ಖಾನ್ಗಳು ದೇಶಬಿಟ್ಟು ತೊಲಗಲಿ: ಶಾಸಕ ಯತ್ನಾಳ
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಾಲಿವುಡ್ನ ಖಾನ್ ತ್ರಯರ ವಿರುದ್ಧ ಗುಡುಗಿದ್ದಾರೆ. ಖಾನ್ಗಳು ಕೂಡಲೇ ದೇಶಬಿಟ್ಟು ತೊಲಗಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ, ''ಶಾರುಖ್ ಖಾನ್ ಪುತ್ರ ಡ್ರಗ್ಸ್ ಜಾಲದಲ್ಲಿ ಸಿಕ್ಕಿಬಿದ್ದಿರುವುದು ಖಾನ್ಗಳಿಂದ ದೇಶಕ್ಕೆ ಬರಬಹುದಾದ ಅಪಾಯದ ಮುನ್ಸೂಚನೆ. ಖಾನ್ಗಳು ಕೂಡಲೇ ದೇಶ ಬಿಟ್ಟು ತೊಲಗಬೇಕು, ಮಾದಕ ವಸ್ತು ಸೇವನೆಗೆ ಪ್ರಶಸ್ತವಾಗಿರುವ ಅಫ್ಘಾನಿಸ್ತಾನಕ್ಕೆ ತೆರಳಿ ಅಲ್ಲಿಯೇ ನಟನೆ ಮಾಡಿಕೊಂಡಿರಲಿ'' ಎಂದಿದ್ದಾರೆ ಯತ್ನಾಳ್.
''ಭಾರತದಲ್ಲಿ ಖಾನ್ಗಳು ಮಾಡುವ ಸಿನಿಮಾಗಳನ್ನು ಕೋಟ್ಯಂತರ ಹಿಂದುಗಳು ನೋಡಿ ಅವರಿಗೆ ಆದಾಯ ಮಾಡಿಕೊಡುತ್ತಿದ್ದಾರೆ. ಆದರೆ ಅವರ ಮಕ್ಕಳು ಡ್ರಗ್ಸ್ ಸೇವನೆಯಂಥಹಾ ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು ಯತ್ನಾಳ.

''ಡ್ರಗ್ಸ್ ಹಣದಿಂದ ಭಯೋತ್ಪಾದನೆಗೆ ಫಂಡಿಂಗ್ ಆಗುತ್ತದೆ. ಡ್ರಗ್ಸ್ ಮಟ್ಟ ಹಾಕಿದರೆ ಭಯೋತ್ಪಾದನೆಯನ್ನು ಜಡದಿಂದ ಕಿತ್ತೊಗೆಯುವುದು ಸುಲಭ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಲಸ ಆರಂಭಿಸಿದ್ದಾರೆ'' ಎಂದು ಯತ್ನಾಳ ಹೇಳಿದರು.
ಸಿನಿಮಾ ನಟರು ಡ್ರಗ್ಸ್ ಮಾಫಿಯಾದ ಒಂದು ಭಾಗ. ಡ್ರಗ್ಸ್ ಮಾಫಿಯಾ ಭಯೋತ್ಪಾದನೆಯ ಒಂದು ಭಾಗ. ಹಿಂದು ಯುವಕರನ್ನು ಅದರಲ್ಲಿಯೂ ಚೆನ್ನಾಗಿ ಓದಿಕೊಂಡಿರುವ ಶಿಕ್ಷತ ಯುವಕರನ್ನು ಗುರಿಯಾಗಿಸಿಕೊಂಡು ಅವರನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸುವ ಕಾರ್ಯ ಆಗುತ್ತಿದೆ, ಇದರ ವಿರುದ್ಧ ಎಬಿವಿಪಿ ಸಂಘಟನೆಯು ರಾಜ್ಯದಾದ್ಯಂತ ಹೋರಾಟ ನಡೆಸುತ್ತಿದೆ ಎಂದರು.
ಡ್ರಗ್ಸ್ ಮೂಲಕ ಹಿಂದು ಯುವಕರ ಪುರುಷತ್ವ ಕುಗ್ಗಿಸುವ ಹುನ್ನಾರ ನಡೆಯುತ್ತಿದೆ. ಆ ಮೂಲಕ ಹಿಂದುಗಳ ಜನಸಂಖ್ಯೆ ಕುಗ್ಗಿಸುವ ದೂರಗಾಮಿ ಆಲೋಚನೆಯೂ ಡ್ರಗ್ಸ್ ಮಾಫಿಯಾದ ಹಿಂದೆ ಇದೆ. ದೇಶ ಭಕ್ತರಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾವನ್ನು ವ್ಯವಸ್ಥಿತವಾಗಿ ಮಟ್ಟ ಹಾಕಬೇಕು ಎಂದಿದ್ದಾರೆ.
ಬೆಂಗಳೂರಿನ ಡ್ರಗ್ಸ್ ಪ್ರಕರಣದಲ್ಲಿಯೂ ಪ್ರಭಾವಿಗಳು, ಪ್ರಭಾವಿಗಳ ಮಕ್ಕಳು, ಸಿನಿಮಾ ನಟ-ನಟಿಯರು ಭಾಗಿಯಾಗಿದ್ದಾರೆ. ಆ ಪ್ರಕರಣ ತನಿಖೆ ಪೂರ್ಣವಾಗಿ ನಡೆದಿಲ್ಲ. ತಮಗೆ ಬೇಕಿದ್ದಷ್ಟನ್ನು ಮಾತ್ರವೇ ತನಿಖೆ ನಡೆಸಿದ್ದಾರೆ. ಆಳವಾದ ತನಿಖೆ ನಡೆಸಿದರೆ ಕಾಂಗ್ರೆಸ್ ಶಾಸಕರು ಸಹ ಸಿಕ್ಕಿಬೀಳುತ್ತಾರೆ. ರಾಜ್ಯದಲ್ಲಿನ ಡ್ರಗ್ಸ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳು, ಸಿನಿಮಾ ನಟರು ಶಾಮೀಲಾಗಿರುವ ಕಾರಣ ಆ ಪ್ರಕರಣವನ್ನು ಮುಚ್ಚಿ ಹಾಕಲಾಯಿತು. ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿಯ ಕೆಲ ಶಾಸಕರ ಮಕ್ಕಳ ಹೆಸರುಗಳು ಸಹ ಹೊರ ಬರುತ್ತಿದ್ದವು ಎಂದರು ಶಾಸಕ ಯತ್ನಾಳ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಎನ್ಸಿಬಿಯು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದೆ. ಮುಂಬೈನಲ್ಲಿ ಐಶಾರಾಮಿ ಕ್ರೂಸ್ ಶಿಪ್ನಲ್ಲಿ ಪಾರ್ಟಿ ಮೇಲೆ ದಾಳಿ ನಡೆಸಿದ ಎನ್ಸಿಬಿ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಲ್ಲದೆ ಎಂಟು ಮಂದಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಅವರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ಅವರ ಗೆಳೆಯ ಅರ್ಬಾಜ್ ಸೇಠ್ ಮರ್ಚೆಂಟ್ ಹಾಗೂ ಮಾಡೆಲ್ ಮುನ್ಮುನ್ ಧಮೇಚಾ ಅವರುಗಳನ್ನು ಬಂಧಿಸಿದೆ. ಆರ್ಯನ್ ಖಾನ್ ಅನ್ನು ಅಕ್ಟೋಬರ್ 07ರವರೆಗೆ ಎನ್ಸಿಬಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.


Click it and Unblock the Notifications











