ಪುನೀತ್ ನಮಗೆ ಹಣ ಕೊಟ್ಟಿಲ್ಲ: ಬುಲೆಟ್ ಪ್ರಕಾಶ್ ಪುತ್ರ
ನಟ ಪುನೀತ್ ರಾಜ್ಕುಮಾರ್ ಅಗಲಿಕೆಯ ಬಳಿಕ ಅವರು ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಅವರೆಂಥಹಾ ಕೊಡುಗೈ ದಾನಿಗಳಾಗಿದ್ದರು, ಆದರೆ ತಮ್ಮ ಸೇವೆಗೆ ಪ್ರಚಾರ ಪಡೆಯದೇ ಎಲೆಮರೆ ಕಾಯಿಯಂತಿದ್ದರು ಎಂದು ಅವರಿಂದ ಸಹಾಯ ಪಡೆದವರೇ ಹೇಳುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಮಾಡಿರುವ ಸಹಾಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ಗಳು ಹರಿದಾಡುತ್ತಿವೆ. ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸೇವೆಯ ಬಗ್ಗೆ ಪೋಸ್ಟ್ಗಳನ್ನು ಹಾಕಿಕೊಂಡು ಹೆಮ್ಮೆ ಪಡುತ್ತಿದ್ದಾರೆ. ಈ ಪೋಸ್ಟ್ಗಳಲ್ಲಿ ಕೆಲವು ಅತಿಶಯೋಕ್ತಿಯ ಪೋಸ್ಟ್ಗಳು, ಸತ್ಯವಲ್ಲದ ಕೆಲವು ಪೋಸ್ಟ್ಗಳು ಸಹ ಸೇರಿಕೊಂಡು ಬಿಟ್ಟಿವೆ.
''ಬುಲೆಟ್ ಪ್ರಕಾಶ್ ನಿಧನ ಹೊಂದಿದಾಗ ಬುಲೆಟ್ ಪ್ರಕಾಶ್ ಮನೆಗೆ ತೆರಳಿದ್ದ ಪುನೀತ್ ರಾಜ್ಕುಮಾರ್ ಅವರ ಕುಟುಂಬಕ್ಕೆ ಐದು ಲಕ್ಷ ಹಣ ಕೊಟ್ಟು ಬಂದಿದ್ದರು, ಹೀಗೆಂದು ಬುಲೆಟ್ ಪುತ್ರ ಹೇಳಿಕೊಂಡಿದ್ದಾನೆ'' ಎಂಬ ಪೋಸ್ಟ್ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಅದು ಸುಳ್ಳೆಂದು ಸ್ವತಃ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ ಬಗ್ಗೆ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ರಕ್ಷಕ್, ''ನನಗೆ ಪುನೀತ್ ರಾಜ್ಕುಮಾರ್ ಹಾಗೂ ಅಣ್ಣಾವ್ರ ಕುಟುಂಬದ ಮೇಲೆ ಅಪಾರ ಗೌರವ, ಪ್ರೀತಿ ಇದೆ. ಆದರೆ ನಮ್ಮ ಮನೆಗೆ ಬಂದು ಐದು ಲಕ್ಷ ಹಣ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಸುಳ್ಳು. ಪುನೀತ್ ನಮಗೆ ಹಣ ನೀಡಿಲ್ಲ'' ಎಂದಿದ್ದಾರೆ.
ಪುನೀತ್ ರಾಜ್ಕುಮಾರ್ ಸಾಲು-ಸಾಲು ಸಮಾಜ ಸೇವೆಗಳನ್ನು ಮಾಡಿದ್ದಾರೆ. ಅಪ್ಪು ಈಗ ಮಾಡಿರುವ ಸೇವೆಗಳೇ ಅವರ ಬಗ್ಗೆ ಹೆಮ್ಮೆ ಪಡಲು. ಸುಳ್ಳು ಮಾಹಿತಿಗಳನ್ನು ಸೇರಿಸಿ ಅಪ್ಪುವಿನ ಘನತೆಗೆ ಕುಂದು ತರುವ ಕೆಲಸವನ್ನು ಕೆಲವರು ಮಾಡುತ್ತಿರುವುದು ವಿಷಾದನಿಯ. ತಮ್ಮ ಸೇವೆಗಳ ಮೂಲಕ ಪ್ರಚಾರ ಪಡೆವ ಆಸಕ್ತಿ ಸ್ವತಃ ಅಪ್ಪು ಅವರಿಗೆ ಇರಲಿಲ್ಲ ಹೀಗಿದ್ದಾಗ ಹೀಗೆ ಮಾಡದ ಸಹಾಯವನ್ನು ತಮ್ಮ ಖಾತೆಗೆ ಹಾಕಿದರೆ ಅಪ್ಪು ಖಂಡಿತ ಒಪ್ಪುತ್ತಿರಲಿಲ್ಲ ಎಂಬುದನ್ನು ಅವರ ಅಭಿಮಾನಿಗಳು ನೆನಪಿಟ್ಟುಕೊಳ್ಳಬೇಕು.
ಇನ್ನು ಬುಲೆಟ್ ಪ್ರಕಾಶ್ ವಿಷಯಕ್ಕೆ ಮರಳುವುದಾದರೆ, ಬುಲೆಟ್ ಪ್ರಕಾಶ್ ಅನಾರೋಗ್ಯದಿಂದ 2020 ರ ಏಪ್ರಿಲ್ 20 ರಂದು ನಿಧನ ಹೊಂದಿದರು. ಬುಲೆಟ್ ಪ್ರಕಾಶ್ ಮಗಳ ವಿದ್ಯಾಭ್ಯಾಸ ಹಾಗೂ ಮದುವೆಯ ಜವಾಬ್ದಾರಿಯನ್ನು ತಾವು ಹೊರುವುದಾಗಿ ನಟ ದರ್ಶನ್ ಅಂತು ಭರವಸೆ ನೀಡಿದ್ದರು.
ಇದೀಗ ರಕ್ಷಕ್ ಸಹ ತಂದೆಯ ಆಸೆಯಂತೆ ಸಿನಿಮಾ ರಂಗಕ್ಕೆ ಬರಲು ಸಜ್ಜಾಗಿದ್ದಾರೆ. ಕೆಲವು ಸಂದರ್ಶನಗಳಲ್ಲಿ ಮಾತನಾಡಿರುವ ರಕ್ಷಕ್, ''ನಾನು ರೋಸ್ ಹಿಡಿದು ಬರಲ್ಲ ಲಾಂಗ್ ಹಿಡಿದು ಬರುತ್ತೀನಿ'' ಎಂದಿದ್ದಾರೆ. ''ದರ್ಶನ್ ಅಭಿಮಾನಿಗಳು ನನಗೂ ಸಹಾಯ ಮಾಡ್ತಾರೆ'' ಎಂದು ಸಹ ಹೇಳಿದ್ದಾರೆ.


Click it and Unblock the Notifications











