ಪುನೀತಣ್ಣನಿಗಾಗಿ ಭಿನ್ನ ಸ್ಟೈಲ್ನಲ್ಲಿ ರಸ್ತೆಗಿಳಿದ ಕಾಫಿನಾಡ್ ಚಂದು, ಮಾಡಿದ್ದಾರೊಂದು ಮನವಿ
ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಶೈಲಿಯಲ್ಲಿ ಹಾಡು ಹಾಡುತ್ತಾ, ಹುಟ್ಟುಹಬ್ಬಕ್ಕೆ ಶುಭಾಷಯ ಕೋರುತ್ತಾ ವೈರಲ್ ಆಗಿದ್ದ ಕಾಫಿನಾಡ್ ಚಂದು ಇತ್ತೀಚಿನ ಕೆಲ ದಿನಗಳಿಂದ ತುಸು ಮಂಕಾಗಿದ್ದರು. ಆದರೆ ಈಗ ಮತ್ತೆ ಬಂದಿದ್ದಾರೆ.
ಕಾಫಿನಾಡ್ ಚಂದು ದೊಡ್ಮನೆ ಕುಟುಂಬದ ಅದರಲ್ಲಿಯೂ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿ, ತನ್ನ ಬಹುತೇಕ ಎಲ್ಲ ವಿಡಿಯೋಗಳಲ್ಲಿ, ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ಪುನೀತ್ ರಾಜ್ಕುಮಾರ್ ಅವರ ಕೊನೆಯ ಸಿನಿಮಾ 'ಗಂಧದ ಗುಡಿ' ತೆರೆಗೆ ಬರುತ್ತಿದ್ದು, ತನ್ನ ನೆಚ್ಚಿನ ನಟನ ಸಿನಿಮಾಕ್ಕೆ ಭಿನ್ನವಾಗಿ ಪ್ರಚಾರ ಆರಂಭಿಸಿದ್ದಾರೆ ಕಾಫಿನಾಡ್ ಚಂದು.

ತನ್ನ ತಲೆಕೂದಲನ್ನು 'ಗಂಧದ ಗುಡಿ' ಎಂದು ಕಟ್ ಮಾಡಿಸಿಕೊಂಡು ಬೀದಿಗಳಲ್ಲಿ ಸುತ್ತುತ್ತಾ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ ಕಾಫಿನಾಡ್ ಚಂದು.
''ಹಿಂದೆ 'ಓಂ' ಸಿನಿಮಾ ಹೇಗೆ ಹೆಸರು ಮಾಡಿತ್ತೊ ಹಾಗೆಯೇ 'ಗಂಧದ ಗುಡಿ' ಸಿನಿಮಾ ಸಹ ಹೆಸರು ಮಾಡುತ್ತೆ. 'ಓಂ', 'ಜನುಮದ ಜೋಡಿ' 'ಮುಂಗಾರು ಮಳೆ', 'ಚೆಲುವಿನ ಚಿತ್ತಾರ' ಸಿನಿಮಾಗಳು ವರ್ಷಾನುಗಟ್ಟಲೆ ಓಡಿದವು. ಹಾಗೆಯೇ ಈ ಸಿನಿಮಾ ಸಹ ವರ್ಷಾನುಗಟ್ಟಲೆ ಚಿತ್ರಮಂದಿರದಲ್ಲಿ ಓಡಬೇಕು. ಪುನೀತಣ್ಣನ ಕೊನೆಯ ಸಿನಿಮಾ ಇದು. ಅವರು ಮೇಲಿನಿಂದ ನೋಡ್ತಾ ಇರ್ತಾರೆ. ಈ ಸಿನಿಮಾ ನೋಡಿದರೆ ಅವರಿಗೆ ಆನಂದ ಆಗುತ್ತೆ. ಹಾಗಾಗಿ ಎಲ್ಲರೂ ಈ ಸಿನಿಮಾ ನೋಡಿ ಆನಂದಿಸಿ'' ಎಂದಿದ್ದಾರೆ ಕಾಫಿನಾಡ್ ಚಂದು.
ಕಾಫಿನಾಡ್ ಚಂದು ಅವರು ತಮ್ಮ ವಿಡಿಯೋಗಳ ಮೂಲಕ ಭಾರಿ ಜನಪ್ರಿಯರಾಗಿದ್ದರು. ಲಕ್ಷಾಂತರ ಮಂದಿ ಫಾಲೋವರ್ಗಳನ್ನು ಸಹ ಹೊಂದಿದ್ದರು. ಆದರೆ ಅವರ ಇನ್ಸ್ಟಾಗ್ರಾಂ ಖಾತೆಯನ್ನು ಕೆಲವು ಕಿಡಿಗೇಡಿಗಳು ಹ್ಯಾಕ್ ಮಾಡಿದರು. ಹಾಗಾಗಿ ಅವರ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಡಿಮೆಯಾಗಿವೆ.
ಇನ್ನು ಪುನೀತ್ ರಾಜ್ಕುಮಾರ್ ಅವರ 'ಗಂಧದ ಗುಡಿ' ಡಾಕ್ಯು-ಸಿನಿಮಾ ಅಕ್ಟೋಬರ್ 28 ರಂದು ಬಿಡುಗಡೆ ಆಗಲಿದೆ. ರಾಜ್ಯದ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಚಿತ್ರಿಸಿ, ಸ್ಥಳಗಳ ಬಗ್ಗೆ ತಮ್ಮ, ತಮ್ಮ ಕುಟುಂಬದ ಹಾಗೂ ಅಣ್ಣಾವ್ರ ನೆನಪುಗಳನ್ನು ದಾಖಲಿಸಿ ಬಿಡುಗಡೆ ಮಾಡುತ್ತಿದ್ದಾರೆ. ಈ ಜರ್ನಿಯಲ್ಲಿ ಅಮೋಘ ವರ್ಷ ಸಹ ಅಪ್ಪು ಜೊತೆಗಿದ್ದರು.


Click it and Unblock the Notifications











