ಶಾಲಾ ಮಕ್ಕಳಿಗೆ ಶೌಚಾಲಯ, ಯುಪಿಎಸ್, ಕಂಪ್ಯೂಟರ್ ನೀಡಿ ಸಹಾಯ ಮಾಡಿದ ದರ್ಶನ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ 'ಕ್ರಾಂತಿ' ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳು ಕೂಡ ದರ್ಶನ್ ಅವರನ್ನು ಆದಷ್ಟು ಬೇಗ ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಸಿನಿಮಾ ಸೆಟ್ಟೇರಿ ಶೂಟಿಂಗ್ ಕೂಡ ಭರದಿಂದ ಸಾಗಿದ್ದು, ಆದಷ್ಟು ಬೇಗ ರಿಲೀಸ್ ಆಗುವ ನಿರೀಕ್ಷೆ ಕೂಡ ಇದೆ.
Recommended Video

ದರ್ಶನ್ ಕೇವಲ ಸಿನಿಮಾ ಅಂತನೇ ಸಮಯ ಕಳೆಯೋರಲ್ಲ. ಬದಲಾಗಿ ಬಿಡುವಿದ್ದಾಗ ಫಾರ್ಮ್ ಹೌಸ್, ಪ್ರಾಣಿ ಪಕ್ಷಿಗಳು, ಆಭಯಾರಣ್ಯ, ಸುತ್ತಾಟ ಮಾಡುತ್ತಲೇ ಇರುತ್ತಾರೆ. ಇದನ್ನು ಹೊರತು ಪಡಿಸಿ, ಬಡವರಿಗೆ, ಕಷ್ಟ ಅಂತ ಸಹಾಯ ಕೇಳಿ ಬಂದವರಿಗೆ ದರ್ಶನ್ ಯಾವತ್ತೂ ಬರೀ ಕೈನಲ್ಲಿ ಕಳುಹಿಸಿಲ್ಲ.
ಅದರಲ್ಲೂ ಪುಟ್ಟ ಮಕ್ಕಳು ಅಂದ್ರೆ ಸಾಕು ಯಾರಿಗೂ ತಿಳಿಯದಂತೆ ಸಹಾಯ ಮಾಡುತ್ತಲೇ ಇರುತ್ತಾರೆ. ದರ್ಶನ್ ಇತ್ತೀಚೆಗೆ ಕೂಡ ಶಾಲಾ ಮಕ್ಕಳಿಗೆ ಬೇಕಾದಷ್ಟು ನೆರವನ್ನು ನೀಡಿದ್ದಾರೆ. ಸಂಕಷ್ಟದಲ್ಲಿದ್ದ ಶಾಲೆ ಆಡಳಿತ ಮಂಡಳಿಗೆ ಏನೇನು ಅಗತ್ಯ ಇದೆಯೋ ಅದನ್ನು ದರ್ಶನ್ ಪೂರೈಸಿದ್ದಾರೆ. ಅಷ್ಟಕ್ಕೂ ದರ್ಶನ್ ಮಾಡಿದ್ದು ಏನು ಮುಂದೆ ಓದಿ.

ಮಂಡ್ಯದಲ್ಲಿ ದರ್ಶನ್ ಸೃಷ್ಟಿಸಿದ್ರು ಜನಸಾಗರ
ಇತ್ತೀಚೆಗೆ ನಟ ದರ್ಶನ್ 'ಕ್ರಾಂತಿ' ಸಿನಿಮಾದಿಂದ ಬಿಡುವು ಪಡೆದುಕೊಂಡು ಮಂಡ್ಯ ಕಡೆ ಪ್ರಯಾಣ ಬೆಳೆಸಿದ್ದರು. ಇದಕ್ಕೆ ಕಾರಣ ಮಂಡ್ಯದ ಶಾಲಾ ಮಕ್ಕಳಿಗೆ ನೆರವು ನೀಡುವ ಉದ್ದೇಶ. ಹೌದು.. ನಟ ದರ್ಶನ್ ಮಂಡ್ಯದ ಒಟ್ಟು 13 ಸರ್ಕಾರಿ ಶಾಲೆಗಳ ನೆರವಿಗಾಗಿ ತೆರಳಿದ್ದರು. 13 ಸರ್ಕಾರಿ ಶಾಲೆಗಳು ತಮಗೆ ಏನೇನು ಅವಶ್ಯಕತೆ ಇದೆ? ಶಾಲೆ ಮಕ್ಕಳಿಗೆ ಅಗತ್ಯ ವಸ್ತುಗಳು ಏನೇನು ಬೇಕು? ಅವೆಲ್ಲವನ್ನು ತಿಳಿಸಿದ್ದರು. ಅದರಂತೆ ಆಯಾ ಶಾಲೆಯ ಬೇಡಿಕೆ ಮೇರೆಗೆ ದರ್ಶನ್ ಮಂಡ್ಯಗೆ ತೆರಳಿ ಸಹಾಯ ಮಾಡಿದ್ದಾರೆ. 13 ಸರ್ಕಾರಿ ಶಾಲೆಗಳು ಮುಂದಿಟ್ಟಿದ್ದ ಬೇಡಿಕೆಗಳನ್ನು ನಟ ದರ್ಶನ್ ಪೂರೈಸಿದ್ದಾರೆ.

ಪ್ರತಿ ಶಾಲೆಗೂ ಖುದ್ದು ಭೇಟಿ ನೀಡಿದ ದರ್ಶನ್
ದರ್ಶನ್ ಸೋಮವಾರ (ಮಾರ್ಚ್ 14) ರಂದು ಮಂಡ್ಯದಲ್ಲಿ ಶಾಲೆಗಳ ಭೇಟಿಗೆಂದೇ ದಿನ ನಿಗದಿ ಮಾಡಿದ್ದರು. ಅದರಂತೆ ಸೋಮವಾರ ಬೆಳಗ್ಗೆಯೇ ಮಂಡ್ಯದಲ್ಲಿ ಹಾಜರಿದ್ದ ದರ್ಶನ್, ಪ್ರತಿ ಶಾಲೆಗಳಿಗೂ ಭೇಟಿ ನೀಡಿದ್ದಾರೆ. ಬೆಳಗ್ಗೆ 10ಗಂಟೆಯಿಂದ ಸಂಜೆ 4.30ವರೆಗೂ ಟೈಮ್ ಟೇಬಲ್ ಹಾಕಿಕೊಂಡಿದ್ದ ದರ್ಶನ್ ಸಂಜೆವರೆಗೂ ಸರ್ಕಾರಿ ಶಾಲೆಗಳಿಗೆ ವಿಸಿಟ್ ಮಾಡಿದ್ದಾರೆ. ಮಂಡ್ಯದ ಇಂಡುವಾಳು, ಎಲೆಚಾಕನಹಳ್ಳಿ, ಚೊಟ್ಟನಹಳ್ಳಿ, ಕೊಡಿಯಾಲ, ಕೊತ್ತತ್ತಿ, ಬೇವಿನಹಳ್ಳಿ, ಹುಲ್ಲುಕೆರೆ, ಹನಿಯಂಬಾಡಿ, ಮಂಗಲ, ಹೆಬ್ಬಕವಾಡಿ, ಹಳುವಾಡಿ ಮತ್ತು ತಗ್ಗಹಳ್ಳಿಯಲ್ಲಿರುವ 13 ಸರ್ಕಾರಿ ಶಾಲೆಗಳಿಗೂ ದರ್ಶನ್ ಭೇಟಿ ನೀಡಿದ್ದಾರೆ.
ಶಾಲೆಗಳ ಬೇಡಿಕೆಯಂತೆ ವಸ್ತುಗಳನ್ನು ಪೂರೈಸಿದ ದರ್ಶನ್
ಮಂಡ್ಯದ ಈ 13 ಸರ್ಕಾರಿ ಶಾಲೆಗಳು ತಮ್ಮ ತಮ್ಮ ಶಾಲೆಗೆ ಏನೇನು ಬೇಕಿದೆ ಎಂಬ ಬಗ್ಗೆ ಮೊದಲೇ ಪಟ್ಟಿಯನ್ನು ತಯಾರು ಮಾಡಿತ್ತು. ಅದರಂತೆ ಪ್ರತಿ ಶಾಲೆಯ ಬೇಡಿಕೆ ಏನಿತ್ತು ಅದನ್ನು ದರ್ಶನ್ ಪೂರೈಸಿದ್ದಾರೆ. ಒಂದಷ್ಟು ಶಾಲೆ ಮಕ್ಕಳಿಗೆ ಕಂಪ್ಯೂಟರ್, ಮತ್ತೊಂದಷ್ಟು ಶಾಲೆಗಳಿಗೆ ಟಾಯ್ಲೆಟ್, ಯುಪಿಎಸ್, ಶಾಲೆ ಮಕ್ಕಳಿಗೆ ಬುಕ್ಸ್, ಬ್ಯಾಗ್, ಪೆನ್ನು, ಪೆನ್ಸಿಲ್, ಯೂನಿಫಾರ್ಮ್, ಶೂ, ಸೇರಿದಂತೆ ಸಾಕಷ್ಟು ಅಗತ್ಯ ವಸ್ತುಗಳನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೀಡಿದ್ದಾರೆ.

ದರ್ಶನ್ ನೆರವಿಗೆ ಧನ್ಯವಾದ ತಿಳಿಸಿದ ಮಂಡ್ಯ ಜನತೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಉತ್ತಮ ಕೆಲಸಕ್ಕೆ ಶ್ರೀ ಎನ್ ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಸಾಥ್ ನೀಡಿದೆ. ಶ್ರೀ ಎನ್ ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಈಗಾಗಲೇ ಅನೇಕ ಜನಸೇವಾ ಕೆಲಸಗಳನ್ನು ಮಾಡುತ್ತಿತ್ತು. ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಕೂಡ ನೀಡುತ್ತಾ ಬಂದಿದೆ. ಸರ್ಕಾರಿ ಶಾಲೆಗಳಿಗೆ ಅವಶ್ಯಕ ಸೌಲಭ್ಯ ಪರಿಕರಗಳ ವಿತರಣಾ ಸಮಾರಂಭದಲ್ಲಿ ಈ ಬಾರಿ ಸ್ವತಃ ದರ್ಶನ್ ಅವರೇ ಭಾಗಿ ಆಗಿದ್ದು, ಅಲ್ಲಿನ ಜನತೆಗೂ ಖುಷಿ ನೀಡಿದೆ. ಈ ವೇಳೆ ದರ್ಶನ್ಗೆ ಊರಿನ ಮಹಿಳೆಯರು ಆರತಿ ಬೆಳಗಿ ಶುಭವಾಗಲಿ ಎಂದು ಹರಸಿ ಕಳುಹಿಸಿದ್ದಾರೆ. ಹೀಗೆ ಒಂದು ದಿನ ಪೂರ್ತಿ ಮಂಡ್ಯ ಜನತೆ ಜೊತೆ, ಸರ್ಕಾರಿ ಶಾಲೆ ಮಕ್ಕಳ ಜೊತೆ ಕಳೆದಿರುವ ದರ್ಶನ್ ಸೋಮವಾರ ಸಂಜೆಯೇ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ.


Click it and Unblock the Notifications











