಿತ್ರ ವೀಕ್ಷಿಸುತ್ತಾರಾ ನರೇಂದ್ರ ಮೋದಿ?]
ಅಷ್ಟಕ್ಕೂ, ಆರ್.ಆಶೋಕ್ ಅವರು ಸಿನಿಮಾ ನೋಡುವುದೇ ಅಪರೂಪವಂತೆ. '3 ಈಡಿಯೆಟ್ಸ್', 'ಲಗಾನ್' ನಂತಹ ಕಥಾಹಂದರ ಹೊಂದಿರುವ ಚಿತ್ರಗಳಂದ್ರೆ ಆರ್.ಆಶೋಕ್ ಅವರಿಗೆ ಇಷ್ಟವಂತೆ. ಈಗ 'ಶ್ರೀಮಂತುಡು' ಅವರ ಮನಸ್ಸು ಗೆದ್ದಿದೆ.
'ಶ್ರೀಮಂತುಡು' ಸಿನಿಮಾದಿಂದ ಸ್ಪೂರ್ತಿ ಪಡೆದಿರುವ ಆರ್.ಅಶೋಕ್, ಮೋದಿಯವರ ಆಶಯದಂತೆ ಗ್ರಾಮವೊಂದನ್ನ ದತ್ತು ಪಡೆಯುವ ನಿರ್ಧಾರ ಮಾಡಿದ್ದಾರೆ. ಎಲೆಕ್ಷನ್ ಜವಾಬ್ದಾರಿಗಳೆಲ್ಲಾ ಕಳೆದ ಬಳಿಕ ಈ ಕಾರ್ಯವನ್ನ ನೆರವೇರಿಸಲಿದ್ದಾರೆ.


Click it and Unblock the Notifications











