ವಿಷ್ಣು ಸ್ಮಾರಕ ನಿರ್ಮಾಣಕ್ಕೆ 'ಕಂಠೀರವ' ನಾಲ್ಕನೇ ಜಾಗ, ಎಲ್ಲ ಕಡೆಯೂ ವಿವಾದ.!
ವಿಷ್ಣುವರ್ಧನ್ ನಮ್ಮನಗಲಿ ಸುಮಾರು 9 ವರ್ಷ ಮುಗಿದು ಹೋಗಿದೆ. ಇದುವರೆಗೂ ಅವರಿಗೆ ಸಿಗಬೇಕಾದ ಗೌರವ ಸರ್ಕಾರದಿಂದ ಸಿಕ್ಕಿಲ್ಲ ಎಂಬುದು ಅಪಾರ ಅಭಿಮಾನಿಗಳ ನೋವು.
ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ಮಾಡಲಾದ ಕಾರಣ ಅಲ್ಲೇ ಸ್ಮಾರಕ ನಿರ್ಮಾಣ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಆದ್ರೆ, ಆ ಸ್ಥಳಕ್ಕೆ ಭೂವಿವಾದ ಕಾಡಿದ್ದರಿಂದ ಸ್ಮಾರಕ ಕಾರ್ಯ ಆರಂಭವಾಗಲೇ ಇಲ್ಲ.
ನಂತರ ಮೈಸೂರಿಗೆ ಸ್ಥಳಾಂತರ ಮಾಡಿ ಎಂದು ಭಾರತಿ ವಿಷ್ಣುವರ್ಧನ್ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಅದರಂತೆ ಅಲ್ಲಿಯೂ ಸ್ಮಾರಕ ಕಾರ್ಯ ಆರಂಭವಾಗಬೇಕಿತ್ತು. ಕೊನೆಯ ಕ್ಷಣದಲ್ಲಿ ಅದು ನೆರವೇರಲಿಲ್ಲ. ಈಗ ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ಮಾಡಬೇಕು ಎಂಬ ಮಾತು ಕೇಳಿಬರ್ತಿದೆ. ಈ ಮೂಲಕ ವಿಷ್ಣು ಸ್ಮಾರಕಕ್ಕೆ ಇದು ನಾಲ್ಕನೇ ಜಾಗ. ಎಲ್ಲ ಕಡೆಯೂ ಒಂದೊಂದು ವಿವಾದ. ಅಷ್ಟಕ್ಕೂ, ಸ್ಮಾರಕ ನಿರ್ಮಾಣಕ್ಕೆ ನಿಗದಿಯಾಗಿದ್ದ ಸ್ಥಳಗಳ ವಿವಾದವೇನು.? ಮುಂದೆ ಓದಿ.....

ಅಭಿಮಾನ್ ಸ್ಟುಡಿಯೋ ವಿವಾದ
ಅಭಿಮಾನ್ ಸ್ಟುಡಿಯೋದ 10 ಎಕರೆ ಜಾಗದ ಮೇಲೆ ಕೇಸ್ ಹಾಕಲಾಗಿದೆ. ಇದರಲ್ಲಿ ಎರಡು ಎಕರೆ ವಿಷ್ಣುವರ್ಧನ್ ಸ್ಮಾರಕಕ್ಕೆ ಜಾಗ ನೀಡಲಾಗಿದೆ. ಆದ್ರೆ, ಹಿರಿಯ ನಟ ಬಾಲಕೃಷ್ಣ ಅವರ ಕುಟುಂಬದ ಅಧೀನದಲ್ಲಿರುವ ಈ ಸ್ಥಳ ಭೂವಿವಾದಲ್ಲಿದೆ. ಕೋರ್ಟ್ ನಲ್ಲಿ ಪ್ರಕರಣವಿರುವುದರಿಂದ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿತ್ತು. ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

'ಅಭಿಮಾನ್' ಪಕ್ಕದಲ್ಲೇ ಇನ್ನೊಂದು ಜಾಗ
ಅಭಿಮಾನ್ ಸ್ಟುಡಿಯೋ ಸ್ಥಳ ವಿವಾದದಲ್ಲಿದೆ ಅಂತ ಹೇಳಿ, ಅದರ ಪಕ್ಕದಲ್ಲೇ ಇನ್ನೊಂದು ಜಾಗವನ್ನ ಸರ್ಕಾರ ನಿಗದಿ ಮಾಡಿತ್ತು. ವಿಷ್ಣುವರ್ಧನ್ ರಸ್ತೆಯಲ್ಲಿ, ಕೆಂಗೇರಿ ಕಡೆಯಿಂದ ಒಳಗೆ ಹೋಗುವ ಮಾರ್ಗದಲ್ಲಿ (ಅಭಿಮಾನ್ ಸ್ಡುಡಿಯೋಗೂ ಮುಂಚೆ ಎಡ ಭಾಗಕ್ಕೆ) ಒಂದು ಸ್ಥಳ ಫಿಕ್ಸ್ ಮಾಡಿ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುದ್ದಲಿ ಪೂಜೆ ಕೂಡ ಮಾಡಿದ್ದರು. ನಂತರ ಇದು ಅರಣ್ಯ ಪ್ರದೇಶ ಅಂತ ಹೇಳಿ ಸಾಮಾಜಿಕ ಹೋರಾಟಗಾರರೊಬ್ಬರು ಕೋರ್ಟ್ ನಲ್ಲಿ ಕೇಸ್ ಹಾಕಿ ತಡೆ ತಂದರು. ಅಲ್ಲಿಗೆ ಅದೂ ನಿಂತು ಹೋಯಿತು.

ಮೈಸೂರು ಜಾಗದ್ದೂ ಅದೇ ಕಥೆ
ಈ ಎರಡು ಜಾಗಗಳ ವಿವಾದದಿಂದ ತೀವ್ರವಾಗಿ ನೊಂದ ವಿಷ್ಣು ಕುಟುಂಬ, ಮೈಸೂರಿನಲ್ಲಿ ಜಾಗ ಕೊಡಿ ಎಂದು ಕೇಳಿದರು. ನಂತರ ಸರ್ಕಾರವೂ ಅದಕ್ಕೆ ಸಮ್ಮತಿ ಸೂಚಿಸಿ, ಮೈಸೂರಿನ 5 ಎಕರೆ ನೀಡಿದ್ರು. ಸ್ಮಾರಕ ಶಿಲಾನ್ಯಾಸಕ್ಕೆ ದಿನಾಂಕವೂ ನಿಗದಿಯಾಗಿತ್ತು. ಸಿದ್ದರಾಮಯ್ಯ ಅವರು ಈ ಕಾರ್ಯ ಮಾಡಬೇಕಿತ್ತು. ಆದ್ರೆ, ಅದೇ ದಿನ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ನಿಧನರಾದರು. ಹಾಗಾಗಿ, ಅದು ಅಲ್ಲಿಗೆ ನಿಂತು ಹೋಗಿತ್ತು. ನಂತರ ಆ ಜಾಗ ನಮ್ಮದು ಎಂದು ರೈತರೊಬ್ಬರು ಕೋರ್ಟ್ ನಲ್ಲಿ ಕೇಸ್ ಹಾಕಿದರು. ಕೊನೆಗೂ ಆ ಜಾಗವೂ ವಿವಾದವಾಗಿ ನಿಂತಿದೆ.

ಈಗ ನಾಲ್ಕನೇ ಆಯ್ಕೆ ಕಂಠೀರವ
ಇಷ್ಟೆಲ್ಲಾ ಭೂ ವಿವಾದಗಳಿಂದ ಬೇಸತ್ತು ವಿಷ್ಣು ಸ್ಮಾರಕ ಕೆಲಸ ಆಗಲೇ ಇಲ್ಲ. ಇದೀಗ, ಅಂಬರೀಶ್ ನಿಧನದ ನಂತರ ಕಂಠೀರವ ಸ್ಟುಡಿಯೋದಲ್ಲೇ ವಿಷ್ಣು ಸ್ಮಾರಕ ಆಗಲಿ ಎಂಬ ಮಾತು ಕೇಳಿಬರುತ್ತಿದೆ. ಇಂತಹದೊಂದು ಹೇಳಿಕೆಯನ್ನ ಸ್ವತಃ ಸಿಎಂ ಕುಮಾರಸ್ವಾಮಿ ನೀಡಿರುವುದು ನಿಜಕ್ಕೂ ಚರ್ಚೆಗೆ ಕಾರಣವಾಗಿದೆ. ಇದು ಸಾಧ್ಯವಾಗುತ್ತಾ ಗೊತ್ತಿಲ್ಲ.


Click it and Unblock the Notifications











