ನಟ ಸ್ವಸ್ತಿಕ್ ಶಂಕರ್ ಮನೆ ಮೇಲೆ ಸಿಸಿಬಿ ದಾಳಿ

ಚಿತ್ರರಂಗದ ವ್ಯಕ್ತಿಯೊಬ್ಬರಿಗೆ ಬಡ್ಡಿಗೆ ಹಣ ನೀಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಶೇಷಾದ್ರಿಪುರಂ ಮನೆ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ಹಲವಾರು ದಾಖಲೆ ಪತ್ರಗಳನ್ನು ಪರಿಶೀಲಿಸಲಾಗಿದೆ. ಥ್ರಿಲ್ಲರ್ ಮಂಜು ಅವರ ಸಾಹಸ ಪ್ರಧಾನ ಚಿತ್ರಗಳಲ್ಲಿ ಶಂಕರ್ ಖಾಯಂ ಆಗಿ ಕಾಣಿಸಿಕೊಳ್ಳುತ್ತಿದ್ದರು.
ಸ್ವಸ್ತಿಕ್ ಶಂಕರ್ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ಪೋಷಿಸಿದ್ದಾರೆ. ಇತ್ತೀಚೆಗೆ ಎಲ್ಲಿದ್ದೆ ಇಲ್ಲಿ ತನಕ, ಮಂಜುನಾಥ ಬಿಎ ಎಲ್ಎಲ್ಬಿ, ಅಗ್ರಜ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ ಈ ರೀತಿಯ ಅನಧಿಕೃತ ಬಡ್ಡಿ ವ್ಯವಹಾರ ಪ್ರಕರಣಗಳು ಆಗಿಂದಾಗ್ಗೆ ವರದಿಯಾಗುತ್ತಲೇ ಇವೆ.
ಕೆಲ ದಿನಗಳ ತಿಂಗಳುಗಳ ಹಿಂದೆ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಕನ್ನಡಚಲನಚಿತ್ರ ನಿರ್ಮಾಪಕ ಎಸ್ ಶಂಕರ್ (54) ಬೆಂಗಳೂರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದರು. ಶಂಕರ್ ಅವರಿಂದ ಪೊಲೀಸರು ಖಾಲಿ ಛಾಪಾ ಕಾಗದಗಳು, ಬ್ಲ್ಯಾಂಕ್ ಚೆಕ್ಗಳು, ಪ್ರಾಮಿಸರಿ ನೋಟ್ಗಳು ಸೇರಿದಂತೆ 75ಕ್ಕೂ ಹೆಚ್ಚು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು
ಸಂಪಗಿರಾಮನಗರದ ದೇವಾಂಗ ಹಾಸ್ಟೆಲ್ ರಸ್ತೆಯ ನಿವಾಸಿಯಾದ ಶಂಕರ್ ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಸಣ್ಣಪುಟ್ಟ ಉದ್ಯಮಿಗಳು, ವ್ಯಾಪಾರಿಗಳು, ನಿರ್ಮಾಪಕರು, ಚಿತ್ರ ವಿತರಕರಿಗೆ ಸಾಲ ನೀಡುತ್ತಿದ್ದ. ಆದರೆ ಬಡ್ಡಿ ಮಾತ್ರ ಶೇ.10 ರಿಂದ 25ರತನಕ ಪಡೆಯುತ್ತಿದ್ದರು ಎನ್ನಲಾಗಿತ್ತು.
ಬಡ್ಡಿ ಕೊಡುವುದು ಒಂದೆರಡು ದಿನ ತಡವಾದರೆ ಬಡ್ಡಿ ಮೇಲೆ ಚಕ್ರಬಡ್ಡಿ, ಮೀಟರ್ ಬಡ್ಡಿ ಹಾಕುತ್ತಿದ್ದ. ಅರ್ಜೆಂಟಾಗಿ ಈತನ ಬಳಿ ಸಾಲ ತೆಗೆದುಕೊಂಡವರು ಅದನ್ನು ಸಮಯಕ್ಕೆ ಕೊಡಲಾಗದೆ ಅತ್ತ ಏರುತ್ತಿರುವ ಮೀಟರ್ ಬಡ್ಡಿಯನ್ನು ಕಟ್ಟಲಾಗದೆ ಪರಿತಪಿಸುತ್ತಿದ್ದರು.
ಪೊಲೀಸರ ಪ್ರಕಾರ, ಶಂಕರ್ ಸರಿಸುಮಾರು ಎರಡು ಕೋಟಿ ವ್ಯವಹಾರ ನಡೆಸುತ್ತಿದ್ದರು. ಅಂದಹಾಗೆ ಈತ 'ಮತ್ತೆ ಹಾಡಿತು ಕೋಗಿಲೆ', 'ಬಂಗಾರದ ಕಳಸ', 'ದೀಪಾವಳಿ' ಹಾಗೂ 'ಜನನಿ ಜನ್ಮಭೂಮಿ' ಚಿತ್ರಗಳನ್ನು ನಿರ್ಮಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











