ಸ್ಯಾಂಡಲ್ವುಡ್ನಲ್ಲೂ ಶುರುವಾಯ್ತು ಅನಿಷ್ಟ 'ಬಾಯ್ಕಾಟ್' ಟ್ರೆಂಡ್: 'ಬನಾರಸ್' ಸಿನಿಮಾಕ್ಕೆ ವಿರೋಧ
ಬಾಲಿವುಡ್ ಅನ್ನು ಕಾಡುತ್ತಿರುವ ಅನಿಷ್ಟ 'ಬಾಯ್ಕಾಟ್' ಟ್ರೆಂಡ್ ಇದೀಗ ಸ್ಯಾಂಡಲ್ವುಡ್ಗೂ ಕಾಲಿಟ್ಟಿದೆ. ಧರ್ಮದ ಕಾರಣಕ್ಕೆ ಸಿನಿಮಾಗಳನ್ನು ಬಾಯ್ಕಾಟ್ ಮಾಡುವಂತೆ ಒತ್ತಾಯಿಸುತ್ತಿರುವ ಅನಿಷ್ಟ ಪದ್ಧತಿ ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ನಲ್ಲಿ ಕಾಣಿಸಿಕೊಂಡಿದೆ.
ಸಚಿವ ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ನಟಿಸಿರುವ ಕನ್ನಡ ಸಿನಿಮಾ 'ಬನಾರಸ್' ವಿರುದ್ಧ ಕೆಲವು ಕಿಡಿಗೇಡಿಗಳು 'ಬಾಯ್ಕಾಟ್' ಟ್ರೆಂಡ್ ಮಾಡುತ್ತಿದ್ದಾರೆ.
ಝೈದ್ ಖಾನ್ರ ಮೊದಲ ಸಿನಿಮಾ 'ಬನಾರಸ್' ಆಗಿದ್ದು ಈ ಸಿನಿಮಾ ನವೆಂಬರ್ 04 ರಂದು ತೆರೆಗೆ ಬರುತ್ತಿದೆ. ಸಿನಿಮಾಕ್ಕೆ ಜಯತೀರ್ಥ ಆಕ್ಷನ್ ಕಟ್ ಹೇಳಿದ್ದಾರೆ. ಝೈದ್ ಖಾನ್ರ ತಂದೆ, ಸಚಿವ ಜಮೀರ್ ಅಹ್ಮದ್ ಅವರ ರಾಜಕೀಯ ನಿಲವುಗಳನ್ನು ಮುಂದಿಟ್ಟುಕೊಂಡು ಇದೀಗ ಮಗನ ಸಿನಿಮಾಕ್ಕೆ ಬಹಿಷ್ಕಾರದ ಕೂಗು ಹಾಕಲಾಗುತ್ತಿದೆ.

#BoycottBanaras ಹೆಸರಿನ ಹ್ಯಾಷ್ಟ್ಯಾಗ್ ಅನ್ನು ಟ್ರೆಂಡ್ ಮಾಡಲಾಗುತ್ತಿದ್ದು, ''ಹಿಂದೂಗಳ ಸಾರ್ವಜನಿಕ ಗಣೇಶೋತ್ಸವ ವಿರೋಧ ಮಾಡುವ ಜಮೀರ್ ಅಹ್ಮದ್ ಖಾನನ ಮಗನ ಪಿಲ್ಮ್ ಬನಾರಸ ಸಿನೆಮಾವನ್ನು ಬಹಿಷ್ಕಾರ ಮಾಡಿರಿ'' ಎಂದು ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಸಿನಿಮಾದ ಕೆಲವು ಪೋಸ್ಟರ್ಗಳನ್ನು ಹಂಚಿಕೊಂಡು ಅದರ ಬಗ್ಗೆಯೂ ತಕರಾರು ತೆಗೆಯಲಾಗಿದೆ.
'ಬನಾರಸ್' ಸಿನಿಮಾ ಅಪ್ಪಟ ಪ್ರೇಮಕತೆಯಾಗಿದ್ದು ದೇವಾಲಯಗಳ ಬೀಡು ವಾರಣಾಸಿಯಲ್ಲಿ ಸ್ಥಿತವಾದ ಪ್ರೇಮಕತೆ ಇದಾಗಿದೆ. ಸಿನಿಮಾದ ಹಾಡು ಈಗಾಗಲೇ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ.
ಆದರೆ ಈಗ ಕೆಲವರು ಜಮೀರ್ ಅಹ್ಮದ್ ಅವರ ಮೇಲಿನ ರಾಜಕೀಯ ದ್ವೇಷದಿಂದ ಕನ್ನಡ ಸಿನಿಮಾವನ್ನು ಭಹಿಷ್ಕರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಸಲಿಗೆ ಝೈದ್ ಖಾನ್, ಈವರೆಗೆ ರಾಜಕೀಯದ ಕಡೆ ಆಸಕ್ತಿ ಪ್ರದರ್ಶಿಸಿಲ್ಲ. ಅವರಿಗೆ ನಟನೆ ಬಗ್ಗೆ ಆಸಕ್ತಿಯಿದ್ದ ಕಾರಣ ನಟನಾ ತರಬೇತಿ ಪಡೆದು ಇದೀಗ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿ ಮೊದಲ ಸಿನಿಮಾದ ಬಿಡುಗಡೆಗೆ ಸಜ್ಜಾಗಿದ್ದಾರೆ. ಆದರೆ ಕೆಲವರು ಅವರ ಸಿನಿಮಾವನ್ನು ಸಲ್ಲದ ಕಾರಣಕ್ಕೆ ಬಹಿಷ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.


Click it and Unblock the Notifications











