'ಕ್ರಾಂತಿ' ಪ್ರಚಾರದ ವೇಳೆ ದರ್ಶನ್ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಸಿನಿಮಾ ಪ್ರಚಾರಕ್ಕೆಂದು ಹೊಸಪೇಟೆಗೆ ತೆರಳಿದ್ದರು. ಬೆಳಗ್ಗೆಯಿಂದಲೇ 'ಕ್ರಾಂತಿ' ಸಿನಿಮಾ ತಂಡದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ದರ್ಶನ್ ಬರುವುದಕ್ಕೂ ಮುನ್ನ ಪುನೀತ್ ಅಭಿಮಾನಿಗಳು 'ಕ್ರಾಂತಿ' ವೇದಿಕೆ ಏರಿದ್ದರು. ಪುನೀತ್ ಬಾವುಟಗಳನ್ನು ಹಿಡಿದು ಜೈ ಅಪ್ಪು ಎಂದು ಘೋಷಣೆಯನ್ನೂ ಹಾಕಿದ್ದರು.
ವೇದಿಕೆ ಬರುವುದಕ್ಕೂ ಮುನ್ನ ದರ್ಶನ್ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಪುತ್ಥಳಿಗೆ ಹೂ ಮಾಲೆ ಹಾಕಿದ್ದರು. ಆ ಬಳಿಕವೇ 'ಕ್ರಾಂತಿ' ಸಿನಿಮಾದ ಎರಡನೇ ಹಾಡನ್ನು ರಿಲೀಸ್ ಮಾಡುವುದಕ್ಕೆ ವೇದಿಕೆ ಮೇಲೆ ಬಂದಿದ್ದರು. ಈ ವೇಳೆ ಅವರ ಮೇಲೆ ಚಪ್ಪಲಿ ಎಸೆದಿರುವ ಘಟನೆ ನಡೆದಿದೆ.

ದರ್ಶನ್ ಚಪ್ಪಲಿ ಎಸೆದ ಕಿಡಿಗೇಡಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸಪೇಟೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅವರಿಂದಲೇ ಹಾಡನ್ನು ಬಿಡುಗಡೆ ಮಾಡಲು ಮುಂದಾಗಿದ್ದರು. ಮೈಸೂರಿನ ಬಳಿಕ ಹೊಸಪೇಟೆಗೆ ತೆರಳಿ ಅಲ್ಲಿ 'ಕ್ರಾಂತಿ'ಯ ಎರಡನೇ ಹಾಡನ್ನು ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಹೀಗಾಗಿ ಇಡೀ ಚಿತ್ರತಂಡ ಹೊಸಪೇಟೆಗೆ ತೆರಳಿತ್ತು. ಈ ವೇಳೆ ಯಾರೋ ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾರೆ. ಇದು ವಿಡಿಯೋದಲ್ಲಿ ಸೆರೆಯಾಗಿದೆ.

ರಚಿತಾ ರಾಮ್ ಮಾತಾಡುವಾಗ ಈ ಘಟನೆ
ದರ್ಶನ್ ನೋಡಲು ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿತ್ತು. ಈ ವೇಳೆ ನೂಕು ನುಗ್ಗಲು ಏರ್ಪಟ್ಟಿತ್ತು. ವೇದಿಕೆ ಮೇಲೆ ನಿಲ್ಲಲೂ ಅವಕಾಶವಿರದಷ್ಟು ಅಭಿಮಾನಿಗಳು ಸೇರಿದ್ದರು. ಇನ್ನೇನು ರಚಿತಾ ರಾಮ್ ಮಾತಾಡಲು ಮುಂದಾಗಿದ್ದರಷ್ಟೇ. ಅದೇ ವೇಳೆ ದರ್ಶನ್ ಕೂಡ ಮುಂದೆ ಬಂದರು. ಆ ವೇಳೆ ದರ್ಶನ್ ಮೇಲೆ ಚಪ್ಪಲಿ ಬಿದ್ದಿದೆ. ಕಿಡಿಗೇಡಿಗಳ ಈ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

ದರ್ಶನ್ ಪ್ರತಿಕ್ರಿಯೆ ಹೇಗಿತ್ತು?
ರಚಿತಾ ರಾಮ್ ವೇದಿಕೆ ಮೇಲೆ ಮಾತಾಡುವಾಗಲೇ ಇಂತಹದೊಂದು ಘಟನೆ ಎದುರಾಗಿತ್ತು. ದರ್ಶನ್ ಮೇಲೆ ಚಪ್ಪಲಿ ಬಿದ್ದರೂ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಬಳಿಕ ಎದುರಿಗೆ ಇದ್ದ ಕಾನ್ಸ್ಟೆಬಲ್ ವೇದಿಕೆ ಮೇಲೆ ಬಿದ್ದ ಚಪ್ಪಲಿಯನ್ನು ಕೆಳಗೆ ಹಾಕಿದರು. ತಕ್ಷಣವೇ ರಚಿತಾ ರಾಮ್ಗೆ ಮಾತು ನಿಲ್ಲಿಸುವಂತೆ ಸೂಚನೆ ನೀಡಿ, ಅಲ್ಲಿಂದ ತೆರಳಿದರು ಎನ್ನಲಾಗಿದೆ.

ಬಸ್ನಲ್ಲಿ ಬಂದ 'ಕ್ರಾಂತಿ' ಟೀಮ್
'ಕ್ರಾಂತಿ' ಸಾಂಗ್ ರಿಲೀಸ್ ಮಾಡುವುದಕ್ಕೆ ದರ್ಶನ್ ಬರುವ ವಿಷಯ ಮೊದಲೇ ತಿಳಿಸಿದ್ದರಿಂದ ಅಭಿಮಾನಿಗಳ ಹೆಚ್ಚಿನ ಮಟ್ಟದಲ್ಲಿ ಸೇರಿದ್ದರು. ದರ್ಶನ್ ಅಭಿಮಾನಿಗಳ ಜೊತೆ ಪುನೀತ್ ಫ್ಯಾನ್ಸ್ ಕೂಡ ಸೇರಿಕೊಂಡಿದ್ದರಿಂದ ವೇದಿಕೆಗೆ ಇಡೀ ತಂಡ ಬಸ್ನಲ್ಲಿ ಬಂದಿದ್ದರು. ಆದರೂ ವೇದಿಕೆಗೆ ಬರುಲು ಇಡೀ ತಂಡ ಹರಸಾಹಸವನ್ನೇ ಮಾಡಿತ್ತು.


Click it and Unblock the Notifications











