Don't Miss!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- News India Weather: ಮುಂದಿನ ಮೂರು ದಿನ ದೇಶದ ಈ ಭಾಗದಲ್ಲಿ ಅಬ್ಬರದ ಮಳೆ ಮುನ್ಸೂಚನೆ, ಎಲ್ಲಿಲ್ಲಿ?-ಮಾಹಿತಿ
- Finance Shilpa Shetty: ಇಡಿಯಿಂದ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅವರ 98 ಕೋಟಿ ಮೌಲ್ಯದ 2 ಫ್ಲಾಟ್, ಷೇರು ವಶ
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Lifestyle ಮಾಲ್ನೊಳಗೆ ನುಗ್ಗಿದ 100ಕ್ಕೂ ಹೆಚ್ಚು ನಾಯಿಗಳು..! ಕೋಳಿ ಕಾಲು ತೋರಿಸಿ ಹಿಡಿದ ಜನ..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವರ್ಷ ಬಾರದ ಲೋಕಕ್ಕೆ ಪಯಣಿಸಿದ ಚಿತ್ರರಂಗದ ತಾರೆಯರು
2018 ಕನ್ನಡ ಚಿತ್ರರಂಗದ ಪಾಲಿಗೆ ಒಳ್ಳೆಯ ಲಾಭ ತಂದುಕೊಟ್ಟ ವರ್ಷ. ಹಾಗೇ, ಕನ್ನಡ ಚಿತ್ರರಂಗದ ಅನರ್ಘ್ಯ ರತ್ನಗಳು ಮೋಡದ ಮರೆಗೆ ಸರಿದಿದ್ದು ಇದೇ ವರ್ಷ ಅನ್ನೋದು ವಿಷಾದನೀಯ.
ಹಿರಿಯ ನಟ, ನಿರ್ದೇಶಕ ಕಾಶೀನಾಥ್, ರೆಬೆಲ್ ಸ್ಟಾರ್ ಅಂಬರೀಶ್, ನಿರ್ದೇಶಕ ಪಿ.ಎನ್.ಸತ್ಯ, ನಿರ್ದೇಶಕ ಎಂ.ಎಸ್.ರಾಜಶೇಖರ್ ಕೊನೆಯುಸಿರೆಳೆದಿದ್ದು ಇದೇ ವರ್ಷ.
ಇನ್ನೂ ಪರಭಾಷೆಯಲ್ಲೂ ಖ್ಯಾತನಾಮರು ಈ ವರ್ಷ ಕಣ್ಮರೆಯಾದರು. ಈ ವರ್ಷದಲ್ಲಿ ಚಿತ್ರರಂಗ ಕಂಡ ಸಾವು ನೋವಿನ ಕಹಿ ನೆನಪು ನಿಮ್ಮ ಮುಂದಿದೆ...
ಅಗಲಿದ ಕಾಶೀನಾಥ್
ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನಿಲ್ಲ. ಚಾಮರಾಜಪೇಟೆಯ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಟ ಕಾಶಿನಾಥ್ ಕೊನೆಯುಸಿರೆಳೆದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಾಶೀನಾಥ್ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು.
ಕೊನೆಯುಸಿರೆಳೆದ ಶ್ರೀದೇವಿ
ಬಾಲಿವುಡ್ ಮಾತ್ರ ಅಲ್ಲ, ದಕ್ಷಿಣ ಭಾರತದ ಚಿತ್ರರಂಗದಲ್ಲೂ ನಂಬರ್ ಒನ್ ತಾರೆ ಆಗಿ ಮಿನುಗಿದ ನಟಿ ಶ್ರೀದೇವಿ ಇನ್ನೂ ನೆನಪು ಮಾತ್ರ. ಹೃದಯಾಘಾತದಿಂದ ಫೆಬ್ರವರಿ 24 ರಂದು ದುಬೈನಲ್ಲಿ ಕೊನೆಯುಸಿರೆಳೆದರು ನಟಿ ಶ್ರೀದೇವಿ. ಮೋಹಿತ್ ಮಾರ್ವಾ ಅವರ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಇಡೀ ಕುಟುಂಬದ ಜೊತೆಗೆ ದುಬೈಗೆ ತೆರಳಿದ್ದ ಶ್ರೀದೇವಿ, ಅಲ್ಲೇ ವಿಧಿವಶರಾದರು. ಶ್ರೀದೇವಿಯ ಹಠಾತ್ ನಿಧನದ ಸುದ್ದಿ ಕೇಳಿ ಇಡೀ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿತು.
ಕೊನೆಯುಸಿರೆಳೆದ ಶ್ರೀದೇವಿ: ಮಮ್ಮಲ ಮರುಗಿದ ದಕ್ಷಿಣ ಭಾರತ ಚಿತ್ರರಂಗ
ಮರೆಯಾದ ಅಂಬರೀಶ್
ಯಾರೂ ಊಹಿಸದ ಕಹಿ ಸುದ್ದಿಯೊಂದು ನವೆಂಬರ್ 24 ರಂದು ರಾತ್ರಿ ಹೊರಬಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಅಂಬಿ ನಿಧನಕ್ಕೆ ಇಡೀ ಕರುನಾಡು ಕಂಬನಿ ಮಿಡಿಯಿತು.
ಮಂಡ್ಯದ ಗಂಡು, ಕರುನಾಡ ಕರ್ಣ, ಸ್ಯಾಂಡಲ್ ವುಡ್ ನ ಜಲೀಲ ಅಂಬರೀಶ್ ಇನ್ನಿಲ್ಲ.!
ನಂದಮೂರಿ ಹರಿಕೃಷ್ಣ ದುರ್ಮರಣ
ತೆಲುಗು ಚಿತ್ರರಂಗದ ಖ್ಯಾತ ನಟ ಎನ್.ಟಿ.ರಾಮರಾವ್ ಅವರ ಪುತ್ರ ನಂದಮೂರಿ ಹರಿಕೃಷ್ಣ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅವರಿಗೆ 61 ವರ್ಷ ವಯಸ್ಸಾಗಿತ್ತು. ಅಭಿಮಾನಿಯ ಮದುವೆಯಲ್ಲಿ ಪಾಲ್ಗೊಳ್ಳಲು ನೆಲ್ಲೂರಿಗೆ ತೆರಳುತ್ತಿದ್ದ ನಂದಮೂರಿ ಹರಿಕೃಷ್ಣ ತೆಲಂಗಾಣದ ನಲ್ಗೊಂಡ ಬಳಿ ಅಪಘಾತಕ್ಕೀಡಾದರು. ತಕ್ಷಣ ಅವರನ್ನ ಆಸ್ಪತ್ರೆಗೆ ಕರೆದೊಯ್ದರೂ, ಫಲಕಾರಿ ಆಗಲಿಲ್ಲ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದ ಕಾರಣ ನಂದಮೂರಿ ಹರಿಕೃಷ್ಣ ಕೊನೆಯುಸಿರೆಳೆದರು.
ನಂದಮೂರಿ ಹರಿಕೃಷ್ಣ ದುರ್ಮರಣಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ ತಾರೆಯರು
ಬಾರದ ಲೋಕಕ್ಕೆ ಪಯಣಿಸಿದ ಎಂ.ಎಸ್.ರಾಜಶೇಖರ್
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ಸಾಮಾನ್ಯ ಕಲಾವಿದರಾಗಿದ್ದ ಹಲವು ನಟರನ್ನ ಸೂಪರ್ ಸ್ಟಾರ್ ಗಳನ್ನಾಗಿಸಿದ ಖ್ಯಾತ ನಿರ್ದೇಶಕ ಎಂ ಎಸ್ ರಾಜಶೇಖರ್ (75) ವಿಧಿವಶರಾದರು. ಉಸಿರಾಟದ ತೊಂದರೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿರ್ದೇಶಕ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.
ಮರೆಯಾದ 'ಧ್ರುವತಾರೆ': ಡಾ ರಾಜ್ ಪುತ್ರರ ನೆಚ್ಚಿನ ನಿರ್ದೇಶಕ ಇನ್ನಿಲ್ಲ
ಪಿ.ಎನ್.ಸತ್ಯ ನಿಧನ
ಕನ್ನಡದ ಹೆಸರಾಂತ ನಿರ್ದೇಶಕ ಪಿ.ಎನ್.ಸತ್ಯ ವಿಧಿವಶರಾದರು. ಸುಮಾರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಿ.ಎನ್.ಸತ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಲೋ ಬಿಪಿ ಆದ ಕಾರಣ ಕೊನೆಯುಸಿರೆಳೆದರು.
'ಮೆಜೆಸ್ಟಿಕ್' ಚಿತ್ರ ಖ್ಯಾತಿಯ ನಿರ್ದೇಶಕ ಪಿ ಎನ್ ಸತ್ಯ ನಿಧನ
ಚಿರನಿದ್ರೆಗೆ ಜಾರಿದ ಚಂದ್ರು
ಕನ್ನಡ ಸಿನಿಮಾರಂಗದಲ್ಲಿ ಬಾಲನಟನಾಗಿ ಸಿನಿಮಾರಂಗಕ್ಕೆ ಪ್ರವೇಶ ಮಾಡಿ ನಂತರ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ ಮೂಲಕ ನಾಯಕನಾಗಿ ಅಭಿನಯಿಸಿದ ಕೂದುವಳ್ಳಿ ಚಂದ್ರಶೇಖರ್ ಕೊನೆಯುಸಿರೆಳೆದರು.
'ಎಡಕಲ್ಲು' ಗುಡ್ಡದಿಂದ ಆರಂಭಿಸಿ ಎಡಕಲ್ಲಿನಲ್ಲೇ ಅಂತ್ಯ ಕಂಡ ಚಂದ್ರು
ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ ವಿಧಿವಶ
ಹಿರಿಯ ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ ವಿಧಿವಶರಾದರು. ಎಚ್1ಎನ್1 ರೋಗದಿಂದ ಬಳಲುತ್ತಿದ್ದ ಅವರು ನವೆಂಬರ್ ನಲ್ಲಿ ಕೊನೆಯುಸಿರೆಳೆದರು. ಶಂಕರಲಿಂಗ ಸುಗ್ನಳ್ಳಿ ನಿರ್ದೇಶಕ, ನಿರ್ಮಾಪಕ ಅಷ್ಟೇ ಅಲ್ಲದೆ ಕ್ಯಾಮರಾ ಮ್ಯಾನ್ ಕೂಡ ಆಗಿದ್ದರು. ಅದ್ನಾಡಿ ಅಳಿಯ, ಶರಣ ಬಸವ, ವಿಜಯಕಂಕಣ, ಏಳು ಕೋಟಿ ಮಾರ್ತಾಂಡ ಭೈರವ, ಕಡ್ಲಿಮಟ್ಟಿ ಸ್ಟೇಶನ್ ಮಾಸ್ಟರ್, ಪ್ರೇಮ ದೇವತೆ ಹೀಗೆ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.
ಸ್ಯಾಂಡಲ್ ವುಡ್ ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ ನಿಧನ
ಸ್ಟಾನ್ ಲೀ ಇನ್ನಿಲ್ಲ
ಸೂಪರ್ ಹೀರೋಗಳ ಸೃಷ್ಟಿಕರ್ತ ಕಾಮಿಕ್ ಕ್ಷೇತ್ರದ ಸ್ಟಾರ್ ಲೇಖಕ ಸ್ಟಾನ್ ಲೀ ಅವರು ನವೆಂಬರ್ 12ರಂದು ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಸ್ಪೈಡರ್ಮ್ಯಾನ್, ಫೆಂಟ್ಯಾಸ್ಟಿಕ್ ಫೋರ್, ಬ್ಲ್ಯಾಕ್ ಪ್ಯಾಂಥರ್ ನಂಥ ಸೂಪರ್ ಹೀರೋ ಪಾತ್ರಗಳನ್ನು ಸೃಷ್ಟಿಸಿ ಹಾಲಿವುಡ್ ನಲ್ಲಿ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣದವರು ಸ್ಟಾನ್ ಲೀ.
ಸೂಪರ್ ಹೀರೋಗಳ ಸೃಷ್ಟಿಕರ್ತ ಸ್ಟಾನ್ ಲೀ ನಿಧನಕ್ಕೆ ಕಂಬನಿ
ಛಾಯಾಗ್ರಾಹಕ ವಿಷ್ಣುವರ್ಧನ್ ವಿಧಿವಶ
ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಕೆ ಎಂ ವಿಷ್ಣುವರ್ಧನ್ ಅವರು ವಿಧಿವಶರಾದರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಅನುಭವಿ ಕ್ಯಾಮೆರಾ ನಿರ್ದೇಶಕ ಇನ್ನಿಲ್ಲ ಎಂಬ ಸುದ್ದಿ ಚಿತ್ರರಂಗಕ್ಕೆ ಆಘಾತ ತಂತು.
ಸ್ಟಾರ್ಸ್ ಅಂದ ಚೆಂದ ಹೆಚ್ಚಿಸಿದ್ದ ಛಾಯಾಗ್ರಾಹಕ ವಿಷ್ಣುವರ್ಧನ್ ವಿಧಿವಶ
ಕೃಷ್ಣಕುಮಾರಿ ನಿಧನ
ತೆಲುಗು ಚಿತ್ರರಂಗದ ಅಭಿನೇತ್ರಿ ನಟಿ ಕೃಷ್ಣಕುಮಾರಿ (83) ಇನ್ನು ನೆನಪು ಮಾತ್ರ. ಮೂಳೆ ಕ್ಯಾನ್ಸರಿನಿಂದ ಬಳಲುತ್ತಿದ್ದ ಅವರು ವಯೋಸಹಜ ಅನಾರೋಗ್ಯದಿಂದ ನಿಸ್ತೇಜರಾಗಿ ತಮ್ಮ ಮಗಳ ಮನೆಯಲ್ಲಿ ಕೊನೆಯುಸಿರೆಳೆದರು.
'ಸೂಪರ್ ಸ್ಟಾರ್'ಗಳ ನೆಚ್ಚಿನ 'ಅಭಿನೇತ್ರಿ' ಕೃಷ್ಣಕುಮಾರಿ ನಿಧನ
ಇಹಲೋಕ ತ್ಯಜಿಸಿದ ಮೊಹಮ್ಮದ್ ಅಜೀಜ್
ಬಾಲಿವುಡ್ ನ ಖ್ಯಾತ ಹಿನ್ನೆಲೆ ಗಾಯಕ ಮೊಹಮ್ಮದ್ ಅಜೀಜ್ (64) ಹೃದಯಾಘಾತದಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಮಿತಾಬ್ ಬಚ್ಚನ್, ಗೋವಿಂದ್, ರಿಷಿ ಕಪೂರ್, ಮಿಥುನ್ ಚಕ್ರವರ್ತಿ ಅಂತಹ ಸ್ಟಾರ್ ನಟರ ಚಿತ್ರಗಳಿಗೆ ಮೊಹಮ್ಮದ್ ಅಜೀಜ್ ತಮ್ಮ ಕಂಠಸಿರಿ ಹರಿಸಿದ್ದಾರೆ.
ಬಾಲಿವುಡ್ ಖ್ಯಾತ ಗಾಯಕ ಮೊಹಮ್ಮದ್ ಅಜೀಜ್ ನಿಧನ
ಕೃಷ್ಣ ರಾಜ್ ಕಪೂರ್ ಇನ್ನಿಲ್ಲ
ಬಾಲಿವುಡ್ ನ ಶೋ ಮ್ಯಾನ್ ದಿವಂಗತ ರಾಜ್ ಕಪೂರ್ ಪತ್ನಿ ಕೃಷ್ಣ ರಾಜ್ ಕಪೂರ್ ಕೊನೆಯುಸಿರೆಳೆದರು. 87 ವರ್ಷ ವಯಸ್ಸಿನ ಕೃಷ್ಣ ರಾಜ್ ಕಪೂರ್ ಹೃದಯ ಸ್ತಂಬನದಿಂದ ವಿಧಿವಶರಾದರು.
ರಾಜ್ ಕಪೂರ್ ಪತ್ನಿ ಕೃಷ್ಣ ರಾಜ್ ಕಪೂರ್ ವಿಧಿವಶ
ನಿರ್ದೇಶಕ ಎ.ಆರ್.ಬಾಬು ವಿಧಿವಶ
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕ ಎ.ಆರ್.ಬಾಬು ಡಿಸೆಂಬರ್ ತಿಂಗಳಲ್ಲಿ ವಿಧಿವಶರಾದರು. 'ಹಲೋ ಯಮ', 'ಕಾಸಿದ್ದವನೇ ಬಾಸ್', 'ಯಾರದ್ದೋ ದುಡ್ಡು ಯಲಮ್ಮನ ಜಾತ್ರೆ' 'ಆಂಧ್ರ ಹೆಂಡತಿ', 'ಆಗೋದೆಲ್ಲ ಒಳ್ಳೆದಕ್ಕೆ', 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ', 'ಸಪ್ನೊಂಕಿ ರಾಣಿ' ಸೇರಿದಂತೆ ಅನೇಕ ಚಿತ್ರಗಳಿಗೆ ಇವರು ಆಕ್ಷನ್ ಕಟ್ ಹೇಳಿದ್ದರು.
'ಜೋಗಿ' ಪ್ರೇಮ್ ಗುರು ನಿರ್ದೇಶಕ ಎ ಆರ್ ಬಾಬು ಇನ್ನಿಲ್ಲ
ನಿರ್ಮಾಪಕ ನಾಗರಾಜ ಶೆಟ್ಟಿ ನಿಧನ
ಖ್ಯಾತ ನಿರ್ಮಾಪಕ, ವಿತರಕ ಎಸ್.ನಾಗರಾಜ ಶೆಟ್ಟಿ ಡಿಸೆಂಬರ್ ನಲ್ಲಿ ದೈವಾಧೀನರಾದರು. ಮೂಲತಃ ಚಿಕ್ಕಮಗಳೂರಿನವರಾಗಿದ್ದ ಎಸ್ ನಾಗರಾಜ ಶೆಟ್ಟಿ ಕನ್ನಡದಲ್ಲಿ ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. 'ನಾಗರಹೊಳೆ', 'ನೂರು ಜನ್ಮ', 'ಕೂಡಿ ಬಾಳಿದರೆ ಸ್ವರ್ಗ ಸುಖ' ಹಾಗೂ 'ಶ್ರಾವಣ ಸಂಜೆ' ಚಿತ್ರಗಳಿಗೆ ಎಸ್ ನಾಗರಾಜ ಶೆಟ್ಟಿ ಬಂಡವಾಳ ಹಾಕಿದ್ದರು.
ಕನ್ನಡ ಚಿತ್ರ ನಿರ್ಮಾಪಕ ಎಸ್ ನಾಗರಾಜ ಶೆಟ್ಟಿ ನಿಧನ
ಹಿರಿಯ ನಟ ಗೋಟೂರಿ ನಿಧನ
ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಬರಹಗಾರ ಗೋಟೂರಿ ವಿಧಿವಶರಾದರು. ಅನೇಕ ವರ್ಷಗಳು ಚಿತ್ರರಂಗದಲ್ಲಿ ಇದ್ದ ಇವರು ಹೆಚ್ಚಾಗಿ ನಟ ಕಾಶೀನಾಥ್ ಅವರ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಉಪೇಂದ್ರ ನಿರ್ದೇಶನದ 'ಶ್' ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ಗೋಟೂರಿ ನಟಿಸಿದ್ದರು.
ಹಿರಿಯ ನಟ ಹಾಗೂ ಗೀತರಚನೆಕಾರ ಗೋಟೂರಿ ನಿಧನ!
ಭಕ್ತವತ್ಸಲಂ ಇನ್ನಿಲ್ಲ
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿದ್ದ ಭಕ್ತವತ್ಸಲಂ ಅವರು ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕನ್ನಡದ ಹಿರಿಯ ನಿರ್ಮಾಪಕ ಭಕ್ತವತ್ಸಲಂ ನಿಧನ
ಚಿಕ್ಕ ಸುರೇಶ್ ಇನ್ನಿಲ್ಲ
ಕನ್ನಡದ ಅನೇಕ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ, ರಂಗಭೂಮಿ, ಬೀದಿ ನಾಟಕ, ಕಿರುತೆರೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಚಿಕ್ಕ ಸುರೇಶ್ ಚಿರನಿದ್ರೆಗೆ ಜಾರಿದರು.
ಹಾಸ್ಯನಟ, ರಂಗಭೂಮಿ ಕಲಾವಿದ ಚಿಕ್ಕ ಸುರೇಶ್ ಇನ್ನಿಲ್ಲ
ಎಂ.ಎನ್.ವ್ಯಾಸರಾವ್ ಅಸ್ತಂಗತ
ಬ್ಯಾಂಕ್ ಉದ್ಯೋಗಿ ಆಗಿದ್ದ ಎಂ.ಎನ್.ವ್ಯಾಸರಾವ್ ಹೃದಯಾಘಾತದಿಂದ ನಿಧನರಾದರು. ಇವರು ಬರೆದ ಪ್ರಣಯ ರಾಜ ಶ್ರೀನಾಥ್ ಮತ್ತು ಆರತಿ ಅಭಿನಯದ 'ಸೂರ್ಯಂಗೂ ಚಂದ್ರಂಗೂ ಬಂದರೆ ಮುನಿಸು... ನಗುತಾದಾ ಭೂತಾಯಿ ಮನಸ್ಸು...' ಹಾಗೂ 'ನಾಕೊಂದ್ಲ ನಾಕು...' ಹಾಡುಗಳು ಜನಪ್ರಿಯತೆ ಗಳಿಸಿತ್ತು.
ಎಂ.ಎನ್.ವ್ಯಾಸರಾವ್ ನಿಧನಕ್ಕೆ ಕಂಬನಿ ಮಿಡಿದ ಶಿವರಾಂ
ಅಕ್ಕಿ ಚನ್ನಬಸಪ್ಪ ಇನ್ನಿಲ್ಲ
ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ವರ್ಷಗಳಿಂದ ಅಭಿನಯದ ಮೂಲಕವೇ ಕಲಾ ಸೇವೆ ಸಲ್ಲಿಸುತ್ತಿದ್ದ ಹಿರಿಯ ನಟ ಅಕ್ಕಿ ಚೆನ್ನಬಸಪ್ಪ ವಿಧಿವಶರಾದರು. ಹಾಸ್ಯ ಕಲಾವಿದನಾಗಿಯೂ ಗುರುತಿಸಿಕೊಂಡಿದ್ದ ಚೆನ್ನಬಸಪ್ಪ ಅವರು ಸಾಕಷ್ಟು ಮಕ್ಕಳ ಚಿತ್ರದಲ್ಲಿಯೂ ಅಭಿನಯಿಸಿದ್ದರು.
ಹಿರಿಯ ನಟ ಅಕ್ಕಿ ಚನ್ನಬಸಪ್ಪ ಇನ್ನಿಲ್ಲ
ಸದಾಶಿವ ಬ್ರಹ್ಮಾವರ್ ವಿಧಿವಶ
ವಯಸ್ಸಾದ ತಂದೆ, ಸ್ವಾತಂತ್ರ್ಯ ಹೋರಾಟಗಾರ, ಬಡ ಮೇಷ್ಟ್ರು, ಅಸಹಾಯಕ ಅಜ್ಜ, ದೇವಸ್ಥಾನದ ಪೂಜಾರಿ, ನೀತಿ ಪಾಠ ಹೇಳುವ ಪ್ರಾಮಾಣಿಕ ರಾಜಕಾರಣಿ.. ಹೀಗೆ ಬಹುತೇಕ ಎಲ್ಲ ಪಾತ್ರಗಳಿಗೂ ಜೀವ ತುಂಬಿದ್ದ ಕಲಾವಿದ ಸದಾಶಿವ ಬ್ರಹ್ಮಾವರ್ ವಯೋಸಹಜ ಖಾಯಿಲೆಯಿಂದ ವಿಧಿವಶರಾದರು.
ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ್ ವಿಧಿವಶ
ಕಲ್ಪನಾ ಲಾಜ್ಮಿ ಇನ್ನಿಲ್ಲ
ರುಡಾಲಿಯಂಥ ಸದಭಿರುಚಿಯ ಚಿತ್ರಗಳನ್ನು ನೀಡಿದ್ದ ಖ್ಯಾತ ನಿರ್ದೇಶಕಿ ಕಲ್ಪನಾ ಲಾಜ್ಮಿ ಅವರು ಮುಂಬೈನಲ್ಲಿ ಕೊನೆಯುಸಿರೆಳೆದರು. ಕಲ್ಪನಾ ಅವರ ನಿಧನಕ್ಕೆ ಬಾಲಿವುಡ್ ನ ಗಣ್ಯಾತಿಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದರು.
ರುಡಾಲಿ ಖ್ಯಾತಿಯ ನಿರ್ದೇಶಕಿ ಕಲ್ಪನಾ ಲಾಜ್ಮಿ ಇನ್ನಿಲ್ಲ
ಮರೆಯಾದ ಕ್ಯಾಪ್ಟನ್ ರಾಜು
ಮಲಯಾಳಂ ಚಿತ್ರರಂಗದ ಪ್ರಖ್ಯಾತ ನಟ ಕ್ಯಾಪ್ಟನ್ ರಾಜು ಕೊನೆಯುಸಿರೆಳೆದರು. 68 ವರ್ಷ ವಯಸ್ಸಿನ ಕ್ಯಾಪ್ಟನ್ ರಾಜು ಕೇರಳದ ಕೊಚ್ಚಿಯಲ್ಲಿರುವ ನಿವಾಸದಲ್ಲಿ ನಿಧನರಾದರು.
ಮಲಯಾಳಂ ಚಿತ್ರನಟ ಕ್ಯಾಪ್ಟನ್ ರಾಜು ಇನ್ನಿಲ್ಲ
ಬಿ.ಜಯಾ ವಿಧಿವಶ
ಟಾಲಿವುಡ್ ನ ಪ್ರಖ್ಯಾತ ನಿರ್ದೇಶಕಿ ಬಿ.ಜಯಾ (54) ಇಹಲೋಕ ತ್ಯಜಿಸಿದರು. ಹೃದಯಾಘಾತದಿಂದ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಬಿ.ಜಯಾ ಕೊನೆಯುಸಿರೆಳೆದರು.
ಟಾಲಿವುಡ್ ನಿರ್ದೇಶಕಿ ಬಿ.ಜಯಾ ಇನ್ನಿಲ್ಲ
ರಾಜ್ ಕಿಶೋರ್ ಇನ್ನಿಲ್ಲ
1975ರ ಸೂಪರ್ ಹಿಟ್ 'ಶೋಲೆ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಜೊತೆಯಲ್ಲಿ ಖೈದಿಗಳ ಪೈಕಿ ಒಬ್ಬರಾಗಿದ್ದ ರಾಜ್ ಕಿಶೋರ್ (85) ಹೃದಯಾಘಾತದಿಂದ ನಿಧನರಾದರು.