''ರೆಬೆಲ್ ಸ್ಟಾರ್ ಅಂಬರೀಶ್ ಗೆ ಧಿಕ್ಕಾರ...ಧಿಕ್ಕಾರ...''
ಮಂಡ್ಯದ ಗಂಡಿಗೆ ಜೈ...ಕರುನಾಡ ಕರ್ಣನಿಗೆ ಜೈ...ರೆಬೆಲ್ ಸ್ಟಾರ್ ಗೆ ಜೈ...ಅಂಬಿ ಮಾಮನಿಗೆ ಜೈ...ಅಂತ ಜೈಕಾರ ಹಾಕಿಸಿಕೊಳ್ಳುತ್ತಿದ್ದ ಅಂಬರೀಶ್ ನಿನ್ನೆ ಧಿಕ್ಕಾರ ಕೂಗಿಸಿಕೊಂಡರು. ಹಾಗೆ, ''ಅಂಬರೀಶ್ ಗೆ ಧಿಕ್ಕಾರ'' ಅಂತ ಸಾರಿ ಸಾರಿ ಕೂಗಿದವರು ಕನ್ನಡ ಚಿತ್ರರಂಗದ ನಿರ್ಮಾಪಕರುಗಳೇ..!
ದುರಂತ ಅಂದ್ರೆ ಇದೇ. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಆಗಲ್ಲ ಅಂತ ಕನ್ನಡ ಚಿತ್ರರಂಗ ಇದೀಗ ಒಡೆದ ಮನೆಯಾಗಿದೆ. 'ಕಲಾವಿದರು ನಮಗೆ ಸಹಕಾರ ನೀಡಬೇಕು' ಅಂತ ನಿರ್ಮಾಪಕರು ಬೀದಿಗಿಳಿದಿದ್ದಾರೆ. ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ನಿಗದಿಯಾಗಿತ್ತು. [ಧರಣಿ ನಿರತ ನಿರ್ಮಾಪಕರ ಭವಿಷ್ಯ ಇಂದು ಅಂಬರೀಷ್ ಕೈಯಲ್ಲಿ!]
ಸಭೆ ನಿಗದಿಯಾಗಿದ್ದಕ್ಕೆ ಕಾರಣ - ಕಳೆದ ಸೋಮವಾರದಿಂದ ಕನ್ನಡ ಚಿತ್ರರಂಗದ ನಿರ್ಮಾಪಕರು ಫಿಲ್ಮ್ ಚೇಂಬರ್ ನಲ್ಲಿ ಧರಣಿ ನಡೆಸುತ್ತಿದ್ದಾರೆ. ತಮ್ಮ ಚಿತ್ರಗಳನ್ನ ಟಿವಿ ಚಾನೆಲ್ ನವರು ಕೊಂಡುಕೊಳ್ಳುತ್ತಾಯಿಲ್ಲ. ಹೀಗಿದ್ದರೂ, ಅದೇ ವಾಹಿನಿಗಳಲ್ಲಿ ಸ್ಟಾರ್ ನಟರು ರಿಯಾಲಿಟಿ ಶೋಗಳನ್ನ ನಡೆಸಿಕೊಡುತ್ತಿದ್ದಾರೆ. ನಿರ್ಮಾಪಕರ ಕಷ್ಟಕ್ಕೆ ಕಲಾವಿದರು ಕೈಜೋಡಿಸುತ್ತಿಲ್ಲ.
ರಿಯಾಲಿಟಿ ಶೋಗಳಲ್ಲಿ ಬಿಜಿಯಾಗಿರುವ ನಟರು, ನಿರ್ಮಾಪಕರಿಗೆ ಕಾಲ್ ಶೀಟ್ ಕೂಡ ನೀಡುತ್ತಿಲ್ಲ. ಪ್ರೊಡ್ಯೂಸರ್ಸ್ ಲಾಸ್ ನಲ್ಲಿದ್ದಾರೆ ಅಂತ ಎಲ್ಲಾ ನಿರ್ಮಾಪಕರು ಒಟ್ಟುಗೂಡಿ ಹತ್ತು ದಿನಗಳ ಪ್ರತಿಭಟನೆ ಕೈಗೊಂಡಿದ್ದಾರೆ. ಅವರ ಸಮಸ್ಯೆಯನ್ನ ಚರ್ಚಿಸುವುದಕ್ಕೆ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ನಿನ್ನೆ ಸಭೆ ಕರೆದಿದ್ದರು.
ಸಭೆಯಲ್ಲಿ ಎಲ್ಲವೂ ಸರಿಹೋಗುತ್ತೆ ಅನ್ನುವಷ್ಟರಲ್ಲಿ ಫಿಲ್ಮ್ ಚೇಂಬರ್ ನಲ್ಲಿ ಆಗಿದ್ದೇ ಬೇರೆ. ಅಲ್ಲಿ ಆದ ಕೆಲ ರಾದ್ಧಾಂತಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ....

ಅಂಬಿ ಬಂದಿದ್ದೇ ಲೇಟು..!
ರೆಬೆಲ್ ಸ್ಟಾರ್ ಅಂಬರೀಶ್ ನೇತೃತ್ವದಲ್ಲಿ ಕಲಾವಿದರ ಸಂಘ, ನಿರ್ಮಾಪಕರ ಸಂಘದ ಕಷ್ಟ ಕುರಿತು ನಿನ್ನೆ ಸಭೆಯಲ್ಲಿ ಚರ್ಚಿಸಬೇಕಿತ್ತು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಭೆ ನಿಗದಿಯಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಹಿರಿಯ ನಟಿ ಸರೋಜ ದೇವಿ, ಜಯಮಾಲಾ, ಜಗ್ಗೇಶ್, ಕೋಮಲ್ ಕುಮಾರ್, ಶ್ರೀನಾಥ್ ಸೇರಿದಂತೆ ಕಲಾವಿದರ ಬಳಗ ಅಲ್ಲಿ ನಾಲ್ಕು ಗಂಟೆಗೆ ಸರಿಯಾಗಿ ನೆರೆದಿತ್ತು. ಆದ್ರೆ, ಅಂಬರೀಶ್ ಬಂದಿದ್ದು ಸಂಜೆ 6.30 ರ ಸುಮಾರಿಗೆ. [ಅಂಬಿ ಬರ್ಲಿಲ್ಲ ; ಶಿವಣ್ಣ, ಸರೋಜ ದೇವಿ ಕಾಯ್ಲಿಲ್ಲ..!]

ಕಾದು ಕಾದು ಸುಸ್ತಾದ ಶಿವಣ್ಣ
ನಾಲ್ಕು ಗಂಟೆಗೆ ಸಭೆ ಅಂತ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸಮಯಕ್ಕೆ ಸರಿಯಾಗಿ ಆಗಮಿಸಿದರು. ಆದ್ರೆ, ಗಂಟೆ 6 ಆದರೂ, ಅಧ್ಯಕ್ಷತೆ ವಹಿಸಿದ್ದ ಅಂಬರೀಶ್ ಆಗಮಿಸದೇ ಇದ್ದದ್ದಕ್ಕೆ ಬೇಸೆತ್ತ ಶಿವರಾಜ್ ಕುಮಾರ್, ಹಿರಿಯ ನಟಿ ಸರೋಜ ದೇವಿ ಸೇರಿದಂತೆ ಅನೇಕ ಕಲಾವಿದರು ಮನೆ ಕಡೆ ಮುಖ ಮಾಡಿದರು. [ನಿರ್ಮಾಪಕರ ಸತ್ಯಾಗ್ರಹದ ಬಗ್ಗೆ ಶಿವಣ್ಣ ಕೊಟ್ಟ ಉತ್ತರ ಇದು!]

ಸಭೆಯಲ್ಲಿ ಸ್ಟಾರ್ ನಟರೇ ಇಲ್ಲ..!
ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜ ಹೇಳಿಕೆ ನೀಡಿದ್ದ ಪ್ರಕಾರ, ನಿನ್ನೆ ನಡೆದ ಸಭೆಯಲ್ಲಿ ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್, ಗಣೇಶ್, ರಮೇಶ್, ರವಿಚಂದ್ರನ್ ಸೇರಿದಂತೆ ಸ್ಟಾರ್ ನಟರ ಬಳಗ ನೆರೆದಿರಬೇಕಿತ್ತು. ಎಲ್ಲರಿಗೂ ಸುತ್ತೋಲೆ ಕೂಡ ಹೊರಡಿಸಲಾಗಿತ್ತು. ಆದ್ರೆ, ಶಿವರಾಜ್ ಕುಮಾರ್ ಒಬ್ಬರನ್ನ ಬಿಟ್ಟರೆ, ಮತ್ತಿನ್ಯಾರು ಫಿಲ್ಮ್ ಚೇಂಬರ್ ಕಡೆ ತಿರುಗಿ ನೋಡಲಿಲ್ಲ.! [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

ಸ್ಟಾರ್ ನಟರಿಗೆ ನಿರ್ಮಾಪಕರ ಧಿಕ್ಕಾರ.!
ಸಭೆ ನಿಗದಿಯಾಗಿದ್ದರೂ, ಯಾವೊಬ್ಬ ಸ್ಟಾರ್ ನಟ ಕೂಡ ಆಗಮಿಸದಿದ್ದಕ್ಕೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ನಿರ್ಮಾಪಕರೆಲ್ಲಾ ಧಿಕ್ಕಾರ ಕೂಗುವುದಕ್ಕೆ ಶುರುಮಾಡಿದರು. ಸಮಾಧಾನ ಪಡಿಸುವುದಕ್ಕೆ ಅಂಬರೀಶ್ ಮಧ್ಯಸ್ತಿಕೆ ವಹಿಸಿದಾಗ ಪರಿಸ್ಥಿತಿ ಎಲ್ಲೆ ಮೀರಿತು. [ಒಗ್ಗೂಡದ ಕಲಾವಿದರ ಬಗ್ಗೆ ನಟ ಜಗ್ಗೇಶ್ ಗರಂ]

ಗರಂ ಆದ ಅಂಬರೀಶ್
''ಇಲ್ಲಿ ಪ್ರತಿಭಟನೆ ಮಾಡುತ್ತಿರುವವರ ಪೈಕಿ ಎಷ್ಟು ಜನ ನಿರ್ಮಾಪಕರಿದ್ದೀರಾ, ಯಾರ್ಯಾರು ಎಷ್ಟೆಷ್ಟು ಸಿನಿಮಾ ತೆಗೆದಿದ್ದೀರಾ'' ಅಂತ ಅಂಬರೀಶ್ ಕೇಳಿದಾಗ, ರೊಚ್ಚಿಗೆದ್ದ ನಿರ್ಮಾಪಕರು, ''ನೀವು ಈಗ ಯಾವ ಚಿತ್ರದಲ್ಲಿ ಹೀರೋ ಆಗಿ ಆಕ್ಟ್ ಮಾಡ್ತೀರಾ'' ಅಂತ ತಿರುಗುಬಾಣ ಬಿಟ್ಟರು.

ಅಂಬರೀಶ್ ಗೆ ಧಿಕ್ಕಾರ...ಧಿಕ್ಕಾರ..!
ಮಾತಿನ ಚಕಮಕಿಯಲ್ಲೇ ಕಾಲಹರಣ ಆಯಿತೇ ಹೊರತು, ನಿನ್ನೆ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ನಟರ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ ಅಂತ ಅಂಬರೀಶ್ ಭರವಸೆ ನೀಡಿ ಹೊರಟರು. ಸಭೆ ವಿಫಲವಾಗಿದ್ದಕ್ಕೆ ಸಿಡಿದೆದ್ದ ಪ್ರತಿಭಟನಾ ನಿರತ ನಿರ್ಮಾಪಕರು ಅಂಬರೀಶ್ ವಿರುದ್ಧ ಧಿಕ್ಕಾರ ಕೂಗಿದರು. [ಹೊಟ್ಟೆಪಾಡಿಗಾಗಿ ಬೀದಿಗಿಳಿದ ಕನ್ನಡ ನಿರ್ಮಾಪಕರು]

ಜೂನ್ 10ಕ್ಕೆ ಡೆಡ್ ಲೈನ್
ಸಮಸ್ಯೆ ಬಗೆಹರಿಸುವಂತೆ ಈಗಾಗಲೇ ವಾಣಿಜ್ಯ ಮಂಡಳಿಗೆ ಎಲ್ಲಾ ನಿರ್ಮಾಪಕರು ಜೂನ್ 10 ರವರೆಗೂ ಗಡುವು ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಪರಿಹಾರ ಕಂಡುಕೊಳ್ಳದೇ ಇದ್ದರೆ, ಜೂನ್ 11 ನೇ ತಾರೀಖಿನಿಂದ ಸರಣಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಾರಂತೆ ನಿರ್ಮಾಪಕರು. ಅಲ್ಲದೇ, ಯಾವುದೇ ಚಿತ್ರೀಕರಣ ನಡೆಯದಂತೆ ದಾಂಧಲೆ ಮಾಡುತ್ತಾರಂತೆ. [ಕೆ.ಎಫ್.ಸಿ.ಸಿಗೆ ನಿರ್ಮಾಪಕ ಎ.ಗಣೇಶ್ ಬರೆದಿರುವ ಪತ್ರದಲ್ಲೇನಿದೆ?]


Click it and Unblock the Notifications











