ಎನ್ ಎಂ ಸುರೇಶ್ ವಿರುದ್ಧ ವಂಚನೆ ದೂರು ದಾಖಲು

'ಅದ್ವೈತ' ಸಿನಿಮಾದ ಆಡಿಯೋ ರೈಟ್ಸು ತನಗೆ ಕೊಡುವುದಾಗಿ ಹೇಳಿ, ಕೊನೆಗೆ ಬೇರೆಯವರಿಗೆ ಮಾರಲಾಗಿದೆ ಎಂದು ಆರೋಪಿಸಿ ಸ್ವರ್ಣಾ ಆಡಿಯೋದ ಮಾಲೀಕ ನವೀನ್ ಯಜಮಾನ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಅವರ ದೂರಿನಲ್ಲಿ 'ಗಾಂಧಿಸ್ಮೈಲ್ಸ್' ನಿರ್ದೇಶಕ ರಾಘವೇಂದ್ರ ಕಾಮತ್ ಹೆಸರು ಕೂಡಾ ಇರುವುದು ವಿಶೇಷ.
ರಾಘವೇಂದ್ರ ಕಾಮತ್ ಪ್ರಕಾರ ಎನ್ ಎಮ್ ಸುರೇಶ್ ಎರಡೂವರೆ ವರ್ಷಗಳ ಹಿಂದೆ ಅವರ ಬಳಿಯಿಂದ ಇಪ್ಪತ್ತೆರಡು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದಕ್ಕೆ ಪ್ರತಿಯಾಗಿ 'ಅದ್ವೈತ' ಚಿತ್ರದ ಆಡಿಯೋ- ವೀಡಿಯೋ ಹಕ್ಕುಗಳನ್ನ ಕಾಮತ್ಗೆ ಕೊಡುವುದಾಗಿ ಸುರೇಶ್ ಬರೆದುಕೊಟ್ಟಿದ್ದರಂತೆ. ಅದ್ನನೇ ನಂಬಿಕೊಂಡು ಕಾಮತ್ 'ಅದ್ವೈತ' ಚಿತ್ರದ ಆಡಿಯೋ ಹಕ್ಕನ್ನ ಸ್ವರ್ಣಾ ಸಂಸ್ಥೆಗೆ ಮಾರಿಕೊಂಡಿದ್ದರು. ಆದರೆ ಪ್ರಸ್ತುತ ಏನಾಗಿದೆ ಎಂದರೆ, ಸುರೇಶ್ ತಮ್ಮ ಚಿತ್ರದ ಆಡಿಯೋ ಹಕ್ಕನ್ನ ಅಶ್ವಿನಿ ಮೀಡಿಯಾ ನೆಟ್ವರ್ಕ್ಸ್ಗೆ ಮಾರಿಕೊಂಡಿದ್ದಾರೆ.
ಅಶ್ವಿನಿ ಮೀಡಿಯಾ ಬ್ಯಾನರ್ನಲ್ಲೇ ಮೊನ್ನೆ ಚಿತ್ರದ ಧ್ವನಿಸುರುಳಿ ಸಮಾರಂಭ ಕೂಡಾ ನಡೆದುಹೋಗಿದೆ. ಹಾಗಾಗಿ ರಾಘವೇಂದ್ರ ಕಾಮತ್ ಮತ್ತು ಎನ್ ಎಂ ಸುರೇಶ್ ತನಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಸ್ವರ್ಣಾ ಆಡಿಯೋ ಮಾಲೀಕ ನವೀನ್ ದೂರು ದಾಖಲಿಸಿದ್ದಾರೆ. ಎನ್ ಎಂ ಸುರೇಶ್ ಮಾತು ತಪ್ಪಿದ್ದಾರೆ ಅನ್ನೋದು ಈಗ ಕಾಮತ್ ಕೊಡುತ್ತಿರುವ ಹೇಳಿಕೆ. ಆದರೆ ಸುರೇಶ್ ಬೇರೆಯದ್ದೇ ಕಥೆ ಹೇಳುತ್ತಿದ್ದಾರೆ.
ಕಾಮತ್ ನನ್ನ ಸಹಿ, ಲೆಟರ್ ಹೆಡ್ನ್ನ ಫೋರ್ಜರಿ ಮಾಡಿ ದಾಖಲೆಗಳನ್ನ ಸೃಷ್ಟಿಸಿಕೊಂಡಿದ್ದಾರೆ. ಅದನ್ನೇ ಸ್ವರ್ಣಾ ಆಡಿಯೋಗೆ ಮಾರಿ ಅವರನ್ನೂ ಮೋಸ ಮಾಡಿದ್ದಾರೆ. ಇದಕ್ಕೆಲ್ಲ ಕಾಮತ್ರೇ ಕಾರಣ. ಸ್ವರ್ಣಾ ಆಡಿಯೋದವರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ ಸುರೇಶ್. ಸತ್ಯ ಇನ್ನಷ್ಟೇ ಬಯಲಿಗೆ ಬರಬೇಕು. (ಒನ್ಇಂಡಿಯಾ ಕನ್ನಡ)


Click it and Unblock the Notifications











