ನಟಿ ಚಂದನಾ ದುರಂತ ಅಂತ್ಯ: ಮದುವೆಯಾಗುವುದಾಗಿ ನಂಬಿಸಿದ್ದವ ನಡತೆಯೇ ಸರಿ ಇಲ್ಲ ಎಂದಿದ್ದ
ಹಾಸನದ ಬೇಲೂರು ಮೂಲದವರಾದ ನಟಿ, ನಿರೂಪಕಿ ಚಂದನಾ (29) ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸುವ ದೃಶ್ಯವನ್ನು ಅವರೇ ಸೆಲ್ಫಿ ವಿಡಿಯೋದಲ್ಲಿ ಚಿತ್ರೀಕರಿಸಿಕೊಂಡಿದ್ದರು. ಕೃಷಿಕ ಕುಟುಂಬದಿಂದ ಬಂದ ಚಂದನಾ, ನಟಿಯಾಗಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದರು.
Recommended Video
ಸ್ವಭಾವತಃ ಅವರು ಧೈರ್ಯಶಾಲಿ ಮತ್ತು ಬೋಲ್ಡ್ ವ್ಯಕ್ತಿತ್ವದವರು. ಅವರು ಹೀಗೆ ಜೀವ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮನೆಯವರು ಊಹಿಸಿಯೂ ಇರಲಿಲ್ಲ. ದಿನೇಶ್ ಜತೆಗಿನ ಐದು ವರ್ಷದ ಪ್ರೀತಿಯನ್ನು ಮನೆಯವರಿಂದ ಮುಚ್ಚಿಟ್ಟಿದ್ದ ಅವರಲ್ಲಿ, ತಮ್ಮ ಮದುವೆಯಾಗುತ್ತದೆ ಎಂದು ನಿರೀಕ್ಷಿಸಿದ್ದರು. ದಿನೇಶ್ ಕೂಡ ಅಷ್ಟರಮಟ್ಟಿಗೆ ಅವರನ್ನು ನಂಬಿಸಿದ್ದರು. ಅದಕ್ಕಾಗಿ ದಿನೇಶ್ ಕೇಳಿದಾಗಲೆಲ್ಲಾ ಹಣ ನೀಡುತ್ತಿದ್ದರು. ಅವರನ್ನು ನಂಬಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದರು. ಅದರ ಪರಿಣಾಮ ಗರ್ಭಿಣಿಯಾದಾಗ ದಿನೇಶ್ ಒತ್ತಡಕ್ಕೆ ಮಣಿದು ಗರ್ಭಪಾತ ಮಾಡಿಸಿಕೊಂಡಿದ್ದರು. ಆದರೂ ದಿನೇಶ್ ತಮ್ಮನ್ನು ಮದುವೆಯಾಗುತ್ತಾನೆ ಎಂದು ನಂಬಿದ್ದರು. ಮುಂದೆ ಓದಿ...

ಖಾಸಗಿ ಕಂಪೆನಿಯಲ್ಲಿ ಕೆಲಸ
ಸುಮಾರು ಏಳು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ಚಂದನಾ, ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಚಿತ್ರರಂಗದಲ್ಲಿ ಹೆಸರು ಮಾಡುವ ಕನಸು ಕಂಡಿದ್ದರು. ಆ ಪ್ರಯತ್ನದಲ್ಲಿರುವಾಗ ಕೆಲವು ಜಾಹೀರಾತುಗಳಿಗೆ ನಿರೂಪಣೆ ಮಾಡುವ ಅವಕಾಶವೂ ಸಿಕ್ಕಿತ್ತು. ಇನ್ನೂ ತೆರೆಕಾಣದ 'ಕ್ವಾರ್ಟರ್ ಲೈಫ್' ಎಂಬ ಚಿತ್ರದಲ್ಲಿ ನಟಿಸಿದ್ದರು ಕೂಡ.

ಮದುವೆಯಾಗುವುದಾಗಿ ನಂಬಿಸಿದ್ದ
ಚಂದನಾ ಅವರಿಗೆ ಹೇಗೋ ದಿನೇಶ್ ಪರಿಚಯವಾಗಿತ್ತು. ತಮ್ಮ ಕನಸಿಗೆ ದಿನೇಶ್ ಆಸರೆಯಾಗುತ್ತಾನೆ ಎಂಬ ಭರವಸೆ ಮೂಡಿತ್ತು. ಸ್ನೇಹದಿಂದ ಪ್ರೀತಿಗೆ ಬಾಂಧವ್ಯ ತೆರಳಿತ್ತು. ಹೇಗೂ ಇಬ್ಬರೂ ಮದುವೆಯಾಗುತ್ತೇವಲ್ಲ ಎಂಬ ನಂಬಿಕೆಯಿಂದ ದೈಹಿಕ ಸಂಪರ್ಕದವರೆಗೂ ಮುಂದುವರಿದಿದ್ದರು. ಬಾಷ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್, ಶೋಕಿಯ ಮನೋಭಾವದವನು. ಹೀಗಾಗಿ ತನ್ನ ಅನುಕೂಲಕ್ಕೆ ಚಂದನಾರನ್ನು ಬಳಸಿಕೊಳ್ಳುತ್ತಿದ್ದ. ಲಕ್ಷಗಟ್ಟಲೆ ಹಣವನ್ನೂ ಪಡೆದಿದ್ದ. ನಿನ್ನನ್ನು ಮದುವೆಯಾಗುತ್ತೇನೆ ಎಂದು ಮಾತು ಕೊಟ್ಟಿದ್ದರಿಂದ ಆಕೆ ಬಲವಾಗಿ ನಂಬಿದ್ದರು. ಚಂದನಾ ಜೆಪಿ ನಗರದಲ್ಲಿ ವಾಸವಿದ್ದ ಮನೆಗೆ ದಿನೇಶ್ ಆಗಾಗ ಬರುತ್ತಿದ್ದ.

ಅನುಮಾನಿಸತೊಡಗಿದ್ದ
ಇಬ್ಬರ ಪ್ರೀತಿ ವಿಚಾರ ದಿನೇಶ್ ಮನೆಯವರಿಗೆ ಗೊತ್ತಿತ್ತು. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪಗಳು ಶುರುವಾಗಿದ್ದವು. ಚಂದನಾ ನಡತೆಯ ಬಗ್ಗೆ ದಿನೇಶ್ ಅನುಮಾನ ವ್ಯಕ್ತಪಡಿಸತೊಡಗಿದ್ದ. ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ತನ್ನೊಂದಿಗೆ ಇರುವ ಫೋಟೊಗಳನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದ. ಆದರೆ ಆತನ ಜತೆಗಿದ್ದ ಅನೇಕ ಫೋಟೊಗಳನ್ನು ಶೇರ್ ಮಾಡಿದ್ದರು. ಕೊನೆಗೆ ಮದುವೆಯಾಗಲು ನಿರಾಕರಿಸಿದ.

ನಡತೆ ಸರಿಯಿಲ್ಲ ಎಂದಿದ್ದರು
ಮದುವೆಯಾಗಬೇಕೆಂದರೆ ಐದು ಲಕ್ಷ ರೂ ಕೊಡುವಂತೆ ಕೇಳಿದ. ಇದರ ಬಗ್ಗೆ ಚಂದನಾ ಮನೆಯಲ್ಲಿ ಹೇಳಿದಾಗ ಮದುವೆಯಾದ ನಂತರ ಹಣ ಕೊಡುವುದಾಗಿ ಮನೆಯವರು ಭರವಸೆ ನೀಡಿದ್ದರು. ದಿನೇಶ್ ಮನೆಗೆ ಹೋಗಿ ಮದುವೆ ವಿಚಾರ ಪ್ರಸ್ತಾಪಿಸಿದ್ದರು. ದಿನೇಶ್ ತಂದೆ ಲೋಕಪ್ಪ ಗೌಡ, ತಾಯಿ ಗಾಯತ್ರಿ, ಚಿಕ್ಕಮ್ಮ ಶೈಲಾ ಹಾಗೂ ಸೋದರಮಾವ ದಯಾನಂದ ಮದುವೆಗೆ ಸುತಾರಾಂ ಒಪ್ಪುವುದಿಲ್ಲ ಎಂದಿದ್ದರು. ಚಂದನಾ ನಡತೆ ಸರಿಯಿಲ್ಲ. ಅವಳನ್ನು ಹದ್ದುಬಸ್ತಿನಲ್ಲಿ ಇರಿಸಿಕೊಳ್ಳಿ ಎಂದು ಅವಮಾನಿಸಿದ್ದರು. ಅಷ್ಟೇ ಅಲ್ಲದೆ ದಿನೇಶ್ ಸೋದರ ಮಾವ ಚಂದನಾ ಮನೆಗೆ ಬಂದು ಕೂಡ ಆವಾಜ್ ಹಾಕಿದ್ದರು ಎನ್ನಲಾಗಿದೆ.

ಹಣ ವಾಪಸ್ ಪಡೆಯಲು ಪ್ರಯತ್ನ
ಮದುವೆ ವಿಚಾರವಾಗಿ ದಿನೇಶ್ನನ್ನು ಎಷ್ಟೇ ಬೇಡಿಕೊಂಡರೂ ಆತನ ಮನಸು ಕರಗಿರಲಿಲ್ಲ. ಆಗಲೇ ಆತ ಸುಮಾರು ಐದು ಲಕ್ಷ ರೂ. ಪಡೆದುಕೊಂಡಿದ್ದ ಹಣವನ್ನಾದರೂ ವಾಪಸ್ ಪಡೆಯಲು ಚಂದನಾ ನಿರ್ಧರಿಸಿದರು. ದಿನೇಶ್ ಹೆಸರನ್ನು ಕಚಡಾ ಲೋಫರ್ ಎಂದು ತಮ್ಮ ಫೋನ್ನಲ್ಲಿ ಸೇವ್ ಮಾಡಿಕೊಂಡಿದ್ದರು. ವಾಟ್ಸಾಪ್ ಮೂಲಕ ಆತನಿಗೆ ಮೆಸೇಜ್ ಕಳುಹಿಸಿ ಹಣ ಮರಳಿ ಕೊಡುವಂತೆ ಕೇಳಿದ್ದಳು.

ಐವರ ವಿರುದ್ಧ ಎಫ್ಐಆರ್
ಚಂದನಾ ವಿಷ ಕುಡಿದಿರುವ ಸಂಗತಿ ತಿಳಿದ ದಿನೇಶ್ ತಾನೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ನಂತರ ಪರಾರಿಯಾಗಿದ್ದಾನೆ. ಸದ್ದುಗುಂಟೆ ಪಾಳ್ಯ ಪೊಲೀಸರು ಚಂದನಾ ಮೊಬೈಲಿನಲ್ಲಿದ್ದ ವಿಡಿಯೋವನ್ನು ಎಫ್ಎಸ್ಎಲ್ ವರದಿಗೆ ಕಳುಹಿಸಿದ್ದಾರೆ. ದಿನೇಶ್ ಹಾಗೂ ಅವರ ಕುಟುಂಬದವರು ಸೇರಿ ಒಟ್ಟು ಐದು ಮಂದಿ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ವಂಚನೆ, ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳನ್ನು ದಾಖಲಿಸಲಾಗಿದೆ.


Click it and Unblock the Notifications











