ಕೇಕ್ ಕಟ್ ಮಾಡಿ ಕಿಕ್ ಕೊಟ್ಟ ದಾಸ: 'D56' ಸೆಟ್ಟಲ್ಲಿ ಹೊಸ ರೂಲ್ಸ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ 'D56' ಶೂಟಿಂಗ್ ಸೆಟ್ಗೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ 'ಕ್ರಾಂತಿ' ಸಿನಿಮಾ ಶೂಟಿಂಗ್, ಡಬ್ಬಿಂಗ್ ಎಲ್ಲಾ ಮುಗಿಸಿರುವ ದರ್ಶನ್ ಹೊಸ ಲುಕ್ನಲ್ಲಿ ಹೊಸ ಪ್ರಾಜೆಕ್ಟ್ಗೆ ಬಣ್ಣ ಹಚ್ಚಿದ್ದಾರೆ. ಸೋಮವಾರದಿಂದಲೇ ತರುಣ್ ಸುಧೀರ್ ನಿರ್ದೇಶನದಲ್ಲಿ ಬಹುನಿರೀಕ್ಷಿತ ಸಿನಿಮಾ ಚಿತ್ರೀಕರಣ ಶುರುವಾಗಿದೆ.
ದರ್ಶನ್ ನಟನೆಯ 56ನೇ ಚಿತ್ರಕ್ಕೆ ಧೀರ ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಹಿರಿಯ ನಟಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಆಯ್ಕೆ ಆಗಿರುವುದು ಗೊತ್ತಿರುವ ವಿಚಾರ. 'D56' ಥೀಮ್ ಪೋಸ್ಟರ್ನಿಂದಲೇ ಕುತೂಹಲ ಕೆರಳಿಸಿದ್ದ ತರುಣ್ ಸುಧೀರ್ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ನಟ ದರ್ಶನ್ನ ಮತ್ತೊಮ್ಮೆ ಹೊಸ ಲುಕ್ನಲ್ಲಿ ತೋರಿಸುವ ಪ್ರಯತ್ನ ನಡೀತಿದೆ.
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಪೂಜೆ ನೆರವೇರಿಸಿ ಚಿತ್ರಕ್ಕೆ ಚಾಲನೆ ನೀಡಲಾಯಿತು. ಅದ್ಧೂರಿಯಾಗಿ ನಡೆದ ಮುಹೂರ್ತ ಸಮಾರಂಭದಲ್ಲಿ ನಟ ದರ್ಶನ್ ಸೇರಿದಂತೆ ಇಡೀ ತಂಡ ಭಾಗವಹಿಸಿತ್ತು. ಕಥೆಯ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡದೇ ತಂಡ ಕುತೂಹಲ ಕಾಯ್ದುಕೊಂಡಿದೆ. ಅಭಿಮಾನಿಗಳಿಗೆ ಇಷ್ಟವಾಗುವಂತಹ ಒಂದು ಪಕ್ಕಾ ಕರ್ಮಷಿಯಲ್ ಎಂಟರ್ಟೈನರ್ ಸಿನಿಮಾ ಅಂತೂ 'D56' ಆಗಿರಲಿದೆ.

ರಾಕ್ಲೈನ್ ಸ್ಟುಡಿಯೋದಲ್ಲಿ 'D56' ಶೂಟಿಂಗ್
ಸ್ವಾತಂತ್ರ್ಯ ದಿನಾಚರಣೆಯ ದಿನದಿಂದಲೇ ರಾಕ್ಲೈನ್ ಸ್ಟುಡಿಯೋದಲ್ಲಿ 'D56' ಸಿನಿಮಾ ಚಿತ್ರೀಕರಣ ಶುರುವಾಗಿದೆ. ಮೊದಲಿಗೆ ನಟ ದರ್ಶನ್ ಹಾಗೂ ನಾಯಕಿ ರಾಧನಾ ರಾಮ್ ನಡುವಿನ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. 20 ದಿನಗಳ ಕಾಲ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆಯಲಿದೆ. ನಂತರ ನೆಕ್ಸ್ಟ್ ಶೆಡ್ಯೂಲ್ ಬಗ್ಗೆ ತರುಣ್ ಸುಧೀರ್ ಪ್ಲ್ಯಾನ್ ಮಾಡಲಿದ್ದಾರಂತೆ. ನಾಲ್ಕು ದಿನಗಳಿಂದ ಯಶಸ್ವಿಯಾಗಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ ಎಂದು ನಿರ್ದೇಶಕ ತರುಣ್ ಸುಧೀರ್ ಫಿಲ್ಮಿಬೀಟ್ಗೆ ಮಾಹಿತಿ ನೀಡಿದ್ದಾರೆ.

'D56' ಸೆಟ್ಗೆ ಮೊಬೈಲ್ ತರುವಂತಿಲ್ಲ
ಸಿನಿಮಾ ಶೂಟಿಂಗ್ ಸೆಟ್ಗೆ ತಂತ್ರಜ್ಞರು ಹಾಗೂ ಕಲಾವಿದರು ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಚಿತ್ರದ ಮೇಕಿಂಗ್ ದೃಶ್ಯಗಳಾಗಲಿ, ಫೋಟೊಗಳಾಗಲಿ ಲೀಕ್ ಆಗಬಾರದು ಅನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ 'ರಾಬರ್ಟ್' ಸಿನಿಮಾ ಸೆಟ್ಗೂ ನಿರ್ದೇಶಕ ತರುಣ್ ಸುಧೀರ್ ಮೊಬೈಲ್ ಬ್ಯಾನ್ ಮಾಡಿದ್ದರು. ನಿರ್ದೇಶಕರ ಪ್ರಯತ್ನ ಯಶಸ್ವಿಯಾಗಿತ್ತು. ಅದೇ ನಿಯಮವನ್ನು 'D56' ಸಿನಿಮಾ ಸೆಟ್ನಲ್ಲೂ ಮುಂದುವರೆಸಿದ್ದಾರೆ. ಒಟ್ನಲ್ಲಿ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಚಿತ್ರೀಕರಣ ನಡೆಸಲಾಗುತ್ತಿದೆ.

ದರ್ಶನ್ 25 ವರ್ಷಗಳ ಸಂಭ್ರಮಾಚರಣೆ
ಇತ್ತೀಚೆಗಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗದಲ್ಲಿ ಯಶಸ್ವಿಯಾಗಿ 25 ವರ್ಷ ಪೂರೈಸಿದ್ದರು. ಅಭಿಮಾನಿಗಳು ಮತ್ತು ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ನಿನ್ನೆಯಷ್ಟೆ(ಆಗಸ್ಟ್ 18) 'D56' ಸೆಟ್ನಲ್ಲಿ ಕೇಕ್ ಕತ್ತರಿಸಿ ಮತ್ತೊಮ್ಮೆ ಸಂಭ್ರಮಾಚರಣೆ ಮಾಡಲಾಗಿದೆ. ಹಿರಿಯ ನಟ ಮಾಲಾಶ್ರೀ ಫೋಟೊ ಸಮೇತ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸುಮಲತಾ ಅಂಬರೀಶ್, ನಿರ್ದೇಶಕ ವಿ. ಹರಿಕೃಷ್ಣ ಕೂಡ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.

'ರಾಬರ್ಟ್' ಟೀಂ ಮತ್ತೊಂದು ಅದ್ಭುತ ಚಿತ್ರ
ಕಳೆದ ವರ್ಷ 'ರಾಬರ್ಟ್ ಅನ್ನುವ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ಅದೇ ತಂಡ 'D56' ಚಿತ್ರಕ್ಕೆ ಮತ್ತೆ ಜೊತೆಯಾಗಿದೆ. ಸುಧಾಕರ್ ಸಿನಿಮಾಟೊಗ್ರಫಿ ಚಿತ್ರಕ್ಕಿದೆ. ಇನ್ನು ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡುತ್ತಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. ಕೆ.ಎಂ. ಪ್ರಕಾಶ್ ಅವರ ಸಂಕಲನ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಬಹುತೇಕ ಸೆಟ್ಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಸಲು ತೀರ್ಮಾನಿಸಲಾಗಿದೆ.


Click it and Unblock the Notifications











