ಮಾಜಿ ಬಿಗ್ಬಾಸ್ ಸ್ಪರ್ಧಿ ನಿವಾಸದ ಮೇಲೆ ದಾಳಿ: ಎರಡು ಎಫ್ಐಆರ್ ದಾಖಲು
ತೆಲುಗು ಸಿನಿಮಾ ನಟಿ, ಮಾಜಿ ಬಿಗ್ಬಾಸ್ ಸ್ಪರ್ಧಿ ಕರಾಟೆ ಕಲ್ಯಾಣಿ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ನಡು ರಸ್ತೆಯಲ್ಲಿ ಶ್ರಿಕಾಂತ್ ರೆಡ್ಡಿ ಹೆಸರಿನ ಯೂಟ್ಯೂಬರ್ ಮೇಲೆ ಹಲ್ಲೆ ಮಾಡಿದ್ದ ಕರಾಟೆ ಕಲ್ಯಾಣಿ, ಇದೀಗ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಪಕ್ಷಪಾತದ ಆರೋಪಗಳನ್ನು ಮಾಡಿದ್ದಾರೆ.
ಇದರ ನಡುವೆ ಕರಾಟೆ ಕಲ್ಯಾಣಿಯಿಂದ ಅನ್ಯಾಯಕ್ಕೊಳಪಟ್ಟವರೆಂದು ಹೇಳಿಕೊಂಡು ಇಬ್ಬರು ಸಂತ್ರಸ್ತರು ಕರಾಟೆ ಕಲ್ಯಾಣಿ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ. ಜೊತೆಗೆ ಶಿಶು ಕಲ್ಯಾಣ ಅಧಿಕಾರಿಗಳು ಗಂಭೀರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರಾಟೆ ಕಲ್ಯಾಣಿ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.
ಕರಾಟೆ ಕಲ್ಯಾಣಿ ಹೆಣ್ಣು ಮಗುವೊಂದನ್ನು ಅಕ್ರಮವಾಗಿ ಖರೀದಿ ಮಾಡಿದ್ದಾರೆ ಎಂದು ಶಿಶು ಕಲ್ಯಾಣ ಸಹಾವಾಣಿಗೆ ದೂರು ಬಂದ ಕಾರಣ, ಎಸ್ಆರ್ ನಗರ ಪೊಲೀಸರ ನೆರವಿನೊಂದಿಗೆ ಶಿಶು ಕಲ್ಯಾಣ ಅಧಿಕಾರಿಗಳು ನಟಿ ಕರಾಟೆ ಕಲ್ಯಾಣಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಭೇಟಿ ನೀಡಿದಾಗ ಕರಾಟೆ ಕಲ್ಯಾಣಿ ಮನೆಯಲ್ಲಿರಲಿಲ್ಲ.

ಈ ಮೊದಲು ಕರಾಟೆ ಕಲ್ಯಾಣಿ, ತಮಗೆ ಗಂಡು ಮಗುವೊಂದು ಸಿಕ್ಕಿದ್ದು ಅದನ್ನು ತಾವೇ ಸಾಕುತ್ತಿರುವುದಾಗಿ ಹೇಳಿದ್ದರು. ಆ ಬಗ್ಗೆ ಹಾಗೂ ಇದೀಗ ಹೆಣ್ಣು ಮಗುವಿನ ಬಗ್ಗೆ ಶಿಶು ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅಧಿಕಾರಿ, ''ಹುಡುಗನನ್ನು ಕಾನೂನು ಬದ್ಧವಾಗಿ ದತ್ತು ಪಡೆದಿದ್ದಾರೆ. ಆದರೆ ಮೂರು ದಿನದ ಹೆಣ್ಣು ಮಗುವೊಂದನ್ನು ಶ್ರೀಕಾಕುಲಂನಿಂದ ಕರೆದುಕೊಂಡು ಬಂದಿರುವುದಾಗಿ ಹೇಳುತ್ತಿದ್ದಾರೆ. ಆದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ಇನ್ನೂ ನೀಡಿಲ್ಲ'' ಎಂದಿದ್ದಾರೆ.
ಪರಿಶೀಲನೆ ಬಳಿಕ ಮಾಧ್ಯಮದೊಟ್ಟಿಗೆ ಮಾತನಾಡಿರುವ ಕರಾಟೆ ಕಲ್ಯಾಣಿ ತಾಯಿ, ''ಶ್ರೀಕಾಕುಲಂನ ಬಡ ವ್ಯಕ್ತಿಯಿಂದ ನಾವು ಆ ಹೆಣ್ಣು ಮಗುವನ್ನು ತೆಗೆದುಕೊಂಡು ಬಂದಿದ್ದೇವೆ. ನಾವು ಕಾನೂನು ಬಾಹಿರವಾಗಿ ಮಗುವನ್ನು ತೆಗೆದುಕೊಂಡು ಬಂದಿಲ್ಲ. ಆತನಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಒಬ್ಬ ಮಗಳನ್ನು ನಮಗೆ ನೀಡಿದ್ದಾರೆ ಎಂದಿದ್ದಾರೆ. ಆದರೆ ಕಾಗದದ ಪತ್ರದ ಬಗ್ಗೆ ನನಗೆ ಮಾಹಿತಿ ಇಲ್ಲ'' ಎಂದೂ ಸಹ ಹೇಳಿದ್ದಾರೆ.
ಇದರ ಹೊರತಾಗಿ ನಟಿ ಕರಾಟೆ ಕಲ್ಯಾಣಿ ವಿರುದ್ಧ ಎಸ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಆಸ್ತಿ ಖರೀದಿ ವ್ಯವಹಾರವೊಂದರಲ್ಲಿ ಕರಾಟೆ ಕಲ್ಯಾಣಿ ಮೂರೂವರೆ ಲಕ್ಷ ರುಪಾಯಿ ಹಣ ಪಡೆದುಕೊಂಡಿದ್ದರು. ಆದರೆ ಆ ಹಣವನ್ನು ಬ್ಯಾಂಕ್ಗೆ ಕಟ್ಟಿರಲಿಲ್ಲ. ಹಣವನ್ನು ಬ್ಯಾಂಕ್ಗೆ ಕಟ್ಟುವಂತೆ ಹೇಳಿದಾಗ ನಮ್ಮ ಮೇಲೆ ಜಗಳ ಮಾಡಿದರು. ಹಣ ವಾಪಸ್ ಕಟ್ಟಲಿಲ್ಲವೆಂದರೆ ವಿಷ ಕುಡಿಯುವುದು ಸಾಯುವುದಾಗಿ ವಿಡಿಯೋ ಒಂದನ್ನು ಕಳಿಸಿ ನಮ್ಮನ್ನು ಹೆದರಿಸಿದ್ದರು ಎಂದು ಗೋಪಿಕೃಷ್ಣ ಎಂಬುವರು ದೂರು ನೀಡಿದ್ದಾರೆ. ಅದರನ್ವಯ ಕರಾಟೆ ಕಲ್ಯಾಣಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದು ಹೊರತುಪಡಿಸಿ, ಕೆಲ ತಿಂಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತ ಬಾಲಕಿಯ ಚಿತ್ರವನ್ನು ಹೆಸರನ್ನು ಇತರೆ ಮಾಹಿತಿಗಳನ್ನು ಕರಾಟೆ ಕಲ್ಯಾಣಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ನಿತೇಶ್ ಎಂಬುವರು ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಕರಾಟೆ ಕಲ್ಯಾಣಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಪೊಲೀಸರು.


Click it and Unblock the Notifications











