ಇವರ ಮೇಲಿನ ಅಭಿಮಾನ, ಪ್ರೀತಿ ಎಂದು ಕಮ್ಮಿಯಾಗಿಲ್ಲ; ನಟ ದರ್ಶನ್
ಕನ್ನಡ ಚಿತ್ರರಂಗದ ಮೇರು ನಟ, ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರು ಅಗಲಿ ಇಂದಿಗೆ 11 ವರ್ಷಗಳು ಕಳೆದಿವೆ. ವಿಷ್ಣುದಾದ ದೈಹಿಕವಾಗಿ ಇಲ್ಲವಾದರೂ ಪ್ರತಿಯೊಬ್ಬ ಅಭಿಮಾನಿ ಹೃದಯದಲ್ಲಿ ಹೃದಯವಂತ ಇನ್ನೂ ಜೀವಂತವಾಗಿದ್ದಾರೆ.
ಇಂದು ಸಾಹಸಿಂಹ ವಿಷ್ಣುವರ್ಧನ್ ಅವರ 11ನೇ ವರ್ಷದ ಪುಣ್ಯತಿಥಿ ಆಚರಿಸಲಾಗುತ್ತಿದೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಹೃದಯವಂತನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋ ಹೋಗಿ ನೆಚ್ಚಿನ ನಟನ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ. ಸಮಾಧಿಗೆ ಹೂವಿನಿಂದ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಿ ವಿಷ್ಣುದಾದನನ್ನು ಸ್ಮರಿಸಲಿದ್ದಾರೆ.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ಯಜಮಾನನನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ. 'ಇವರ ಮೇಲಿನ ಅಭಿಮಾನ ಪ್ರೀತಿ ಎಂದು ಕಮ್ಮಿಯಾಗಿಲ್ಲ. ಅಭಿಮಾನಿಗಳ ಹೃದಯದಲ್ಲಿ ನಿರಂತರ ಯಜಮಾನನಾಗಿರುವ ನಮ್ಮೆಲ್ಲರ ಪ್ರೀತಿಯ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣು ದಾದ ನೀವು ನಮ್ಮ ಹೃದಯದಲ್ಲಿ ಸದಾ ಜೀವಂತ, ವಿಷ್ಣು ದಾದ ಜನರ ಮನದಲ್ಲಿ ಎಂದಿಗೂ ಅಜರಾಮರ. 11ನೇ ಪುಣ್ಯ ಸ್ಮರಣೆ' ಎಂದು ಬರೆದುಕೊಂಡಿದ್ದಾರೆ.

ನಟ ದರ್ಶನ್ ವಿಷ್ಣುವರ್ಧನ್ ಅವರ ಜೊತೆ ಒಂದು ಸಿನಿಮಾದಲ್ಲೂ ನಟಿಸಿದ್ದಾರೆ. ಈ ಬಂಧನ ಸಿನಿಮಾದಲ್ಲಿ ದರ್ಶನ್ ವಿಷ್ಣುವರ್ಧನ್ ಅವರ ಪುತ್ರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅತಿಥಿ ಪಾತ್ರದಲ್ಲಿ ದರ್ಶನ್ ಮಿಂಚಿದ್ದರು. ಇನ್ನು ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಯಜಮಾನ ಸಿನಿಮಾದ ಟೈಟಲ್ ನಲ್ಲೇ ಸಿನಿಮಾ ಮಾಡಿ ಯಶಸ್ಸು ಗಳಿಸಿದ್ದಾರೆ.
ಇನ್ನು ನಟಿ ಮತ್ತು ಸಂಸದೆ ಸುಮಲತಾ ಟ್ವೀಟ್ ಮಾಡಿ, 'ಸ್ನೇಹ ಪ್ರೀತಿಗೆ ಸಾಕಾರ ರೂಪವಾಗಿದ್ದ ನಮ್ಮ ವಿಷ್ಣುವರ್ಧನ್ ನಮ್ಮ ಕಣ್ಣ ಮುಂದೆ ಇರದೇ ಇರಬಹುದು. ಆದರೆ ನಮ್ಮ ನಿಶ್ಚಲ ಯೋಚನೆಗಳಲ್ಲಿ, ನಮ್ಮ ಚೈತನ್ಯದ ಯೋಜನೆಗಳಲ್ಲಿ, ನಮ್ಮ ಸಾಕ್ಷಿ ಪ್ರಜ್ಞೆಯಲ್ಲಿ ಮತ್ತು ಎಲ್ಲದಕ್ಕೂ ಹೆಚ್ಚಾಗಿ ನಮ್ಮೆಲ್ಲರ ಸ್ನೇಹದ ಸೇತುವೆಯಾಗಿ ಇನ್ನೂ ಜೀವಂತವಾಗಿದ್ದಾರೆ. ವಿಷ್ಣು ಚಿರಾಯು' ಎಂದು ನೆನಪಿಸಿಕೊಂಡಿದ್ದಾರೆ. ಜೊತೆಗೆ ಅಂಬರೀಶ್, ವಿಷ್ಣುವರ್ಧನ್ ಮನೆಯಲ್ಲಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











