'ಕಲಾತಪಸ್ವಿ' ಸಾವಿಗೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ
ಕನ್ನಡದ ಖ್ಯಾತ ನಿರ್ದೇಶಕ, ನಟ ಕಾಶಿನಾಥ್ ಅವರ ಅಗಲಿಕೆಗೆ ಇಡೀ ಕಲಾಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಅಪರೂಪದ ಕಲಾವಿದನಿಗೆ ಸಂತಾಪ ಸೂಚಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಕಾಶಿನಾಥ್ ಅವರ ಅಭಿನಯ ಹಾಗೂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ''ಕಾಶಿನಾಥ್ ಅವರು ಕನ್ನಡ ಚಿತ್ರರಂಗದ ಹಿರಿಯ ನಟ. ಹಾಸ್ಯ ಪಾತ್ರಗಳನ್ನ ಹೆಚ್ಚು ಮಾಡುತ್ತಿದ್ದರು. ನಾನು ಅವರ ಎರಡು ಸಿನಿಮಾ ನೋಡಿದ್ದೇನೆ. ಪ್ರತಿಭಾನ್ವಿತ ಕಲಾವಿದರು. ಕನ್ನಡ ಚಿತ್ರರಂಗಕ್ಕೆ ಅವರ ಸಾವು ತುಂಬ ನಷ್ಟ ತಂದಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ'' ಎಂದು ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದ್ದಾರೆ.

ಇಂದು ಸಂಜೆ 5.30ಕ್ಕೆ ಚಾಮರಾಜಪೇಟೆಯ ಚಿತಗಾರದಲ್ಲಿ ಕಾಶಿನಾಥ್ ಅವರ ಅಂತ್ಯಕ್ರಿಯೆ ನೆರವೇರಲಿದೆ. ಸಂಜೆ 5 ಗಂಟೆಯವರೆಗೂ ಕಾಶಿನಾಥ್ ಅವರ ಪಾರ್ಥೀವ ಶರೀರವನ್ನ ಬೆಂಗಳೂರಿನ ಎನ್.ಆರ್ ಕಾಲೋನಿಯಲ್ಲಿರುವ ಎ.ಪಿ.ಎಸ್ ಕಾಲೇಜ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು.


Click it and Unblock the Notifications











