'ಕೋಬ್ರಾ' ವಿಜಯ್ ವಿರುದ್ಧ ನಿರ್ಮಾಪಕ ಗೌಡ ದೂರು
'ಬ್ಲಾಕ್ ಕೋಬ್ರಾ' ಎಂಬ ಅಡ್ಡಹೆಸರು ಗಳಿಸಿರುವ ದುನಿಯಾ ವಿಜಯ್ ತಾವು 'ಕೋಬ್ರಾ' ಸಿನೆಮಾ ಮಾಡುತ್ತಿರುವುದಾಗಿ ಘೋಷಿಸುತ್ತಿದ್ದಂತೆ ವಿವಾದಕ್ಕೆ ಸಿಲುಕಿದ್ದಾರೆ. ಅವರ ಕಾಲ್ ಶೀಟ್ ಪಡೆದು 'ಸಿಂಹಾದ್ರಿ' ಚಿತ್ರಕ್ಕೆ ತಯಾರಿ ನಡೆಸುತ್ತಿದ್ದ ನಿರ್ಮಾಪಕ ಎಸ್ಆರ್ ಗೌಡ ಅವರು ವಿಜಯ್ ಅವರು ಮಾಡಿಕೊಂಡ ಒಪ್ಪಂದ ಮುರಿದಿದ್ದಾರೆ ಎಂದು ದೂರು ನೀಡಿದ್ದಾರೆ.
ಎಸ್ಆರ್ ಗೌಡ ಅವರು ಹೇಳುವ ಪ್ರಕಾರ, ದುನಿಯಾ ವಿಜಯ್ ಅವರು 'ಸಿಂಹಾದ್ರಿ' ಚಿತ್ರದಲ್ಲಿ ನಟಿಸುವುದಾಗಿ ಮತ್ತು ಆ ಚಿತ್ರದ ಚಿತ್ರೀಕರಣ ಮುಗಿಯುವವರೆಗೆ ಮತ್ತಾವುದೇ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ವಿಜಯ್ ಅವರು ಬೇರೆ ಚಿತ್ರ ಘೋಷಿಸಿ ಒಪ್ಪಂದ ಮುರಿದಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ವಿಜಯ್ ಅವರು, 'ಸಿಂಹಾದ್ರಿ'ಯ ಬದಲು ಇದ್ದಕ್ಕಿದ್ದಂತೆ 'ಕೋಬ್ರಾ' ಮತ್ತು 'ರಿಂಗ್ ರೋಡ್ ಶುಭಾ' ಚಿತ್ರಗಳಲ್ಲಿ ಅಭಿನಯಿಸುತ್ತಿರುವುದಾಗಿ ಘೋಷಿಸಿದ್ದಾರೆ ಎಂಬುದು ಎಸ್ಆರ್ ಗೌಡ ಅವರ ಆರೋಪ. ಸಿಂಹಾದ್ರಿ ಶೂಟಿಂಗ್ ಇನ್ನೆರಡು ತಿಂಗಳಲ್ಲಿ ಆರಂಭವಾಗಲಿದ್ದು, ಅದು ಮುಗಿದ ತಕ್ಷಣವೇ ಇತರ ಚಿತ್ರಗಳ ಬಗ್ಗೆ ಘೋಶಿಸಲಿ ಎಂಬುದು ಅವರ ಆರೋಪ. ಸಿಂಹಾದ್ರಿ ಚಿತ್ರಕ್ಕಾಗಿ ಮುಂಗಡ ಹಣವನ್ನೂ ವಿಜಯ್ ಅವರಿಗೆ ನೀಡಿದ್ದಾಗಿ ಗೌಡ ಹೇಳಿದ್ದಾರೆ.

ಈ ವಿವಾದದ ಬಗ್ಗೆ ಶುಕ್ರವಾರ ಸಂಜೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಎಸ್ಆರ್ ಗೌಡ ಮತ್ತು ವಿಜಯ್ ನಡುವೆ ಮಾತುಕತೆ ನಡೆಯಲಿದ್ದು, ಮಾತುಕತೆ ಮುಗಿದ ನಂತರವೇ ಈ ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡುವುದಾಗಿ ವಿಜಯ್ ನುಡಿದಿದ್ದಾರೆ. ಚೇಂಬರಿನಲ್ಲಿ ಮಾತುಕತೆ ಮುಗಿಯುವವರೆಗೆ ಈ ಬಗ್ಗೆ ಚರ್ಚಿಸುವುದಿಲ್ಲ ಎಂದು ವಿಜಯ್ ಗಪ್ ಚಿಪ್ ಆಗಿದ್ದಾರೆ.
ಯಾವುದೇ ಚಿತ್ರ ಭಾರೀ ಸದ್ದು ಮಾಡದೇ ಇದ್ದರೂ, ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದರೂ ಸದ್ಯಕ್ಕೆ ಭಾರೀ ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ವಿಜಯ್ ಅವರ ನಡೆಗಳು ಒಂದೊಂದು ಬಾರಿ ವಿಚಿತ್ರವಾಗಿರುತ್ತವೆ. ಕೋಟಿ ಸಂಭಾವನೆ ಪಡೆಯುತ್ತಿದ್ದರೂ ಮಹಿಳೆಯರೇ ನಿರ್ಮಿಸಿ, ನಿರ್ದೇಶಿಸುತ್ತಿರುವ 'ರಿಂಗ್ ರೋಡ್ ಶುಭಾ' ಚಿತ್ರಕ್ಕಾಗಿ ಅವರು ಕೇವಲ 1 ರು. ಪಡೆಯುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದರು.
ಹಾಗೆಯೆ, ಮಾಟ ಮಂತ್ರಕ್ಕೆ ಸಂಬಂಧಿಸಿದ 'ಜಯಮ್ಮನ ಮಗ' ಚಿತ್ರ ಮುಗಿಸಿದ ನಂತರ, ತಮ್ಮ ಮೇಲೆಯೇ ಯಾರು ಮಾಟ ಮಂತ್ರ ಮಾಡದಿರಲಿ ಎಂದು ವಿಜಯ್ ಅವರು ಪ್ರತ್ಯಂಗಿರಾ ಹೋಮ ಮಾಡಿಸಿದ್ದರು. ಸಂಕಷ್ಟದಲ್ಲಿದ್ದ ಹಿರಿಯ ನಟಿ ಶಾಂತಮ್ಮ ಅವರಿಗೆ 50 ಸಾವಿರ ರು. ನೀಡಿದ್ದ ವಿಜಯ್, ಕೌಟುಂಬಿಕ ನ್ಯಾಯಾಲಯದಲ್ಲಿರುವ ವಿವಾಹ ವಿಚ್ಛೇದನ ಪ್ರಕರಣದಲ್ಲಿ ತಮಗೇ ಜೀವನಾಂಶ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.


Click it and Unblock the Notifications











