ಬುಲೆಟ್ ಪ್ರಕಾಶ್ ಪ್ರಾಣಕ್ಕೆ ಕುತ್ತು ತಂದಿತಾ ಆ ಒಂದು ಆಪರೇಷನ್
ಬುಲೆಟ್ ಪ್ರಕಾಶ್ ಕೇವಲ 44 ವರ್ಷ ವಯಸ್ಸಿಗೆ ನಿಧನ ಹೊಂದಿದ್ದಾರೆ. ಇದು ಸಾಯುವ ವಯಸ್ಸಲ್ಲ. ಕೆಲವೇ ವರ್ಷಗಳ ಹಿಂದೆ ಆರೋಗ್ಯವಾಗಿದ್ದವರು ಒಮ್ಮಿಂದೊಮ್ಮೆಲೆ ಇಹಲೋಕ ತ್ಯಜಿಸಿದ್ದಾರೆ.
ವೈದ್ಯರುಗಳ ಪ್ರಕಾರ, ಕಿಡ್ನಿ, ಲಿವರ್ ವೈಫಲ್ಯ ಮತ್ತು ಸೋಂಕಿನಿಂದ ಬುಲೆಟ್ ಪ್ರಕಾಶ್ ಪ್ರಾಣ ಹೋಗಿದೆ. ಅವರಿಗೆ ಸಕ್ಕರೆ ಕಾಯಿಲೆಯೂ ಇತ್ತು.
ಬುಲೆಟ್ ಪ್ರಕಾಶ್ ಅವರನ್ನು ಬಲ್ಲವರೆಲ್ಲಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರು ಆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬಾರದಿತ್ತು ಎಂದೂ ಸಹ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗಿದ್ದರೆ ಬುಲೆಟ್ ಪ್ರಕಾಶ್ ತಮ್ಮ ಆರೋಗ್ಯಕ್ಕೆ ಕುತ್ತು ತಂದುಕೊಳ್ಳುವಂತಹುದು ಏನು ಮಾಡಿದ್ದರು. ಅವರ ಆರೋಗ್ಯ ಕ್ಷೀಣಿಸಲು ಕಾರಣವೇನು? ಮುಂದೆ ಓದಿ...

ಚಿತ್ರೀಕರಣ ಸಮಯದಲ್ಲಿ ಒಮ್ಮೆ ಅಪಘಾತವಾಗಿತ್ತು
ದಪ್ಪಗಿದ್ದ ಬುಲೆಟ್ ಪ್ರಕಾಶ್ ಅವರಿಗೆ ಒಮ್ಮೆ ಚಿತ್ರೀಕರಣದ ವೇಳೆ ಸಣ್ಣ ಅಪಘಾತವಾಯಿತು. ಅಪಘಾತದ ನಂತರ ಅವರ ಬಗ್ಗೆ ಕೆಲವು ಅಪಪ್ರಚಾರಗಳು ನಡೆದವು. ಬುಲೆಟ್ ಪ್ರಕಾಶ್ ಗೆ ಇನ್ನು ಮುಂದೆ ನಟಿಸಲಾಗದು ಎಂಬ ಸುದ್ದಿಗಳನ್ನು ಹರಡಲಾಯಿತು. ಇದು ಬುಲೆಟ್ ಪ್ರಕಾಶ್ ಗೆ ಬಹುವಾಗಿ ನೋವುಂಟು ಮಾಡಿತು.

ಬುಲೆಟ್ ಪ್ರಕಾಶ್ ಗೆ ಅವಕಾಶಗಳು ಕ್ಷೀಣಿಸಿದವು
ಆ ನಂತರ ಬುಲೆಟ್ ಪ್ರಕಾಶ್ ಅವರಿಗೆ ಅವಕಾಶಗಳು ಸ್ವಲ್ಪ ಕ್ಷೀಣಿಸಿದವು. ಅಷ್ಟರಲ್ಲಿ ರಾಜಕೀಯ ಪ್ರವೇಶಿಸುವ ಮಹಾತಾಂಕ್ಷೆ ಸಹ ಉಲ್ಬಣಿಸಿತ್ತು. ಹಾಗಾಗಿ ದೇಹ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮೊರೆ ಹೋದರು. ಅವರಿಗೆ ಸಿನಿಮಾ ಅವಕಾಶಗಳನ್ನು ತಂದುಕೊಟ್ಟಿದ್ದ, ಅವರನ್ನು ಇತರರಿಗಿಂತಲೂ ಭಿನ್ನವಾಗಿಸಿದ್ದ ದೇಹದ ಆಕಾರವನ್ನೇ ಬದಲು ಮಾಡುವ ನಿರ್ಣಯವನ್ನು ಅವರು ತೆಗೆದುಕೊಂಡರು.

ಶಸ್ತ್ರ ಚಿಕಿತ್ಸೆ, ಕಠಿಣ ಡಯೆಟ್ ಪಾಲನೆ
ಶಸ್ತ್ರ ಚಿಕಿತ್ಸೆ ಮತ್ತು ಕೆಲವು ಕಠಿಣವಾದ ಡಯೆಟ್ಗಳನ್ನು ಪಾಲಿಸಿದ ಬುಲೆಟ್ ಪ್ರಕಾಶ್ ಸುಮಾರು ಕೆ.ಜಿ ತೂಕ ಕಡಿಮೆ ಮಾಡಿಕೊಂಡರು. ಅವರ ಅಭಿಮಾನಿಗಳೇ ಹೇಳುವ ಪ್ರಕಾರ, ತೂಕ ಇಳಿಸಿಕೊಂಡ ಏಲೆ ಮೊದಲಿನ ಕಳೆ ಅವರಲ್ಲಿ ಉಳಿಯಲಿಲ್ಲ.

ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು
ಆದರೆ ತೂಕ ಇಳಿಕೆಯಾದ ನಂತರ ಅವರಿಗೆ ಆರೋಗ್ಯ ಸಮಸ್ಯೆಗಳು ಕಾಡಲು ಪ್ರಾರಂಭವಾದವು. 2018 ರ ಮಾರ್ಚ್ ನಲ್ಲಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಆಗಲೇ ಸಾವು-ಬದುಕಿನ ಮಧ್ಯೆ ಹೋರಾಡಿ ಗೆದ್ದು ಹೊರಗೆ ಬಂದಿದ್ದರು. ಆದರೆ ಅನಾರೋಗ್ಯ ಅವರ ಹೆಗಲು ಏರಿಯಾಗಿತ್ತು.

ಸಕ್ಕರೆ ಕಾಯಿಲೆ ಜೊತೆಗೆ ಕಿಡ್ನಿ ಸಮಸ್ಯೆ ಎದುರಾಯಿತು
ಸಕ್ಕರೆ ಕಾಯಿಲೆ ಇದ್ದ ಬುಲೆಟ್ ಪ್ರಕಾಶ್ ಆ ನಂತರ ಕಾಯಿಲೆಗೆ ತಕ್ಕಂತೆ ವಿಶ್ರಾಂತಿ ಪಡೆಯುವುದನ್ನು ನಿರ್ಲಕ್ಷಿಸಿದರು. ಸಿನಿಮಾಗಳಲ್ಲಿ ತೊಡಗಿಕೊಂಡರು. ಅದೇ ಮುಳುವಾಯಿತೋ ಏನೋ, ಕಿಡ್ನಿ ಸಮಸ್ಯೆ ಎದುರಾಯಿತು.

ಮಾರ್ಚ್ 31 ರಂದು ಆಸ್ಪತ್ರೆಗೆ ದಾಖಲಾಗಿದ್ದರು
ಇದೇ ಮಾರ್ಚ್ 31 ರಂದು ಕನ್ನಿಂಗ್ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು. ದಿನೇ-ದಿನೇ ಕ್ಷೀಣಿಸುತ್ತಾ ಸಾಗಿದ ಅವರ ಆರೋಗ್ಯವನ್ನು ಸರಿಪಡಿಸಲು ವೈದ್ಯರು ಹಲವು ಯತ್ನಗಳನ್ನು ಮಾಡಿದರು. ಐಸಿಯು ನಲ್ಲಿ, ವೆಂಟಿಲೇಟರ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಏಪ್ರಿಲ್ 6 ರ ಸೋಮವಾರ ಅವರು ಇಹಲೋಕ ತ್ಯಜಿಸಿದರು.


Click it and Unblock the Notifications











