'ಬೆಂಗಳೂರು ಚಿತ್ರೋತ್ಸವ'ಕ್ಕೆ ಸಿ.ಎಂ ಚಾಲನೆ: ವಿಧಾನಸೌಧದ ಮೇಲೆ ಕನ್ನಡ ಸಂಸ್ಕ್ರತಿ ಅನಾವರಣ
9ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಗುರುವಾರ (ಫೆಬ್ರವರಿ 2) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಭಾಗಿತ್ವದಲ್ಲಿ ಅಯೋಜಿಸಿರುವ ಬೆಂಗಳೂರು ಚಿತ್ರೋತ್ಸವದ ಉದ್ಘಾಟನ ಕಾರ್ಯಕ್ರಮ ವಿಧಾನಸೌಧದ ಮುಂಭಾಗದಲ್ಲಿ ನಿನ್ನೆ (ಫೆಬ್ರವರಿ 2) ಅದ್ಧೂರಿಯಾಗಿ ನೆರವೇರಿತು.
ಈಜಿಪ್ಟ್ ನ ಖ್ಯಾತ ಚಿತ್ರ ನಿರ್ದೇಶಕಿ ಹಲಾ ಖಲೀಲ್, ಕನ್ನಡ ನಟ ಪುನೀತ್ ರಾಜ್ ಕುಮಾರ್, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಚಿವರಾದ ಕೆ.ಜೆ ಜಾರ್ಜ್, ಊಮಾಶ್ರೀ, ಶಾಸಕ ಮುನಿರತ್ನಂ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು, ಅಕಾಡೆಮಿ ಅಧ್ಯಕ್ಷರಾದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಮಣಿರತ್ನಂ ಹಾಗೂ ನಟ ರಮೇಶ್ ಅರವಿಂದ್ ಉಪಸ್ಥಿತರಿದ್ದರು.[ಫೆ 2 ರಿಂದ 9ರ ವರೆಗೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ]

ಬೆಂಗಳೂರು ಚಿತ್ರೋತ್ಸವದ ಉದ್ಘಾಟನ ಬಳಿಕ ಮಾತನಾಡಿದ ಸಿದ್ದರಾಮಯ್ಯ, ''ಕನ್ನಡ ಚಿತ್ರೋಧ್ಯಮದ ಬೆಳವಣಿಗೆಗೆ ಎಲ್ಲ ರೀತಿಯಲ್ಲೂ ಸರ್ಕಾರ ಬದ್ಧವಾಗಿದೆ, ಇತ್ತೀಚಿನ ದಿನಗಳಲ್ಲಿ ದ್ವಂದ್ವಾರ್ಥ ಹೊಂದಿರುವಂತಹ ಸಿನಿಮಾಗಳೇ ಹೆಚ್ಚು ಬರುತ್ತಿದೆ. ಇದರಿಂದ ಜನರಿಗೆ ನೋವು ತರುವ ಬದಲು ಒಳ್ಳೆಯ ಸಾಮಾಜಿಕ ಸಂದೇಶ ನೀಡುವ ಸಿನಿಮಾಗಳು ಮಾಡಿ ಎಂದು ಸಲಹೆ ನೀಡಿದರು. ಕನ್ನಡದಲ್ಲಿ ಒಳ್ಳೆ ಸಿನಿಮಾ ಬರುತ್ತಿಲ್ಲ ಎಂದು ನಾನು ಹೇಳುತ್ತಿಲ್ಲ, ಇದರ ಜೊತೆ ಕೆಟ್ಟ ಸಿನಿಮಾಗಳು ಬರುತ್ತಿದೆ'' ಎಂದು ಹೇಳಿದರು.[9ನೇ ಬೆಂಗಳೂರು ಚಿತ್ರೋತ್ಸವದಲ್ಲಿ 12 ಕನ್ನಡ ಚಿತ್ರಗಳು: ಯಾವುವು?]

ಇದೇ ಸಂಧರ್ಭದಲ್ಲಿ ಅಕಾಡೆಮಿ ಅಧ್ಯಕ್ಷರಾದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಮಾತನಾಡಿ, ಕನ್ನಡ ಚಿತ್ರಗಳಿಗೆ ಮಲ್ಟಿಫ್ಲೆಕ್ಸ್ ಗಳಿಂದ ಅನ್ಯಾಯವಾಗುತ್ತಿದೆ. ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಕನ್ನಡ ಸಿನಿಮಾಗಳ ಪ್ರದರ್ಶನ ಕಡಿಮೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.[9ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷತೆಗಳು!]

ಉದ್ಘಾಟನ ದಿನದ ವಿಶೇಷವಾಗಿ ವಿಧಾನಸೌಧ ಕಂಬಗಳ ಮೇಲೆ ಕತ್ತಲು ಬೆಳಕಿನ ಲೇಸರ್ ಕಿರಣಗಳ ಮೂಲಕ 3D ಮ್ಯಾಪಿಂಗ್ ತಂತ್ರಜ್ಞನದಲ್ಲಿ ಕರ್ನಾಟಕದ ಕಲಾ ಸಂಸ್ಕ್ರತಿ, ಪರಂಪರೆ, ಹಾಗೂ ಭಾರತೀಯ ಸಿನಿಮಾ, ಕನ್ನಡ ಸಿನಿಮಾ ಪಯಣವನ್ನ ವರ್ಣರಂಜಿತವಾಗಿ ಬಿತ್ತರಿಸಲಾಯಿತು.
ಇನ್ನೂ 9ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಮೊದಲ ಸಿನಿಮಾವಾಗಿ ಅಲ್ಗೇರಿಯಾದ 'ಲಾವಚೇ' ಸಿನಿಮಾ, ವಿಧಾನಸೌಧದ ಬ್ಯಾಂಕೆಟ್ ಹಾಲ್ ನಲ್ಲಿ ನಿನ್ನೆ ಪ್ರದರ್ಶನ ಕಂಡಿತು.


Click it and Unblock the Notifications











