ಸಾಲು ಸಾಲು ಚಿತ್ರಗಳಿಗೆ ಚಾಲನೆ ನೀಡಿದ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 37ನೇ ಹುಟ್ಟುಹಬ್ಬದ ಸಡಗರ, ಸಂಭ್ರಮ ಅಂಬರ ಚುಂಬಿಸುತ್ತಿದೆ. ಇದೇ ಸಂದರ್ಭದಲ್ಲಿ ಅವರ ಸಾಲು ಸಾಲು ಚಿತ್ರಗಳು ಸೆಟ್ಟೇರುತ್ತಿವೆ. ಅಂಬಾರಿ, ಅದ್ದೂರಿ ಯಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ಎಪಿ ಅರ್ಜುನ್ ಅವರೂ ಇದೇ ಮೊದಲ ಬಾರಿಗೆ ದರ್ಶನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ದರ್ಶನ್ ಖಾಕಿ ಖದರ್ ತೋರಿಸಲಿದ್ದಾರೆ. ಬಹಳ ಗ್ಯಾಪ್ ನ ಬಳಿಕ ಅವರು ಪೊಲೀಸ್ ಸಮವಸ್ತ್ರ ತೊಡುತ್ತಿದ್ದಾರೆ. ಈ ಬಗ್ಗೆ ದರ್ಶನ್ ಮಾತನಾಡುತ್ತಾ, ಅರ್ಜುನ್ ಅವರ ಪ್ರತಿಭೆ ಏನು ಎಂದು ನನಗೆ ಗೊತ್ತು.
ಅವರು ಪಿಎನ್ ಸತ್ಯ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವಾಗಲೇ ಅವರ ಪ್ರತಿಭೆ ಏನು ಎಂದು ಅರ್ಥವಾಗಿತ್ತು. 'ತಂಗಿಗಾಗಿ' ಚಿತ್ರದಲ್ಲಿ ಅವರು ಹಾಡಿನ ಸಾಹಿತ್ಯವನ್ನೂ ರಚಿಸಿದ್ದರು. ಗೀತರಚನೆ ಹಾಗೂ ಸಂಭಾಷಣೆಯಲ್ಲೂ ಅವರಿಗೆ ಹಿಡಿತ ಇದೆ ಎಂದಿರುವುದು ಅರ್ಜುನ್ ಗೆ ಬೆಟ್ಟದಷ್ಟು ಶಕ್ತಿ ತುಂಬಿದಂತಾಗಿದೆ.ಹುಟ್ಟುಹಬ್ಬದ ದಿನ (ಫೆ.16) ಅವರ ನೂತನ ಚಿತ್ರ 'ಬೃಂದಾವನ' ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿದೆ. ಕೆ.ಮಾದೇಶ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. ಈ ಚಿತ್ರದ ಬಳಿಕ ಎಪಿ ಅರ್ಜುನ್ ನಿರ್ದೇಶನದ ಚಿತ್ರ ಆರಂಭವಾಗಲಿದೆ.
ಇದೇ ಸಂದರ್ಭದಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' (ಚಿತ್ರ ವಿಮರ್ಶೆ) ಚಿತ್ರವನ್ನು ನಿರ್ಮಿಸಿದ್ದ ಆನಂದ್ ಅಪ್ಪುಗೋಳ್ ಅವರು ಇನ್ನೊಂದು ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಚಿತ್ರವೂ ಆಗಸ್ಟ್ 15ಕ್ಕೆ ಘೋಷಣೆಯಾಗಲಿದೆ. (ಏಜೆನ್ಸೀಸ್)


Click it and Unblock the Notifications












