twitter
    For Quick Alerts
    ALLOW NOTIFICATIONS  
    For Daily Alerts

    ಕಾವೇರಿ ಜಲ ವಿವಾದ:ಕನ್ನಡ ಚಿತ್ರರಂಗಕ್ಕೆ ಯಾರು ದಿಕ್ಕು?

    By ಬಾಲರಾಜ್ ತಂತ್ರಿ
    |

    Who should lead Kannada film industry in Cauvery water dispute protest
    ಸೆಪ್ಟಂಬರ್ 19ರಂದು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ನಿರೀಕ್ಷೆಯಂತೆ ನಿರ್ಣಯ ರಾಜ್ಯದ ವಿರುದ್ದವಾಗಿ ಬಂದಿದೆ.

    ಹಿಂದಿನಿಂದಲೂ ಕಾವೇರಿ ನದಿ ಮತ್ತು ನದಿ ನೀರು ಹಂಚಿಕೆ ವಿಚಾರದಲ್ಲಿ ಕನ್ನಡಿಗರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಕನ್ನಡ ನಾಡಿಯ ಜೀವನದಿಯಾಗಿರುವ ಈ ನದಿ ನೀರಿನ ವಿಚಾರದಲ್ಲಿ ತೀರ್ಪು ತಮಿಳುನಾಡಿನ ಪರವಾಗಿ ಬಂದು ರಾಜ್ಯದಲ್ಲಿ ಮತ್ತೊಮ್ಮೆ ಕಾನೂನು ಸುವ್ಯವಸ್ಥೆಗೆ ತೊಡಕಾಗುವ ಲಕ್ಷಣಗಳು ಎದುರಾಗುತ್ತಿದೆ.

    ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ವಿವಾದ ಭುಗಿಲೆದ್ದು ನಂತರ ಉಂಟಾದ ಹಿಂಸಾಚಾರವನ್ನು ಬಹುಷಃ ಬೆಂಗಳೂರು ಮತ್ತು ಕಾವೇರಿ ಕಣಿವೆಯ ಭಾಗದ ಜನರು ಮರೆತಿರಲಾರರು.

    ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನದಲ್ಲಿ ಈಗಾಗಲೇ ಕನ್ನಡ ಚಲನಚಿತ್ರರಂಗ ಕಾವೇರಿ ಹೋರಾಟಕ್ಕೆ ಸಕ್ರಿಯವಾಗಿ ಧುಮುಕ ಬೇಕೆನ್ನುವ ಕೂಗು ಆರಂಭವಾಗಿದೆ.

    ಹೋರಾಟಕ್ಕೆ ಇಳಿಯಬೇಕೆನ್ನುವ ಕೂಗು ಒಂದು ಕಡೆಯಾದರೆ ನಾಡಿನ ಮತ್ತು ರೈತರ ಹಿತಾದೃಷ್ಟಿಯ ವಿಚಾರಕ್ಕೆ ಬಂದಾಗ ಚಿತ್ರರಂಗದಿಂದ ಹಿಡಿದು ಎಲ್ಲರೂ ಹೋರಾಟಕ್ಕೆ ಇಳಿಯಲೇ ಬೇಕಾಗಿರುವುದು ನಮ್ಮ ಕರ್ತವ್ಯ.

    ಕಾವೇರಿ ಅಥವಾ ರಾಜ್ಯದ ಹಿತಾದೃಷ್ಟಿಗೆ ಸಂಬಂಧಪಟ್ಟ ಯಾವ ವಿಚಾರವೇ ಇರಲಿ ಎಲ್ಲಾ ಕಲಾವಿದರು, ತಂತ್ರಜ್ಞರು ತಮ್ಮೊಳಗಿನ ಭಿನ್ನಾಭಿಪ್ರಾಯ ಏನಾದರೂ ಇದ್ದರೆ ಅದನ್ನು ಬಿಟ್ಟು ಒಂದಾಗಲೇಬೇಕು.

    ಹಾಗಾದರೆ ಕಾವೇರಿ ಹೋರಾಟಕ್ಕೆ ಸಜ್ಜಾಗ ಬೇಕಾಗಿರುವ ನಮ್ಮ ಚಿತ್ರರಂಗವನ್ನು ಯಾರು ಮುನ್ನಡೆಸಬೇಕು? ಡಾ.ರಾಜ್ ಮತ್ತು ಡಾ. ವಿಷ್ಣು ಇಲ್ಲದಿರುವ ಈ ಸಮಯದಲ್ಲಿ ಚಿತ್ರರಂಗವನ್ನು ಯಾರು ಮುನ್ನಡೆಸ ಬೇಕೆನ್ನುವ ವಿಚಾರ ಚರ್ಚಾಸ್ಪದ.

    ಅಣ್ಣಾವ್ರ ಜೀವಿತಾವಧಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇತ್ತು. ರಾಜ್ ಅವರ ಒಂದು ಕರೆಗೆ ಲೈಟ್ ಮ್ಯಾನ್ ನಿಂದ ಹಿಡಿದು ದೊಡ್ಡ ದೊಡ್ಡ ನಿರ್ಮಾಪಕರು ಒಟ್ಟಾಗುತ್ತಿದ್ದರು. ರಾಜ್ ಅವರು ಗೋಕಾಕ್ ಚಳುವಳಿಗೆ ಧುಮುಕಿದ ನಂತರ ಚಳುವಳಿಯ ಕಿಚ್ಚು ಯಾವ ರೀತಿ ಗರಿಗೆದರಿತ್ತು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.

    ಈ ಹಿಂದೆ ಕಾವೇರಿ ಚಳುವಳಿ ಹೋರಾಟದಲ್ಲಿ ಕೂಡಾ ರಾಜ್ ಭಾಗವಹಿಸಿದ್ದರು. ರಾಜ್ ಎನ್ನುವ ಹೆಸರಿಗೆ ಚಿತ್ರಂಗದ ಸದಸ್ಯರಲ್ಲದೆ ಅಭಿಮಾನಿಗಳಲ್ಲೂ ವಿದ್ಯುತ್ ಸಂಚಲನ ಮೂಡಿಸುವ ಶಕ್ತಿಯಿತ್ತು.

    ರಾಜ್ ನಿಧನದ ನಂತರ ಚಿತ್ರರಂಗಕ್ಕೆ ಅಣ್ಣನ ಸ್ಥಾನದಲ್ಲಿ ನಿಂತಿದ್ದು ಡಾ. ವಿಷ್ಣುವರ್ಧನ್. ಇದೇ ಕೆಲ ವರ್ಷಗಳ ಹಿಂದೆ ಹೊಗೆನಿಕಲ್ ವಿವಾದದ ಸಮಯದಲ್ಲಿ ಪೈಪೋಟಿಗೆ ಬಿದ್ದಂತೆ ಬೆಂಗಳೂರು ಮತ್ತು ಚೆನ್ನೈನಲ್ಲಿ ಕನ್ನಡ ಮತ್ತು ತಮಿಳು ಚಿತ್ರರಂಗದವರು ಪ್ರತಿಭಟನೆಗೆ ಧುಮುಕಿದ್ದು, ತಮಿಳು ಕಲಾವಿದರ ಪ್ರತಿಭಟನೆಯ ಎದುರು ನಮ್ಮದು ಸಪ್ಪೆ ಎನಿಸಿದ್ದು ಕಷ್ಟವಾದರೂ ಜೀರ್ಣಿಸಿಕೊಳ್ಳ ಬೇಕಾದ ಸತ್ಯ.

    ಡಾ.ವಿಷ್ಣು ಮತ್ತು ಅಂಬರೀಶ್ ಆ ಪ್ರತಿಭಟನೆಯಲ್ಲಿ ಕಾರಣಾಂತರದಿಂದ ಭಾಗವಹಿಸದೇ ಇದ್ದಿದ್ದು ಇದಕ್ಕೆ ನೀಡಬಹುದಾದ ಒಂದು ಕಾರಣ.

    ವಿಷ್ಣು ನಿಧನದ ನಂತರ ಸದ್ಯ ಚಿತ್ರರಂಗಕ್ಕೆ ಹಿರಿಯ ಸ್ಥಾನದಲ್ಲಿ ಇರುವವರು ಅಂಬರೀಶ್. ಸಿನಿಮಾ ಮತ್ತು ರಾಜಕೀಯ ಎನ್ನುವ ಎರಡೂ ದೋಣಿಯಲ್ಲಿ ಕಾಲಿಡುತ್ತಿರುವ ಅಂಬರೀಶ್ ಕಾವೇರಿ ಚಳುವಳಿಯಲ್ಲಿ ಚಿತ್ರರಂಗವನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎನ್ನುವುದಕ್ಕೆ ದೂಸ್ರಾ ಮಾತೆ ಬೇಕಾಗಿಲ್ಲ.

    ಅದು ಬಿಟ್ಟರೆ ಡಾ. ರಾಜ್ ನಿಧನದ ನಂತರ ಪಾರ್ವತಮ್ಮ ರಾಜಕುಮಾರ್ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಆದರೆ ಇತ್ತೀಚಿಗೆ ಅನಾರೋಗ್ಯದ ಕಾರಣದಿಂದ ಸಾರ್ವಜನಿಕವಾಗಿ ಕಾಣಿಸುತ್ತಿಲ್ಲ. ಆ ಕಾಲದ ಇನ್ನೊಬ್ಬರು ಹಿರಿಯ ನಟಿಯೆಂದರೆ ಭಾರತಿ ವಿಷ್ಣುವರ್ಧನ್, ಇವರೂ ಜನಪರ ಹೋರಾಟದಲ್ಲಿ ಅಷ್ಟಾಗಿ ಇದುವರೆಗೆ ತಮ್ಮನ್ನು ತೊಡಗಿಸಿಕೊಂಡಿಲ್ಲ ಎನ್ನುವ ಬದಲು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎನ್ನುವುದು ಸೂಕ್ತ.

    ಅಂಬರೀಷ್ ಸಮರ್ಥರು ಆದರೂ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿರುವುದರಿಂದ ನ್ಯಾಯಯುತ ಹೋರಾಟ ಅವರಿಂದ ನಿರೀಕ್ಷಿಸಬಹುದೇ ಎನ್ನುವದು ಕಷ್ಟವಾದರೂ ಕೇಳಬೇಕಾಗಿರುವ ಪ್ರಶ್ತ್ನೆ.

    ಇನ್ನು ಯಾವುದೇ ಕನ್ನಡಪರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಚಿತ್ರರಂಗದ ಇನ್ನೊಬ್ಬರೆಂದರೆ ನಿರ್ಮಾಪಕ ಕಮ್ ಅಖಿಲ ಕರ್ನಾಟಕ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು.

    ಈಗಾಗಲೇ ಚಳುವಳಿಗೆ ದುಮುಕಿರುವ ಸಾ.ರಾ. ಗೋವಿಂದು ಕನ್ನಡ ಚಿತ್ರರಂಗವನ್ನು ಈ ಚಳುವಳಿಗೆ ಮುನ್ನಡೆಸಿದರೆ ಹೇಗೆ? ಅಥವಾ ಅಂಬರೀಶ್ ಅವರೇ ಮುನ್ನಡೆಸಬೇಕೇ ? ಇಲ್ಲವಾದರೆ ಯುವ ಕಲಾವಿದರೇ?

    English summary
    Who should lead the Kannada Film Industry in Cauvery water dispute protest. A debate.
    Tuesday, September 25, 2012, 18:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X