ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಆರೋಪ: ತನಿಖೆಗೆ ಆಗ್ರಹ
ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಹಣ ದುರ್ಬಳಕೆ ಹಾಗೂ ನಿಯಮಾವಳಿ ಉಲ್ಲಂಘನೆ ಆರೋಪ ಮಾಡಲಾಗಿದ್ದು, ದೂರು ಸಹ ದಾಖಲಾಗಿದೆ.
ಇಂದು ಸುದ್ದಿಗೋಷ್ಠಿ ನಡೆಸಿದ ಕೆಲವು ಸಮಾನ ಮನಸ್ಕ ನಿರ್ಮಾಪಕರು, ನಿರ್ದೇಶಕರು, ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು 'ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹಣಕಾಸು ದುರ್ಬಳಕೆ ಆಗಿದೆ, ಕೆಲವು ನಿಯಮಗಳನ್ನು ಗಾಳಿಗೆ ತೂರಲಾಗಿದೆ' ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಹಾಗೂ ಮಂಡಳಿಯ ಸದಸ್ಯರೂ ಆದ ಎಸ್ವಿ.ರಾಜೇಂದ್ರಸಿಂಗ್ ಬಾಬು, 'ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪ್ರತಿ ವರ್ಷ ಕಾಟಾಚಾರಕ್ಕಷ್ಟೆ ಸರ್ವ ಸದಸ್ಯರ ಸಭೆ ನಡೆಸಲಾಗುತ್ತದೆ. ಸಭೆಯಲ್ಲಿ ಚಿತ್ರರಂಗ ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿ, ಲೆಕ್ಕಪತ್ರ ಕೂಲಂಕಶ ಪರಿಶೀಲನೆಯಾಗಲಿ ನಡೆಯುವುದಿಲ್ಲ. ಕೇವಲ ಗದ್ದಲ-ಗಲಾಟೆಯಲ್ಲಿ ಸಭೆ ಮುಗಿಯುತ್ತದೆ' ಎಂದರು.

'ಹಣ ದುರುಪಯೋಗ, ಬೈಲಾ ನಿಯಮ ಉಲ್ಲಂಘನೆ, ಸ್ವಜನಪಕ್ಷಪಾತ, ನಿಯಮ ಬಾಹಿರ ಚಟುವಟಿಕೆಗಳು ಇನ್ನೂ ಮುಂತಾದ ಭ್ರಷ್ಟತೆಗಳು ಮಂಡಳಿಯಲ್ಲಿ ನಡೆದಿವೆ. ಇವುಗಳ ಬಗ್ಗೆ ತನಿಖೆ ಆಗಬೇಕೆಂದು 70 ಮಂದಿ ನಿರ್ಮಾಪಕರು, ಸದಸ್ಯರು ಸೇರಿ ಸಹಕಾರ ಸಂಘದ ಉಪನಿಭಂದಕರು, ಸಂಘಗಳ ಜಿಲ್ಲಾ ನೊಂದಾವಣಿಕಾರರ ಬಳಿ ದೂರು ಸಲ್ಲಿಸಲಾಗಿದೆ' ಎಂದು ಅವರು ಮಾಹಿತಿ ನೀಡಿದರು.
ನಿಗದಿತ ಅವಧಿಗೆ ಚುನಾವಣೆ ಮಾಡದೆ ಚುನಾವಣೆಯನ್ನು ಮುಂದೂಡಲಾಗುತ್ತಿದೆ. ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಗ ಅನೂಪ್ ಗೆ ಪ್ರಾಥಮಿಕ ಸದಸ್ಯತ್ವ ಇಲ್ಲದಿದ್ದರೂ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯನನ್ನಾಗಿ ಮಾಡಲಾಗಿದೆ. ಎರಡು ಶೌಚಾಲಯ ದುರಸ್ತಿಗೆ 30 ಲಕ್ಷ ವೆಚ್ಚ ತೋರಿಸಲಾಗಿದೆ. ಲಾಕ್ಡೌನ್ ಸಮಯದಲ್ಲಿ ಸರ್ಕಾರದಿಂದ ಬಂದ ಹಣದಲ್ಲಿಯೂ ದುರಪಯೋಗ ಆಗಿರುವ ಗುಮಾನಿ ಇದೆ. ಹೀಗೆ ಸುಮಾರು 20 ಆರೋಪಗಳು ಚಲನಚಿತ್ರ ವಾಣಿಜ್ಯ ಮಂಡಳಿಯ ಮೇಲೆ ಮಾಡಲಾಗಿದೆ.


Click it and Unblock the Notifications











