ಬೆಂಗಳೂರಿನಲ್ಲಿ ತಮಿಳು ಚಿತ್ರ ಪ್ರದರ್ಶನ ರದ್ದು: ಪೋಸ್ಟರ್ ಗಳಿಗೆ ಬೆಂಕಿ
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದಾಗಿ ಕರ್ನಾಟಕದಾದ್ಯಂತ ಹೋರಾಟದ ಕಿಚ್ಚು 'ಕಾವೇರಿ'ದೆ.
ಮುಂದಿನ ಹತ್ತು ದಿನಗಳ ಅವಧಿಯಲ್ಲಿ ಪ್ರತಿದಿನ 15 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿವೆ.

ಹೊಸೂರು ಬಳಿ ತಮಿಳುನಾಡು ವಾಹನಗಳು ಕನ್ನಡ ಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದರೆ, ಇನ್ನೊಂದೆಡೆ ತಮಿಳು ಚಿತ್ರ ಪ್ರದರ್ಶನಕ್ಕೆ ಕರವೇ ಕಾರ್ಯಕರ್ತರು ಅಡ್ಡಿ ಪಡಿಸಿದ್ದಾರೆ. [ಕಾವೇರಿ ವಿವಾದ : ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್]
ಇಂದು ಬೆಳಗ್ಗೆ ಬೆಂಗಳೂರಿನ ನಟರಾಜ ಚಿತ್ರಮಂದಿರದಲ್ಲಿ 'ಕಿದಾರಿ' ಸಿನಿಮಾ ಪ್ರದರ್ಶನ ಆಗುತ್ತಿತ್ತು. ಇದರಿಂದ ಆಕ್ರೋಶಗೊಂಡ ಪ್ರವೀಶ್ ಶೆಟ್ಟಿ ಬಳಗದ ಕರವೇ ಕಾರ್ಯಕರ್ತರು ನಟರಾಜ ಥಿಯೇಟರ್ ಗೆ ಮುತ್ತಿಗೆ ಹಾಕಿದರು.
ಇನ್ನೂ ಬೆಂಗಳೂರಿನ ಆರ್.ಟಿ.ನಗರದ ಪುಷ್ಪಾಂಜಲಿ ಮತ್ತು ವಿನಾಯಕ ಚಿತ್ರಮಂದಿರಗಳಿಗೂ ನುಗ್ಗಿ ತಮಿಳು ಚಿತ್ರಗಳ ಪೋಸ್ಟರ್ ಗಳಿಗೆ ಬೆಂಕಿ ಹಚ್ಚಿದರು. [ಕಾವೇರಿ ತೀರ್ಪು ಖಂಡಿಸಿ ರಕ್ಷಣಾ ವೇದಿಕೆಯಿಂದ ಪಂಜಿನ ಮೆರವಣಿಗೆ]
ಎಲ್ಲೆಡೆ ಹೋರಾಟದ ಕಾವು ಹೆಚ್ಚಾಗಿರುವುದರಿಂದ ತಮಿಳು ಚಿತ್ರ ಪ್ರದರ್ಶನ ಮಾಡುವ ಬಹುತೇಕ ಎಲ್ಲಾ ಚಿತ್ರಮಂದಿರಗಳಿಗೆ ಬೀಗ ಜಡಿಯಲಾಗಿದೆ. ಇನ್ನೆರಡು ದಿನ ಕರ್ನಾಟಕದ ಹಲವೆಡೆ ತಮಿಳು ಚಿತ್ರ ಪ್ರದರ್ಶನವಾಗುವುದು ಅನುಮಾನ.


Click it and Unblock the Notifications











