'ಪೊಗರು' ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ: ಹೋರಾಟದ ಎಚ್ಚರಿಕೆ
ಇತ್ತೀಚೆಗೆ ಬಿಡುಗಡೆ ಆದ ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ ವಿವಾದಕ್ಕೆ ಸಿಲುಕಿದೆ. ಸಿನಿಮಾದ ವಿರುದ್ಧ ಬ್ರಾಹ್ಮಣ ಸಮುದಾಯ ಸಿಡಿದು ನಿಂತಿದೆ.
ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಹೇಳನ ಮಾಡಿರುವುದರ ಬಗ್ಗೆ ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ. ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವುದು ನಿರ್ದೇಶಕರ ಕಳಪೆ ಸೃಜನಶೀಲತೆಗೆ ಸಾಕ್ಷಿ ಎಂದೂ ಸಹ ಕೆಲವರು ಹೇಳಿದ್ದಾರೆ.
'ಪೊಗರು' ಚಿತ್ರತಂಡವು ಬ್ರಾಹ್ಮಣರನ್ನು ಅವಹೇಳನ ಮಾಡುವ ದೃಶ್ಯಗಳನ್ನು ಸಿನಿಮಾದಿಂದ ತೆಗೆಯದಿದ್ದಲ್ಲಿ, ದೂರು ನೀಡುವ ಜೊತೆಗೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ. ಈ ಬಗ್ಗೆ ಬಹಿರಂಗ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪೊಗರು ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ
'ಇತ್ತೀಚಿಗಷ್ಟೆ ತೆರೆಕಂಡ ನಂದ ಕಿಶೋರ್ ನಿರ್ದೇಶನದ ಕನ್ನಡದ "ಪೊಗರು" ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವುದು ನಿಜಕ್ಕೂ ಖಂಡನೀಯ, ಬ್ರಾಹ್ಮಣರು ತಿರುಗಿ ಬಿಳುವುದಿಲ್ಲ ಅನ್ನುವ ಆಲೋಚನೆ ಇದ್ದಾರೆ ಅದು ತಪ್ಪು ಕಲ್ಪನೆ, ನಾನು ನಿರ್ದೇಶಕರಿಗೆ ಈ ಕೂಡಲೇ ಅವಹೇಳನಕಾರಿ ಪದವನ್ನು ಚಿತ್ರದಿಂದ ತೆಗೆದು ಹಾಕಬೇಕೆಂದು ಆಗ್ರಹಿಸುತ್ತೇನೆ' ಎಂದಿದ್ದಾರೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ.

ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ: ಸಚ್ಚಿದಾನಂದ ಮೂರ್ತಿ
'ಅವಹೇಳಕಾರಿ ದೃಶ್ಯಗಳನ್ನು ಸಿನಿಮಾದಿಂದ ತೆಗೆಯದಿದ್ದಲ್ಲಿ ಮಂಗಳವಾರ ದಿನಾಂಕ 23.02.2021ರಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸುತ್ತೆವೆ ಮತ್ತು ಬುಧವಾರ ದಿನಾಂಕ 24.02.2021 ರಂದು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೆವೆ' ಎಂದು ಎಚ್ಚರಿಕೆ ನೀಡಿದ್ದಾರೆ ಸಚ್ಚಿದಾನಂದ ಮೂರ್ತಿ.

'ಮಾಜಿ ಸಿಎಂ ಸಿದ್ದರಾಮಯ್ಯ ಕ್ಷಮೆ ಯಾಚಿಸಿದ್ದಾರೆ'
'ಇತ್ತೀಚೆಗೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡಿ ನಂತರ ಕ್ಷಮೆ ಯಾಚಿಸಿದ್ದಾರೆ, ಉನ್ನತ ಸ್ಥಾನದಲ್ಲಿರುವ ನೀವು ಹೀಗೆ ಮಾತನಾಡುವುದು ನಿಮಗೆ ಶೋಭೆ ತರುವಂತಹುದಲ್ಲ, ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಒಳ್ಳೆಯದು' ಎಂದು ಹೇಳಿದ್ದಾರೆ ಸಚ್ಚಿದಾನಂದ ಮೂರ್ತಿ.

ಹೋಮ ಮಾಡುತ್ತಿರುವ ಬ್ರಾಹ್ಮಣನ ಹೆಗಲ ಮೇಲೆ ಬೂಟು
ಸಿನಿಮಾದಲ್ಲಿ ಹೋಮ ಮಾಡುತ್ತಿರುವ ಬ್ರಾಹ್ಮಣನ ಹೆಗಲ ಮೇಲೆ ಬೂಟು ಕಾಲಿಡುವ ದೃಶ್ಯವಿದೆ. ಅದಾದ ಬಳಿಕ ನಾಯಕನೇ ವೃದ್ಧ ಬ್ರಾಹ್ಮಣನನೊಬ್ಬನನ್ನು ಅಪಹರಿಸುತ್ತಾನೆ. ಅವರ ವೃತ್ತಿಯ ಬಗ್ಗೆಯೂ ಕೀಳಾಗಿ ಮಾತನಾಡುವ ಸಂಭಾಷಣೆ ಇದೆ. ಇದು ಹಲವು ಬ್ರಾಹ್ಮಣರಿಗೆ ಸಿಟ್ಟು ತರಿಸಿದೆ.
Recommended Video

ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಯುವತಿ ಪಾತ್ರದಲ್ಲಿ ರಶ್ಮಿಕಾ
ಸಿನಿಮಾದಲ್ಲಿ ನಾಯಕಿಯು ಬ್ರಾಹ್ಮಣ ಸಮುದಾಯಕ್ಕೆ ಸೇರಿದಾಕೆ ಆಗಿರುತ್ತಾಳೆ. ನಾಯಕನು ಆಕೆಯ ಮನೆಗೆ ನುಗ್ಗಿ ಜಗಳ ಮಾಡುತ್ತಾನೆ. ಆಕೆಯ ಸಂಬಂಧಿಗಳೊಂದಿಗೆ ವ್ಯಂಗ್ಯ ಮಾಡುತ್ತಾನೆ. ಈ ಸಂದರ್ಭಗಳಲ್ಲಿ ಸಮುದಾಯದ ಬಗ್ಗೆಯೂ ಕೆಲವು ಸನ್ನಿವೇಶಗಳು ಇವೆ. ಬುಲೆಟ್ ಪ್ರಕಾಶ್ ಮತ್ತು ಕುರಿ ಪ್ರತಾಪ್ ಅವರುಗಳು ಬ್ರಾಹ್ಮಣ ಸಮುದಾಯದ ವ್ಯಕ್ತಿಗಳ ಪಾತ್ರ ನಿರ್ವಹಿಸಿದ್ದು, ಇಬ್ಬರನ್ನೂ ದಡ್ಡರಂತೆ ಚಿತ್ರೀಕರಿಸಲಾಗಿದೆ.


Click it and Unblock the Notifications











